ಮೂಡುಬಿದಿರೆ,ಫೆ.25: `ಈಸ್ಟ್ ಇಂಡಿಯಾ ಎಕ್ಸಪ್ರೆಸ್’ ಎಂಬ ಯೋಜನೆಯ ಮೂಲಕ 2014ರ ಅಕ್ಟೋಬರ್ 25ರಿಂದ ಮೊದಲ್ಗೊಂಡು 13 ದೇಶಗಳಲ್ಲಿ 9,700 ಕಿ.ಮೀ ಕ್ರಮಿಸಿ ಸಾಧನೆ ಮಾಡಿರುವ ಮಂಗಳೂರು ಮೂಲದ ಸುಶಾಂತ್ ಶೆಟ್ಟಿ ಮಂಗಳವಾರ ಮೂಡುಬಿದಿರೆಗೆ ಭೇಟಿ ನೀಡಿದರು. ಕುದುರೆಮುಖ ಘಾಟಿ, ಆಗುಂಬೆ ಘಾಟಿ ಹಾಗೂ ಚಾರ್ಮಾಡಿ ಘಾಟಿ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಲು ನಿರ್ಧರಿಸಿದ ಸುಶಾಂತ್ ಅವರನ್ನು ಮೂಡುಬಿದಿರೆಯಲ್ಲಿ ತ್ರಿಭುವನ್ ಅಟೋ ಮೋಟಿವ್ ಕ್ಲಬ್, ಬೆದ್ರ ಅಡ್ವೇಚರ್ಸ್ ಕ್ಲಬ್ ಹಾಗೂ ಜೇಸಿಐ ತ್ರಿಭುವನ್ ಸ್ವಾಗತಿಸಿಕೊಂಡಿತು.
ತ್ರಿಭುವನ್ ಅಟೋ ಮೋಟಿವ್ ಕ್ಲಬ್ ಅಧ್ಯಕ್ಷ, ಚೌಟರ ಅರಮನೆಯ ಕುಲದೀಪ್ ಎಂ.,ಬೆದ್ರ ಅಡ್ವೇಚರ್ಸ್ನ ಅಧ್ಯಕ್ಷ ಅಕ್ಷಯ್, ಜೇಸಿಐ ಅಧ್ಯಕ್ಷ ಧೀರೇಂದ್ರ ಜೈನ್, ಪದಾಧಿಕಾರಿಗಳಾದ ಶ್ರೇಷ್ಠಾ ಶೆಟ್ಟಿ, ಸಂಪತ್ ಕುಮಾರ್, ಸಂಪತ್ ಜೈನ್, ಅಬು ಅಲಾ ಪುತ್ತಿಗೆ, ಮಹೀಂದ್ರವರ್ಮ, ಮಹಮ್ಮದ್ ಆರೀಫ್ ಉಪಸ್ಥಿತರಿದ್ದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲಂಡನ್ನಲ್ಲಿ ಇಂಜಿನಿಯರ್ ಆಗಿರುವ ಸುಶಾಂತ್, ಸುಜುಕಿ ಅಯಬೂಝಾ ಬೈಕ್ನಲ್ಲಿ 6ತಿಂಗಳು ಯೋಜನೆಯನ್ನು ರೂಪಿಸಿದ್ದು, 12 ಸಾವಿರ ಕಿ.ಮೀ ಕ್ರಮಿಸುವ ಗುರಿಯಿತ್ತು. ಪಾಕಿಸ್ತಾನದ ವೀಸಾ ಸಿಗದ ಕಾರಣ 9,700 ಕಿ.ಮೀ ಕ್ರಮಿಸಲು ಸಾಧ್ಯವಾಯಿತು. ರೇಸ್ ಡೈನಾಮಿಕ್, ಬ್ರಿಡ್ಜ್ಸ್ಟೋನ್, ಗಾರ್ಮೆನ್, ಎನ್ಎಂಟಿ ಸಂಸ್ಥೆಗಳು ಒಟ್ಟು 30 ಲಕ್ಷದ ಪ್ರಾಯೋಜಕತ್ವ ನೀಡಿದ್ದರು. ಲಂಡನ್,ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಆಸ್ಟ್ರಿಯಾ, ಸ್ಲೋಮೋನಿಯಾ, ಕ್ರೋಶಿಯಾ, ಸೆರ್ಬಿಯಾ, ಬೆಲ್ಜಿರಿಯಾ, ಟರ್ಕಿ, ಇರಾನ್, ದುಬೈ ದೇಶಗಳನ್ನು ಬೈಕ್ ಸವಾರಿಯ ಮೂಲಕ ಸಂದರ್ಶಿಸಿದ್ದೇನೆ. ಜರ್ಮನಿಯಲ್ಲಿ ವಾಹನಗಳಿಗೆ ವೇಗಮಿತಿ ನಿರ್ಭಂದವಿಲ್ಲದೇ ಇರುವುದರಿಂದ ಗಂಟೆಗೆ 290 ಕಿ.ಮೀ ವೇಗದಲ್ಲಿ ಬೈಕ್ ಓಡಿಸಿದ್ದು ಅಪೂರ್ವ ಅನುಭವ. ಮೊದಲು ಅರೆಮನಸ್ಸಿನಿಂದ ಒಪ್ಪಿದ ಪಾಲಕರು, ಬಳಿಕ ಸಂಪೂರ್ಣವಾಗಿ ಪ್ರೋತ್ಸಾಹಿಸಿದರಿಂದ ಸಾಧನೆ ಸುಲಭವಾಗಿದೆ ಎಂದರು.