ಕುಂದಾಪುರ: ಬೈಂದೂರು ಸಮೀಪದ ದರ್ಖಾಸ್ತು ಕಾಲೋನಿಯ ನಿವಾಸಿ ಕಾಂಕ್ರೀಟ್ (ಸೆಂಟ್ರಿಂಗ್) ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ಅಣ್ಣಪ್ಪ(೪೨) ತಮ್ಮ ಮನೆಯ ಹತ್ತಿರವಿದ್ದ ಗೇರುಮರಕ್ಕೆ ನೇಣುಬಿಗಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಆರ್ಥಿಕವಾಗಿ ಸದೃಢರಾಗಿದ್ದ ಅಣ್ಣಪ್ಪ ಆರೋಗ್ಯವಂತರಾಗಿಯೂ ಇದ್ದರು. ಕಳೆದ ಐದು ವರ್ಷಗಳ ಹಿಂದೆ ಹೆಂಡತಿಯಿಂದ ದೂರವಾಗಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ವಿಚ್ಛೇದನ ತನಿಖೆ ನಡೆಯುತ್ತಿದೆ. ಈ ಮಧ್ಯೆ ಹತ್ತಿರದ ತೊಂಡೆಹಿತ್ಲುವಿನ ಮಹಿಳೆಯನ್ನು ಮನೆಯಲ್ಲಿರಿಸಿ ಜೀವನ ಸಾಗಿಸುತ್ತಿದ್ದರು. ಯಾವುದೇ ಸಮಸ್ಯೆ ಇಲ್ಲದ ಇವರು ಯಾವ ಉದ್ದೇಶಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎನ್ನುವ ಕಾರಣ ನಿಗೂಢವಾಗಿದೆ.
ಅಣ್ಣನ ಸಾವಿನ ಹಿಂದೆ ಅನುಮಾನವಿದೆ ಎಂಬುದಾಗಿ ಸಹೋದರ ಆನಂದ ಬೈಂದೂರು ಠಾಣೆಗೆ ದೂರು ನೀಡಿದ್ದಾರೆ. ಬೈಂದೂರು ಠಾಣಾಧಿಕಾರಿ ಸಂತೋಷ ಕಾಯ್ಕಿಣಿ ದೂರು ದಾಖಲಿಸಿಕೊಂಡು ಶವದ ಮರಣೋತ್ತರ ಪರೀಕ್ಷೆ ನಡೆಸಿ ವೃತ್ತ ನಿರೀಕ್ಷಕ ಸುದರ್ಶನ್ ಎಂ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ.