ಮಂಗಳೂರು : ಫೆ.12 : ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್ಲೈನ್-೧೦೯೮ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತೆರೆದ ಮನೆ ಎಂಬ ಕಾರ್ಯಕ್ರಮ ಜಪ್ಪು ಮಹಾಕಾಳಿಪಡ್ಪು ಅಂಬೇಡ್ಕರ್ ಭವನದಲ್ಲಿ ಬುಧವಾರ ಜರುಗಿತು.
ಕಾರ್ಯಕ್ರಮವನ್ನು ಗೊಂಬೆಯಾಟ ಪ್ರಹಸನವನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು, ಚೈಲ್ಡ್ಲೈನ್ ನಗರ ಸಂಯೋಜನಾಧಿಕಾರಿಯಾದ ಶ್ರೀಯೋಗಿಶ್ ಮಲ್ಲಿಗೆಮಾಡುರವರು ಪ್ರಸ್ತಾವಿಕವಾಗಿ ಮಾತುಗಳನ್ನಾಡುತ್ತಾ, ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ-೧೦೯೮ಗೆ ದೂರವಾಣಿ ಕರೆಯನ್ನು ಮಾಡಿ ದೂರು ನೀಡಬಹುದು, ಚೈಲ್ಡ್ಲೈನ್ ದಿನದ ೨೪ ಗಂಟೆಯೂ ಕಾರ್ಯನಿರತವಾಗಿರುತ್ತದೆ ಎಂದ ಅವರು, ಮಕ್ಕಳ ಸಹಾಯವಾಣಿಯ ಕಾರ್ಯಚಟುವಟಿಕೆಯನ್ನು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಪ್ರಮುಖ ಅಂಶಗಳನ್ನು ವಿವರಿಸಿದರು.
ಮಹಿಳೆಯರು ಮಕ್ಕಳ ಪಾಲನೆ ಪೋಷಣೆ ಬಗ್ಗೆ ಎಚ್ಚರವಹಿಸಬೇಕು ಹಾಗೂ ಮಲೇರಿಯಾ ಹಾಗೂ ರೋಗಗಳು ಹರಡದಂತೆ, ಮುಂಜಾಗ್ರತೆಯಾಗಿ, ಪರಿಸರದ ಸ್ವಚ್ಛತೆಯನ್ನು ಕಾಪಾಡುವುದರ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಜಿಲ್ಲಾ ಆರೋಗ್ಯ ಇಲಾಖಾಧಿಕಾರಿ ಶ್ರೀಮತಿ ಜ್ಯೋತಿಯವರು ಹೇಳಿದರು.
ಅಪರಾಧಗಳು ನಡೆದಾಗ ಹಾಗೂ ಸಂಶಯಿತ ವ್ಯಕ್ತಿಗಳು ತಮ್ಮ ಪರಿಸರದಲ್ಲಿ ಕಂಡುಬಂದಾಗ ತಕ್ಷಣ ಜನಸಾಮಾನ್ಯರು ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡುವಂತೆ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯಾಗಿದ್ದು, ಸಮಸ್ಯೆಗಳು ಬಂದಾಗ ಮಕ್ಕಳು ಮಹಿಳೆಯರು ಭಯಮುಕ್ತರಾಗಿ ನೇರವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ, ಪಾಂಡೇಶ್ವರ ಪೊಲೀಸ್ ಠಾಣೆಯ, ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಮಂಜುಳಾ ರವರು ತಿಳಿಸಿದರು.
ಸರಕಾರದಿಂದ ಮಕ್ಕಳಿಗಿರುವ ಸವಲತ್ತುಗಳು, ಮಕ್ಕಳ ಕಾವಲು ಸಮಿತಿ, ಮಕ್ಕಳ ಹಕ್ಕುಗಳು, ಮಹಿಳೆಯರ, ಮಕ್ಕಳ ಮಾರಾಟ ಹಾಗೂ ಸಾಗಾಣೆ, ಮಗುವನ್ನು ದತು ಸ್ವೀಕಾರ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕು|| ವನಿತಾರವರು ಹಾಗೂ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯ ಶ್ರೀಮತಿ ಜಯಶ್ರೀ.ಎಸ್ ಪವಾರ್ರವರು ಮಕ್ಕಳಿಗೆ ಸರಕಾರದಿಂದ ಇರುವ ಸವಲತ್ತು ಹಾಗೂ ಪೌಷ್ಠಿಕ ಆಹಾರದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.ಮಕ್ಕಳ ಸಹಾಯವಾಣಿಯ ಕು|| ಪವಿತ್ರಾ ಜ್ಯೋತಿಗುಡ್ಡೆಯವರು ಚೈಲ್ಡ್ಲೈನ್-೧೦೯೮ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶ್ರೀ ಎಂ. ನವಾಜ್, ಶಿಕ್ಷಣ ಇಲಾಖೆ ಸಿ.ಆರ್.ಪಿ ಅಧಿಕಾರಿ ಶ್ರೀ ಹರೀಶ್, ಸ್ಥಳೀಯ ಅಂಗನವಾಡಿ ಹಾಗೂ ಶಾಲಾ ಶಿಕ್ಷಕಿಯರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಕು|| ಸುಮಿತಾ, ಕು|| ಸ್ವಾತಿ, ಸ್ಥಳೀಯ ವಿಧ್ಯಾರ್ಥಿಗಳು ಪೋಷಕರು, ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶ್ರೀ ನಾಗರಾಜ್ ಪಣಕಜೆ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ಜಯಂತಿ ಕೋಕಳ ಸ್ವಾಗತಿಸಿ, ಶ್ರೀಮತಿ ರೇವತಿ ಹೊಸಬೆಟ್ಟುರವರು ವಂದಿಸಿದರು.