ಉಡುಪಿ: ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದವರು ಕಳ್ಳನೊಬ್ಬನನ್ನು ಬಂಧಿಸಿ ಆತನಿಂದ 13,40,000 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೂಲತಃ ಉಡುಪಿ ತಾ| ಹಾವಂಜೆಯ ಗಣಿಬೆಟ್ಟು ಮನೆಯ ಪ್ರಸ್ತುತ ಮೂಡಬಿದಿರೆ ಕೋಟೆಬಾಗಿಲು ನಿವಾಸಿ ನವೀನ ಶೆಟ್ಟಿ ಯಾನೆ ಮಹಮ್ಮದ್ ನಜೀಮ್ (32) ಬಂಧಿತ ಆರೋಪಿ. ಈತನಿಂದ ಚಿನ್ನದ ಕರಿಮಣಿ ಸರ, ಉಂಗುರ, 2 ಸಪೂರ ಸರ ಹಾಗೂ ಯಾವುದೇ ದಾಖಲಾತಿ ಇಲ್ಲದ ಝೈಲೋ ಕಾರು (ಕೆಎ 41 ಎ 702), ನಂಬರ್ ನೊಂದಣಿಯೇ ಇಲ್ಲದ ಟಾಟಾ ಇಂಡಿಗೋ ಕಾರು ಮತ್ತು ಯಮಹಾ ಫೇಜರ್ ಬೈಕ್ (ಕೆಎ 20 ಕ್ಯೂ 9759) ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಿನ್ನದ ಸೊತ್ತುಗಳನ್ನು ಆತ ಮಣಿಪಾಲ ಠಾಣಾ ವ್ಯಾಪ್ತಿಯ ಸಂತೋಷ ನಗರದ ಅಶ್ರಫ್ ಅವರ ಮನೆಯಲ್ಲಿ ಕಳವುಮಾಡಿದ್ದ.
ಸೊತ್ತುಗಳು ಮತ್ತು ಆರೋಪಿಯನ್ನು ಮಣಿಪಾಲ ಠಾಣೆಗೆ ಹಸ್ತಾಂತರಿಸಲಾಗಿದ್ದು, ಮಣಿಪಾಲ ಪೊಲೀಸರು ಆರೋಪಿಯನ್ನು ಗುರುವಾರ ರಾತ್ರಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಎಸ್ಪಿ ಅಣ್ಣಾಮಲೈ ಕೆ. ಅವರ ನಿರ್ದೇಶನ, ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್, ಡಿವೈಎಸ್ಪಿ ಚಂದ್ರಶೇಖರ ಕೆ.ಎಂ. ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ಇನ್ಸ್ಪೆಕ್ಟರ್ ಟಿ.ಆರ್. ಜೈಶಂಕರ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಎಎಸ್ಐ ರೊಸಾರಿಯಾ ಡಿಸೋಜ, ಸಿಬಂದಿ ರವಿಚಂದ್ರ, ಸುರೇಶ್, ಚಂದ್ರ ಶೆಟ್ಟಿ, ಸಂತೋಷ್ ಅಂಬಾಗಿಲು, ಸಂತೋಷ್ ಕುಂದರ್, ರಾಮು ಹೆಗ್ಡೆ, ಪ್ರವೀಣ, ರಾಘವೇಂದ್ರ ಉಪ್ಪುಂದ, ಥಾಮ್ಸನ್, ಶಿವಾನಂದ, ದಿನೇಶ್ ಮತ್ತು ವಾಹನ ಚಾಲಕ ಚಂದ್ರಶೇಖರ್ ಪಾಲ್ಗೊಂಡಿದ್ದರು.