ಮಂಗಳೂರು,ಫೆ.23 : ಕ್ರೈಸ್ತ ಸಮುದಾಯದವರನ್ನು ರಾಜಕೀಯ, ಸರಕಾರಿ ಉದ್ಯೋಗ ಕ್ಷೇತ್ರಕ್ಕೆ ಬರುವಂತೆ ಪ್ರೇರಣೆ, ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಅಬಕಾರಿ ಡೆಪ್ಯುಟಿ ಕಮಿಷನರ್ ಜಾರ್ಜ್ ಪಿಂಟೊ ಹೇಳಿದರು.ಅವರು ನಗರದ ಮಿಲಾಗ್ರಿಸ್ ಜ್ಯುಬಿಲಿ ಹಾಲ್ನಲ್ಲಿ ಭಾನುವಾರ ಫುಡಾರ್ ಪ್ರತಿಷ್ಠಾನ ಸಂಸ್ಥೆ ವತಿಯಿಂದ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 10ನೇ ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆಗಳಲ್ಲಿ 2013-14ನೇ ಸಾಲಿನಲ್ಲಿ ಅತ್ಯಧಿಕ ಅಂಕ ಪಡೆದ ಹಾಗೂ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣದಲ್ಲಿ ರ್ಯಾಂಕ್ ಪಡೆದ ಪ್ರತಿಭಾನ್ವಿತರಿಗೆ ಫುಡಾರ್ ಪ್ರತಿಷ್ಠಾನ್ ಪುರಸ್ಕಾರ್ – 2015 ಪ್ರದಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ದಿಕ್ಸೂಚಿ ಭಾಷಣ ಮಾತನಾಡಿದರು.
ಕ್ರೈಸ್ತ ಸಮುದಾಯದವರು ರಾಜಕೀಯದಲ್ಲಿ ಹಾಗೂ ಸರಕಾರಿ ಉದ್ಯೋಗದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಐಎಎಸ್, ಐಪಿಎಸ್ ಅಧಿಕಾರಿಗಳ ಸಂಖ್ಯೆ ಅತ್ಯಲ್ಪವಾಗಿದೆ. ಶೇ.30ರಷ್ಟು ಶಿಕ್ಷಣ ಸಂಸ್ಥೆಗಳು ಕ್ರೈಸ್ತ ಸಮುದಾಯದಲ್ಲಿದ್ದರೂ, ಸರಕಾರಿ ಉದ್ಯೋಗದಲ್ಲಿರುವವರ ಸಂಖ್ಯೆ ಕೇವಲ ಶೇ. 2ರಷ್ಟು ಮಾತ್ರ. ರಾಜಕೀಯ ಮತ್ತು ಸರಕಾರಿ ಉದ್ಯೋಗ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದವರು ಬಂದಾಗ ಕ್ರೈಸ್ತ ಸಮುದಾಯದ ಸೇವೆಯೊಂದಿಗೆ ಉಳಿದ ಸಮುದಾಯದ ಸೇವೆ ಮಾಡಲು ಅವಕಾಶ ಲಭಿಸುತ್ತದೆ ಎಂದು ಅವರು ಹೇಳಿದರು.
ಪ್ರಸ್ತುತ ಸರಕಾರಿ ಉದ್ಯೋಗದಲ್ಲಿ ಉತ್ತಮ ಸಂಬಳ, ವಿಶೇಷ ರೀತಿಯಲ್ಲಿ ಸಮಾಜ ಸೇವೆ ಮಾಡುವ ಅವಕಾಶ, ತಮ್ಮ ಸಮಾಜದ ನೆರವು ನೀಡುವ ಅವಕಾಶ ಕೂಡ ಲಭಿಸುತ್ತದೆ. 1978ರ ಬಳಿಕ ಯಾವುದೇ ಕ್ರೈಸ್ತ ಸಮುದಾಯದವರು ನೇರ ಐಎಎಸ್ ತೇರ್ಗಡೆಯಾಗಿ ಸೇವೆಗೆ ಸೇರಿದ್ದಿಲ್ಲ. ಈ ನಿಟ್ಟಿನಲ್ಲಿ ಫುಡಾರ್ನಂತಹ ಸಂಸ್ಥೆಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಯುವ ಸಮುದಾಯವನ್ನು ಸಿದ್ಧತೆ ನಡೆಸುವಂತೆ ಪ್ರೋತ್ಸಾಹ ನೀಡಬೇಕು ಎಂದರು.
ಇಂದಿನ ಯುವ ಸಮುದಾಯ ಮಾದಕ ದ್ರವ್ಯ ವ್ಯಸನಕ್ಕೆ ಗುರಿಯಾಗುತ್ತಿರುವುದು ಅತ್ಯಂತ ಆಘಾತಕಾರಿ ವಿಷಯವಾಗಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಿಂದಲೂ ನಾವು ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಜಾರ್ಜ್ ಪಿಂಟೋ ಹೇಳಿದರು. ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅವರು 151 ಮಂದಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಶುಭ ಹಾರೈಸಿದರು.
ಫುಡಾರ್ ಅಧ್ಯಕ್ಷ ಜೋನ್ ಡಿಸಿಲ್ವ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕೆಥೊಲಿಕ್ ಸಭಾ ಅಧ್ಯಕ್ಷೆ ಫ್ಲೇವಿ ಡಿಸೋಜ, ಕೆಥೋಲಿಕ್ ಸಭಾ ಉಡುಪಿಯ ಪ್ರಧಾನ ಕಾರ್ಯದರ್ಶಿ ಮೇರಿ ಡಿಸೋಜಾ ಅತಿಥಿಯಾಗಿದ್ದರು.
ಪ್ರತಿಷ್ಠಾನದ ಕಾರ್ಯದರ್ಶಿ ಎಲ್.ಜೆ.ಫರ್ನಾಂಡಿಸ್, ಸಂತೋಷ್ ಡಿಸಿಲ್ವ, ಲ್ಯಾನ್ಸಿ ಡಿ ಕುನ್ಹಾ, ನೈಜಿಲ್ ಪಿರೇರಾ ಉಪಸ್ಥಿತರಿದ್ದರು. ವಿಲ್ರಾಯ್ ಕ್ರಾಸ್ತಾ ಸ್ವಾಗತಿಸಿದರು. ಜೋಸೆಫ್ ನಜರತ್ ಮತ್ತು ಫ್ಲೋರಾ ಕ್ಯಾಸ್ಟಲಿನೋ ಕಾರ್ಯಕ್ರಮ ನಿರೂಪಿಸಿದರು.