ಮಂಗಳೂರು, ಫೆ.15 : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಸಿರಿ ತೋಟಗಾರಿಕೆ ಸಂಘದ ಆಶ್ರಯದಲ್ಲಿ ಫೆ.17ರವರೆಗೆ ಕದ್ರಿ ಉದ್ಯಾನವನದಲ್ಲಿ ಅಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಶನಿವಾರ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಫಲಪುಷ್ಪ ಪ್ರದರ್ಶನವನ್ನು ಅತ್ಯುತ್ತಮ ರೀತಿಯಲ್ಲಿ ವ್ಯವಸ್ಥೆಗೊಳಿ ಸಲಾಗಿದೆ. ಸಾರ್ವಜನಿಕರು ತೋಟಗಾರಿಕಾ ಇಲಾಖೆ ಯಿಂದ ರೈತರಿಗೆ ದೊರೆಯುವ ಸವಲತ್ತುಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಮೇಯರ್ ಮಹಾಬಲ ಮಾರ್ಲ, ಕಾರ್ಪೊರೇಟರ್ ರೂಪಾ ಡಿ. ಬಂಗೇರ, ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷೆ ಲಕ್ಷ್ಮೀರಾವ್ ಆರೂರು, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೇಶ್ ಎಚ್.ಆರ್. ಮೊದಲಾದವರು ಉಪಸ್ಥಿತರಿದ್ದರು.
ಕಣ್ಮನ ಸೆಳೆಯುವ ನಾನಾ ವಿಧದ ಹೂವುಗಳು, ತರಕಾರಿ ಗಿಡಗಳ ಜೊತೆ ವಿವಿಧ ಮಳಿಗೆಗಳು ಪ್ರದರ್ಶನದಲ್ಲಿ ಪಾಲು ಪಡೆದಿದ್ದರೆ, ಪ್ರದರ್ಶನದ ಪ್ರವೇಶ ದ್ವಾರದ ಬಳಿ ಇರುವ ಮಿಷನ್ ಮಂಗಳಯಾನ ಮಾದರಿ ಆಕರ್ಷಣೀಯವಾಗಿ ಮೂಡಿ ಬಂದಿದೆ.
12.5 ಅಡಿ ಎತ್ತರದ ಮಿಷನ್ ಮಂಗಳಯಾನ ಮಾದರಿಯನ್ನು 15 ಸಾವಿರ ಗುಲಾಬಿ ಹೂಗಳಿಂದ ತಯಾರಿಸಲಾಗಿದೆ.