ಮಂಗಳೂರು,ಫೆ.13 : ದ.ಕ. ಜಿಪಂನ ತೋಟಗಾರಿಕೆ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ಸಿರಿ ತೋಟಗಾರಿಕೆ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ಫೆ .14ರಿಂದ 17ರ ತನಕ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಯೋಗೇಶ್ ಎಚ್.ಆರ್ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಬಾರಿ ಪ್ರದರ್ಶನದ ವಿಶೇಷತೆಯಾಗಿ ಮಂಗಳಯಾನದ ಸಾಧನೆಯನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಮಂಗಳಯಾನವನ್ನು ಬಿಂಬಿಸುವ ಮಾದರಿಯನ್ನು ಸುಮಾರು 80,000 ಡಚ್ ಗುಲಾಬಿ ಹೂಗಳಲ್ಲಿ ರೂಪಿಸಲಾಗುತ್ತಿದೆ ಎಂದರು.
14ರಂದು ಅಪರಾಹ್ನ 3ಕ್ಕೆ ಪ್ರದರ್ಶನ ಉದ್ಘಾಟನೆಗೊಳ್ಳಲಿದ್ದು, ಪ್ರತಿದಿನ ಬೆಳಗ್ಗೆ 8ರಿಂದ ರಾತ್ರಿ 9ರ ತನಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 14ರಂದು ಸಂಜೆ 5ಕ್ಕೆ ಕಲ್ಲಚ್ಚು ಪ್ರಕಾಶನದ ಆಶ್ರಯದಲ್ಲಿ ಬಹುಭಾಷಾ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದವರು ಹೇಳಿದರು.
ಕಳೆದ 3-4 ವರ್ಷಗಳಿಂದ ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿತ್ತು. ಆದರೆ ಪ್ರದರ್ಶನಕ್ಕೆ ತಗಲುತ್ತಿರುವ ವೆಚ್ಚವನ್ನು ಸರಿತೂಗಿಸುವ ದೃಷ್ಟಿಯಿಂದ ಈ ವರ್ಷದಿಂದ ಪ್ರದರ್ಶನಕ್ಕೆ ವಯಸ್ಕರಿಗೆ 10 ರೂ. ಹಾಗೂ ಮಕ್ಕಳಿಗೆ 5 ರೂ. ಪ್ರವೇಶ ಶುಲ್ಕ ವಿಧಿಸಲಾಗಿದೆ. ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಗುಂಪಿನಲ್ಲಿ ಬಂದಲ್ಲಿ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಶಾಲೆಗಳು ಮುಂಚಿತವಾಗಿ ಸಂಪರ್ಕಿಸುವಂತೆ ಕೋರಲಾಗಿದೆ ಎಂದು ಯೋಗೇಶ್ ಎಚ್.ಆರ್. ತಿಳಿಸಿದರು.
ಸಿರಿ ತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಲಕ್ಷ್ಮೀರಾವ್ ಆರೂರು, ಜತೆ ಕಾರ್ಯದರ್ಶಿ ಕೆ.ನೇಮಿರಾಜ್ ಕೊಂಡೆ, ಕೋಶಾಧಿಕಾರಿ ಎನ್.ವಿ.ಕೆ.ಭಟ್ರಕೋಡಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಸದಸ್ಯರಾದ ಜುಡಿತ್ ಮಸ್ಕರೇನ್ಹಸ್, ಶಾರದಾ ಆಚಾರ್ ಉಪಸ್ಥಿತರಿದ್ದರು.