ಮಂಗಳೂರು,ಮಾರ್ಚ್.27 ನಗರದ ಪಿ.ವಿ.ಎಸ್ – ಬಂಟ್ಸ್ ಹಾಸ್ಟೇಲ್ ರಸ್ತೆಯ ಮನೆಯ ಗೇಟಿನ ಮುಂಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 4೫ ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿದ್ದು, ಇದೊಂದು ಶಂಕಾಸ್ಪದ ಸಾವು ಎಂದು ಪೊಲೀಸರು ತಿಳಿಸಿದ್ದಾರೆ.
ಪಿವಿಎಸ್ ವೃತ್ತದಿಂದ ಸ್ವಲ್ಪ ದೂರವಿರುವ (ಬಂಟ್ಸ್ ಹಾಸ್ಟೇಲ್ ರಸ್ತೆ) ವಿಕ್ರಂ ಟ್ರಾವೆಲ್ಸ್ ಕಚೇರಿಯ ಸಮೀಪದ ಗ್ಯಾರೇಜ್ ಒಂದರ ಬಳಿಯ ಕಡಿದಾದ ಓಣಿಯಲ್ಲಿರುವ ಮನೆಯೊಂದರ ಗೇಟಿನ ಮುಂಭಾಗದಲ್ಲಿ ಇಂದು ಮುಂಜಾನೆ ಮೃತ ದೇಹ ಪತ್ತೆಯಾಗಿದ್ದು,ಈತ ಯಾರು ಎನ್ನುವ ಬಗ್ಗೆ ಯಾವುದೇ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.
ಈ ವ್ಯಕ್ತಿ ಕುಡಿದ ಅಮಲಿನಲ್ಲಿ ಈ ಆಳವಾದ ಈ ಸ್ಥಳದಲ್ಲಿ ಬಿದ್ದು ಮೃತಪಟ್ಟಿದ್ದಾನಾ… ಅಥವಾ ಯಾರದರೂ ಕೊಲೆ ಮಾಡಿರಬಹುದಾ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಮೃತ ದೇಹವನ್ನು ವೆನ್ ಲಾಕ್ ಶಾವಾಗಾರಕ್ಕೆ ಕೊಂಡೊಯ್ಯಲಾಗಿದೆ. ಪ್ರಕರಣ ದಾಖಾಲಿಸಿರುವ ಕದ್ರಿ ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹೆಚ್ಚುತ್ತಿರುವ ಶಂಕಾಸ್ಪದ ಸಾವು ಪ್ರಕರಣ :
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಈ ರೀತಿ ಅಪರಿಚಿತ ವ್ಯಕ್ತಿಗಳ ಶಂಕಾಸ್ಪದ ಸಾವು ಪ್ರಕರಣಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಈಗಗಾಲೇ ನಗರದ ನಾನಾ ಕಡೆಗಳಲ್ಲಿ ಅಪರಿಚಿತ ವ್ಯಕ್ತಿಗಳ ಶವಗಳು ಪತ್ತೆಯಾಗುತ್ತಿದ್ದು, ಅದರಲ್ಲಿ ಕೆಲವರ ಗುರುತು ಪತ್ತೆಯಾಗಿದ್ದಾರೆ. ಇನ್ನು ಕೆಲವು ವ್ಯಕ್ತಿಗಳ ಗುರುತು ಪತ್ತೆಯಾಗದೇ ವಾರಿಸುದಾರರಿಲ್ಲದ ಹಲವಾರು ಅನಾಥ ಶವಗಳು ನಗರದ ಸರಕಾರಿ ವೆನ್ ಲಾಕ್ ಆಸ್ಪತ್ರೆಯ ಶವಗಾರದಲ್ಲಿ ಹೆಚ್ಚುತ್ತಿರುವುದು ಕಾಣಬಹುದು.
ಕೆಲವು ಸಮಯಗಳ ಹಿಂದೆ, ಅತ್ತಾವರ ಕಟ್ಟೆ ಬಳಿ ಶವ ಪತ್ತೆ, ಬಳಿಕ ಕಣ್ಣೂರು ಬಳಿಯ ಅಂಗಡಿ ಮುಂದೆ ಒಂದು ಶವ ಪತ್ತೆಯಾಗಿದೆ, ಉರ್ವಾ ರಂಗ ಮಂದಿರದ ಜಗಲಿಯಲ್ಲಿ ಓರ್ವ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಬಳಿಕ ಕೆಲವೇ ದಿನಗಳ ಅಂತರದಲ್ಲಿ ಕೆ.ಎಸ್.ಆರ್.ಟಿ.ಸಿ ಬಳಿ ಎರಡು ಶವ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ ಮಣ್ಣಗುಡ್ಡೆ ಬಳಿ ಕಲ್ಲು ಎತ್ತಿಹಾಕಿ ವ್ಯಕ್ತಿಯೋರ್ವನ ಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದ್ದು, ಅ ವ್ಯಕ್ತಿ ಕೂಡ ಮರುದಿನ ಸಾವನ್ನಪ್ಪಿದ್ದಾನೆ. ಹೆಚ್ಚಿನ ಪ್ರಕರಣಗಳಲ್ಲಿ ಅಂಗಡಿ ಜಗಲಿಯಲ್ಲಿ ಮಲಗುವ ವ್ಯಕ್ತಿಗಳೇ ಹತ್ಯೆಯಾಗುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಬರೆಯಲು ಹೋದರೆ ಇಂಥಹ ಇನ್ನೂ ಹಲವಾರು ಪ್ರಕರಣಗಳ ಬಗ್ಗೆ ಒಂದು ದೊಡ್ಡ ಕಾದಂಬರಿಯೇ ಬರೆಯಬಹುದು.
ಆದರೆ ಇಷ್ಟೇಲ್ಲಾ ಪ್ರಕರಣಗಳು ನಡೆಯುತ್ತಿದ್ದರೂ ಜಿಲ್ಲಾಡಳಿತಾ ಮತ್ತು ಪೊಲೀಸ್ ಇಲಾಖೆ ಮಾತ್ರ ಯಾಕೆ ಇಂಥಹ ಪ್ರಕರಣಗಳ ಬಗ್ಗೆ ಗಂಭೀರಾ ಚಿಂತನೆ ಮಾಡುತ್ತಿಲ್ಲ ಎಂಬುವುದು ಅಶ್ಚರ್ಯವನ್ನುಂಟು ಮಾಡುತ್ತಿದೆ.