ಕುಂದಾಪುರ: ಫೆ. 21 ರಂದು ಸಂಜೆ 6 ಕ್ಕೆ ಕೋಟೇಶ್ವರದ ಯವ ಮೆರಿಡಿಯನ್ನ ಒಪೆರಾ ಪಾರ್ಕ್ನಲ್ಲಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ತಮ್ಮ ಕಂಠ ಸಿರಿಯ ಮೂಲಕ ದಾಖಲೆ ಸೃಷ್ಠಿಸಿರುವ ಗಾಯಕಿ ಎಸ್. ಜಾನಕಿಯವರನ್ನು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅಭಿನಂದಿಸುವ ಸಮಾರಂಭ ಕುಂದಾಪುರದ ಡಾ. ಎಸ್. ಜಾನಕಿ ಅಭಿನಂದನಾ ಸಮಿತಿ ವತಿಯಿಂದ ನಡೆಯಲಿದೆ.
58 ಸಾವಿರ ಗೀತೆಗಳ ಹೆಗ್ಗಳಿಕೆ : ಕರ್ನಾಟಕ ಕರಾವಳಿಯ ಜಿಲ್ಲೆಗಳಲ್ಲೇ ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆಯ ಜನತೆಯಿಂದ ಅಭಿನಂದನೆ ಸ್ವೀಕರಿಸಲಿರುವ ಎಸ್. ಜಾನಕಿಯವರು ಕುಂದಾಪುರಕ್ಕೆ ಆಗಮಿಸುತ್ತಿರುವುದು ಸಂಗೀತ ಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ. 17 ಭಾಷೆಗಳಲ್ಲಿ ೫೮ ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ ಹೆಗ್ಗಳಿಕೆ ಇವರದು. ದೇಶ ವಿದೇಶಗಳಲ್ಲಿ ತಮ್ಮ ಕಂಠ ಸಿರಿಯ ಮೋಡಿಯ ಮೂಲಕ ಕೋಟ್ಯಾಂತರ ಜನರ ಹೃದಯದಲ್ಲಿ ಸ್ಥಾನ ಪಡೆದ ಜಾನಕಿಯವರು ೧೫೮ಕ್ಕೂ ಹೆಚ್ಚು ಗೌರವಾನ್ವಿತ ಪ್ರಶಸ್ತಿಗನ್ನು ತಮ್ಮದಾಗಿಸಿ ಕೊಂಡವರು.
ಗೌರವಾರ್ಪಣೆ : ಕುಂದಾಪುರದ ಡಾ. ಎಸ್. ಜಾನಕಿ ಅಭಿನಂದನಾ ಸಮಿತಿ ವತಿಯಿಂದ ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಎಸ್. ಜಾನಕಿಯವರನ್ನು ಗೌರವಪೂರ್ವಕ ಸನ್ಮಾನಿಸಲಿದ್ದು, ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್, ಇನ್ನಿತರರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಡಾ. ಸತೀಶ್ ಪೂಜಾರಿ ಸಾರಥ್ಯ : ಇದೇ ಸಂದರ್ಭದಲ್ಲಿ ಡಾ. ಎಸ್. ಜಾನಕಿಯವರ ಉಪಸ್ಥತಿಯಲ್ಲಿ ಅವರು ಹಾಡಿರುವ 24 ಸುಮಧುರ ಗೀತೆಗಳನ್ನು ಗಾಯಕ ಡಾ. ಸತೀಶ್ ಪೂಜಾರಿಯವರ ನೇತೃತ್ವದಲ್ಲಿ ಕರ್ನಾಟಕ ಕರಾವಳಿಯ ಪ್ರಸಿದ್ಧ ಗಾಯಕರಿಂದ ಅಂದು ಸಂಜೆ ೬ರಿಂದ ಪ್ರಸ್ತುತ ಪಡಿಸಲಾಗುತ್ತಿದೆ. ಸಾಮಗಾನ ಕೋವಿದೆ.., ಪೂಜಿಸಲೆಂದೆ ಹೂಗಳ ತಂದೆ.., ಮೂಡಲಮನೆಯ ಮುತ್ತಿನ ನೀರಿನ.., ಬಾನಲ್ಲೂ ನೀನೇ.., ಗಗನವು ಎಲ್ಲೋ.., ಒಮ್ಮೆ ನಿನ್ನನ್ನು ಕಣ್ತುಂಬಾ.., ನಗುವ ನಯನ.., ಜೀವ ವೀಣೆ.., ಎಲ್ಲೆಲ್ಲಿ ನೋಡಲಿ.., ತಂನಂ ತಂನಂ ನನ್ನಿ ಮನಸ್ಸು ಮಿಡಿಯುತ್ತಿದೆ.. ಹೀಗೆ ಕನ್ನಡ ಚಿತ್ರರಂಗಕ್ಕೆ ಡಾ. ಎಸ್. ಜಾನಕಿಯವರು ನೀಡಿದ ಗೀತೆಯ ಕೊಡುಗೆಯನ್ನು ಮೆಲಕು ಹಾಕುವ ಆ ಮೂಲಕ ಸಂಗೀತ ರಸಸಂಜೆಯನ್ನು ನೀಡುವತ್ತ ಸಂಘಟಕರು ಮುತುವರ್ಜಿವಹಿಸಿದ್ದಾರೆ.
ಉಚಿತ ಪಾಸ್ : ಡಾ. ಎಸ್. ಜಾನಕಿ ಅಭಿನಂದನಾ ಸಮಾರಂಭ ಅಚ್ಚುಕಟ್ಟಾಗಿ ನೆಡೆಸುವ ಉದ್ದೇಶದಿಂದ ಈಗಾಗಲೇ ಪೂರ್ವ ಸಿದ್ಧತೆಗಳು ಭರದಿಂದ ಸಾಗಿದ್ದು, ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗದಂತೆ ಭಾಗವಹಿಸುವ ಅಭಿಮಾನಿಗಳಿಗೆ ಹಾಗೂ ಸಂಗೀತಾಸಕ್ತರಿಗೆ ಮುಂಗಡವಾಗಿ ಉಚಿತ ಪಾಸ್ನ್ನು ನೀಡಲಾಗುತ್ತಿದೆ. ಕುಂದಾಪುರದ ಶ್ರೀ ಮಾತಾ ಆಸ್ಪತ್ರೆ, ಜೆಪಿಎಸ್ ಕ್ರೀಯೇಶನ್ಸ್, ವೈ ಓ ಗ್ಯಾಲರಿ, ಕೋಟೇಶ್ವರದ ಯುವ ಮೆರಿಡಿಯನ್, ಮಾರುತಿ ಫರ್ನಿಚರ್ಸ್, ಕೋಟದ ಟ್ರಾವೆಲ್ ಲಿಂಕ್ಸ್, ಬ್ರಹ್ಮಾವರದ ಮದರ್ ಪ್ಯಾಲೆಸ್, ಉಡುಪಿಯ ನೈನಾ ಫ್ಯಾನ್ಸಿಯಲ್ಲಿ ಉಚಿತ ಪಾಸ್ಗಳು ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 7760756822, 9341035566ನ್ನು ಸಂಪರ್ಕಿಸಬಹುದಾಗಿದೆ. ಸಂಗೀತಾಸಕ್ತರು ಹಾಗೂ ಡಾ. ಎಸ್. ಜಾನಕಿ ಅವರ ಅಭಿಮಾನಿಗಳು ಈ ಅಪೂರ್ವ ಕಾರ್ಯಕ್ರಮದಲ್ಲಿ ಸಾಕ್ಷಿಗಳಾಗಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.