ಮಂಗಳೂರು,ಮಾರ್ಚ್ .07 : ವೆನ್ಲಾಕ್ ಆಸ್ಪತ್ರೆಯಲ್ಲಿ ಜನ ಸಂಜೀವಿನಿ ಜನರಲ್ ಮೆಡಿಕಲ್ ಸೆಂಟರ್ ನಿರ್ಮಾಣಕ್ಕೆ ಶನಿವಾರ ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರಿಂದ ಶಿಲಾನ್ಯಾಸ ನೆರವೇರಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೆನ್ ಲಾಕ್ ಜಿಲ್ಲಾ ಆಸ್ಪತ್ರೆ, ಹೆಚ್ ಎಲ್ ಎಲ್ ಲೈಫ್ ಕೇರ್ ಲಿಮಿಡೆಡ್ ಇದರ ಸಹಯೋಗದೊಂದಿಗೆ ಈ ಕಟ್ಟಡ ನಿರ್ಮಾಣಗೊಂಡಿದ್ದು ಇದಕ್ಕೆ ಯು.ಟಿ ಫರೀದ್ ಪೌಂಢೇಶನ್ ವತಿಯಿಂದ ಮುಕ್ತ ವಾಹನದ ಸಮರ್ಪಣಾಯನ್ನು ಕೂಡ ಈ ಕಾರ್ಯಕ್ರಮದಲ್ಲಿ ನಡೆಸಿಕೊಟ್ಟರು.
ಮೂರು ತಿಂಗಳೊಳಗಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜನಸಂಜೀವಿನಿ ಜನರಲ್ ಔಷಧಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು. ಮಾತ್ರವಲ್ಲದೇ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪನೆ ಮಾಡಿದ ಬಳಿಕ ತಾಲೂಕು ಕೇಂದ್ರಗಳಲ್ಲಿ ಔಷಧಿ ಕೇಂದ್ರಗಳನ್ನು ತೆರೆಯಲಾಗುವುದು. ಈ ಔಷಧಿ ಕೇಂದ್ರದಲ್ಲಿ ಸುಮಾರು 1000ಕ್ಕಿಂತಲೂ ಹೆಚ್ಚಿನ ಜೌಷಧಿಗಳು ಲಭ್ಯವಿದ್ದು, ಸಾಮಾನ್ಯ ಔಷಧಿಗಳಿಗೆ ಶೇ.80ರಷ್ಟು, ಹಾಗೂ ಉಳಿದ ಔಷಧಿಗಳು 10ಶೇ. ದಿಂದ 20ಶೇ.ದವರೆಗೆ ರಿಯಾಯಯಿತಿ ಇರುತ್ತದೆ. ಇದರಿಂದ ಹೊರಗಿನ ಮೆಡಿಕಲ್ ಗಳಲ್ಲೂ ಕಡಿಮೆ ದರದಲ್ಲಿ ಔಷಧಿಗಳು ದೊರೆಯುತ್ತವೆ ಎಂದು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಒಬ್ಬ ವ್ಯಕ್ತಿ ಮೃತಪಟ್ಟಲ್ಲಿ ಶವವನ್ನು ಮನೆಗೆ ಸಾಗಿಸಲು ಹಣದ ತೊಂದರೆ ಇರುವ ಬಡಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಯು.ಟಿ ಫರೀದ್ ಪೌಂಢೇಶನ್ ವತಿಯಿಂದ ಮುಕ್ತಿ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ದೇಶದಲ್ಲಿ ಪ್ರಥಮ ಬಾರಿಗೆ ರಾಜ್ಯ ಸರಕಾರ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗುವ ವ್ಯಕ್ತಿಯ 48 ಗಂಟೆಗಳ 25000 ವೆಚ್ಚದ ಚಿಕಿತ್ಸೆಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದರು.
ಶಾಸಕರಾದ ಮೊಯಿದೀನ್ ಬಾವಾ, ಜೆ.ಆರ್ ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮೆಯರ್ ಮಹಾಬಲ ಮಾರ್ಲ, ವೆನ್ಲಾಕ್ ಆಸ್ಪತ್ರೆ ಆಧೀಕ್ಷಕಿ ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.