ಕನ್ನಡ ವಾರ್ತೆಗಳು

ಚರ್ಮರೋಗ ಚಿಕಿತ್ಸಾ ತಜ್ಞರ 43 ನೇ ರಾಷ್ಟ್ರೀಯ ಬೃಹತ್ ಸಮಾವೇಶ ಡರ್ಮಾಕೊನ್ ಉದ್ಘಾಟನೆ

Pinterest LinkedIn Tumblr

derma_kon_photo_1

ಮಂಗಳೂರು,ಫೆ.13  : ಚರ್ಮರೋಗ ಚಿಕಿತ್ಸೆಯ ಔಷಧಗಳಲ್ಲಿ ಅತೀಯಾದ ಸ್ಟಿರಾಯ್ಡ್ ಬಳಕೆ ನಿಯಂತ್ರಣದ ಕುರಿತು ಕೇಂದ್ರ ಸರಕಾರದ ಗಮನ ಸೆಳೆಯಲಾಗುವುದು ಎಂದು ವೈದ್ಯೆ ಹಾಗೂ ಸಂಸದೆ ಡಾ. ಪ್ರೀತಮ್ ಗೋಪಿನಾಥ ಮುಂಡೆ ಹೇಳಿದರು.

ನಗರದ ಡಾ. ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಿರುವ ಚರ್ಮರೋಗ ಚಿಕಿತ್ಸಾ ತಜ್ಞರ 43 ನೇ ರಾಷ್ಟ್ರೀಯ ಬೃಹತ್ ಸಮಾವೇಶ ಡರ್ಮಾಕೊನ್ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

derma_kon_photo_3 derma_kon_photo_2

ಔಷಧಗಳಲ್ಲಿ ಅತೀಯಾದ ಸ್ಟಿರಾಯ್ಡ್ ಬಳಕೆ ರೋಗಿಗಳ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಇದರ ನಿಯಂತ್ರಣ ಅಗತ್ಯ. ಸ್ವತಃ ವೈದ್ಯೆಯಾಗಿ ಮತ್ತು ಸಂಸದೆಯಾಗಿ ಸಂಸತ್‌ನಲ್ಲಿ ಧ್ವನಿ ಎತ್ತುತ್ತೇನೆ ಎಂದರು. ಯುವ ವೈದ್ಯರು ಕಾಸ್ಮೊಟೋಲಾಜಿ ಹಿಂದೆ ಬೀಳುವ ಬದಲು ಕ್ಲಿನಿಕಲ್ ಚರ್ಮರೋಗ ಚಿಕಿತ್ಸೆಯ ಬಗ್ಗೆ ಒತ್ತು ನೀಡಬೇಕು ಎಂದರು.

ಅಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ: ಚರ್ಮರೋಗ ತಜ್ಞೆಯಾದ ನಾನು ನನ್ನ ತಂದೆಯ ಸಾವಿನಿಂದಾಗಿ ಅಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ದೇಶದ ಇತಿಹಾಸದಲ್ಲಿ ಅತೀ ಹೆಚ್ಚು ಅಂದರೆ ಸುಮಾರು 7ಲಕ್ಷ ಮತಗಳ ಅಂತರದಿಂದ ಚುನಾಯಿತನಾಗಿದ್ದೇನೆ. ಇದು ಜನತೆ ನಮ್ಮ ತಂದೆಯಲ್ಲಿ ಇಟ್ಟಿರುವ ಗೌರವಾದ ಪ್ರತೀಕವಾಗಿದೆ. ಮೊದಲು ಚರ್ಮರೋಗಕ್ಕೆ ಚಿಕಿತ್ಸೆ ನೀಡುತ್ತಿದ್ದರೆ, ಇದೀಗ ರಾಜಕೀಯಕ್ಕೆ ಬಂದ ಬಳಿಕ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗುತ್ತದೆ ಎಂದರು.

ಸಂಸ್ಥೆಯ ನೂತನ ಅಧ್ಯಕ್ಷ ವೆಂಕಟರಾಮ್ ಮೈಸೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆ ವತಿಯಿಂದ ನಾನಾ ಜನಪರ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಡರ್ಮ್ ಸೇವಾ ಆ್ಯಪ್‌ನ್ನು ಪರಿಚಯಿಸಲಾಗುತ್ತದೆ. ಈ ಆ್ಯಪ್‌ನ ಮೂಲಕ ಗ್ರಾಮೀಣ ಪ್ರದೇಶದ ರೋಗಿ ಭಾವಚಿತ್ರ ಹಾಕಿದರೆ, ಚರ್ಮರೋಗ ತಜ್ಞರು ಸ್ವಯಂ ಆಸಕ್ತಿಯಿಂದ ಇವರಿಗೆ ಸಲಹೆಗಳನ್ನು ನೀಡಬಹುದು. ಇದರಿಂದ ದೇಶಾದ್ಯಂತ ಗ್ರಾಮೀಣ ಜನರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.

derma_kon_photo_6 derma_kon_photo_4 derma_kon_photo_5

ಹಾಗೆಯೆ ಸ್ವಚ್ಛ ತ್ವಚೆ ಸ್ವಸ್ಥ ತ್ವಚೆ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಇಂಡಿಯನ್ ಅಸೋಸಿಯೇಶನ್ ಆಫ್ ಡರ್ಮಟಾಲಜಿಸ್ಟ್, ವೆನರಿಯೋಲಜಿಸ್ಟ್ ಮತ್ತು ಲೆಪ್ರಾಲಜಿಸ್ಟ್ (ಐಎಡಿವಿಎಲ್) ಅಧ್ಯಕ್ಷ ಡಾ. ದೀಪಕ್ ಪಾರಿಕ್ ಮಾತನಾಡಿದರು.

ರಾಷ್ಟ್ರೀಯ ಕಾರ್ಯದರ್ಶಿ ರಶ್ಮಿ ಸರ್ಕಾರ್, ಕರ್ನಾಟಕ ಅಧ್ಯಕ್ಷ ಡಾ. ಕೆ. ನರೇಂದ್ರ ಕಾಮತ್, ಸಂಘಟನಾ ಸಮಿತಿ ಅಧ್ಯಕ್ಷ ಡಾ. ಗಣೇಶ್ ಎಸ್. ಪೈ, ಸಂಘಟನಾ ಕಾರ್ಯದರ್ಶಿ ಡಾ. ರಮೇಶ್ ಭಟ್ ಎಂ. , ಸಹಕಾರ್ಯದರ್ಶಿಗಳಾದ ಡಾ. ಮಂಜುನಾಥ ಶೆಣೈ, ಡಾ. ದೇವೇಶ್ ಮಿಶ್ರಾ, ಡಾ. ರಘುನಾಥ ರೆಡ್ಡಿ, ಡಾ. ರಾಜೇಶ್ ಬುದ್ಧದೇವ್, ಡಾ. ರೋಹಿತ್ ಮಿಶ್ರಾ, ಡಾ. ಸತೀಶ್ ಪೈ, ಡಾ. ಸೋಮೇಶ್, ಡಾ. ಪ್ರಮೋದ್ ಕುಮಾರ್, ಸಮ್ಮೇಳನದ ವೈಜ್ಞಾನಿಕ ಸಮಿತಿ ಅಧ್ಯಕ್ಷ ಡಾ. ಸತೀಶ್ ಪೈ, ಸಮ್ಮೇಳನದ ಖಜಾಂಚಿ ಡಾ. ಸುಕುಮಾರ್ ಡಿ. ಉಪಸ್ಥಿತರಿದ್ದರು.

Write A Comment