ಮಂಗಳೂರು,ಫೆ.23 : ಮಂಗಳೂರಿನ ಇತಿಹಾಸ ಪ್ರಸಿದ್ಧ ದೇವಾಲಯವಾದ ಶ್ರೀ ಮಂಗಳಾದೇವಿ ದೇವಸ್ಥಾನ ಹಾಗೂ ಬೋಳಾರದ ಮಾರಿಯಮ್ಮ ದೇವಾಲಯದೊಂದಿಗೆ ಅವಿನಾನುಭಾವ ಸಂಬಂಧ ಹೊಂದಿದ್ದ ಮಂಗಳೂರಿನ ಪ್ರಮುಖ ತೀರ್ಥಕೆರೆ ಗುಜ್ಜರಕೆರೆ ಇದೀಗ ಕೊಳಚೆ ನೀರಿನ ಆವಾಸಸ್ಥಾನವಾಗಿ ಮಾರ್ಪಟ್ಟು, ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿರುವುದರಿಂದ ಈ ಕೆರೆಗೆ ಶುದ್ಧ ನೀರಿನ ನೆಲೆಯಾಗಿ ಪರಿವರ್ತಿಸಲು ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಗೆ ಇಂದು ಯೋಗ ಕೂಡಿ ಬಂದಿದೆ.
ಗುಜ್ಜರಕೆರೆಯ ದುಸ್ಥಿತಿಯ ಬಗ್ಗೆ ಸ್ಥಳೀಯ ಜನರಿಂದ ಕಳೆದ 12 ವರ್ಷಗಳಿಂದ ಹೋರಾಟಗಳು ನಡೆಯುದಿದ್ದು, ಇದೀಗ ಇದಕ್ಕೆ ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಿ ಸರಕಾರ ಸಣ್ಣ ನೀರಾವರಿ ಇಲಾಖೆ ಮೂಲಕ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದೆ.
ಗುಜ್ಜರಕೆರೆಯ ನವೀಕರಣಗೊಳಿಸುವ ನಿಟ್ಟಿನಲ್ಲಿ ಸೋಮವಾರ ಗುದ್ದಲಿಪೂಜೆಯನ್ನು ಶಾಸಕ ಜೆ.ಆರ್ ಲೋಬೋ ಅವರು ನೆರವೇರಿಸಿದರು. ಈ ಹಿಂದೆ ಗುಜ್ಜರಕೆರೆಯನ್ನು ಅಭಿವೃದ್ಧಿಗೊಳಿಸಲು ಕ್ರಮಗಳನ್ನು ಕೈಗೊಂಡ ಮಂಗಳೂರು ಮಹಾನಗರ ಪಾಲಿಕೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿತ್ತು. ಗುಜ್ಜರಕೆರೆ ಹಾಳಾಗಲು ಕಾರಣವಾಗಿದ್ದ ಚರಂಡಿ ನೀರಿಗೆ ಮುಕ್ತಿ ಒದಗಿಸಿ ಕೊಡಲು ಚಿಂತನೆ ನಡೆಸಿತ್ತು. ಚರಂಡಿಯ ಗಲೀಜು ನೀರು ಕೆರೆಯನ್ನು ಸೇರದಂತೆ ತಡೆಗೋಡೆಯನ್ನು ನಿರ್ಮಿಸುವುದರ ಜೊತೆಗೆ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದ ಕೆರೆಯ ಅಭಿವೃದ್ಧಿ ಕಾಮಗಾರಿಗಳನ್ನು ಪುನರಾರಂಭಿಸಿತ್ತು.
ಚರಂಡಿ ನೀರು ಸೇರಿದಂತೆ ಇನ್ಯಾವುದೇ ತ್ಯಾಜ್ಯಗಳು ಕೆರೆಯನ್ನು ಸೇರದಂತೆ ತಡೆಗೋಡೆ ರಚಿಸಿದ್ದು, ಈ ಮೂಲಕ ಕೆರೆಯ ಅಭಿವೃದ್ಧಿಯತ್ತ ಚಿಂತನೆ ನಡೆಸಿತ್ತು.ಇದೀಗ ಸರಕಾರ ಸಣ್ಣ ನೀರಾವರಿ ಇಲಾಖೆ ಮೂಲಕ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದ್ದು,ಕಾಮಗಾರಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಮತ್ತು ಸದ್ಯದಲ್ಲೇ ಅಭಿವೃದ್ದಿ ಕಾಮಗಾರಿ ಕೂಡ ಆರಂಭವಾಗಲಿದೆ.
ಹೊರ ಪ್ರದೇಶದಿಂದ ಬರುವ ಕೊಳಚೆ ನೀರನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಅನುಸರಿಸಲಾಗುತ್ತಿದೆ.ಹಾಗೂ ಒತ್ತುವರಿಯಾದಂತಹ ಕೆರೆಯ ಜಾಗದ ಮರುವಶಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.ಮಾತ್ರವಲ್ಲದೇ ಕೆರೆಯ ಸುತ್ತಲೂ ಸುಂದರವಾದ ಗಾರ್ಡನ್ ನಿರ್ಮಾಣಗೊಳ್ಳಲಿದೆ ಎಂದು ಜೆ ಆರ್ ಲೋಬೋ ಅವರು ಈ ಸಂದರ್ಭದಲ್ಲಿ ತಿಳಿಸಿದರು.