ಮಂಗಳೂರು,ಫೆ.11 : ಬೆಂಗಳೂರಿನ ಶ್ರೀ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯ ಕುಲಪತಿ ಡಾ. ರಾಮಚಂದ್ರ ಜಿ. ಭಟ್ ಕೋಟೆಮನೆ ಅವರಿಗೆ ಏರ್ಯ ಲಕ್ಷ್ಮೀನಾರಾಯಣ ಆಳ್ವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆನರಾ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಡಾ.ಭಟ್ ಅವರು ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು 10,000 ರೂ. ನಗದು,ಸ್ಮರಣಿಕೆ, ಅಭಿನಂದನಾ ಪತ್ರವನ್ನೊಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಧರ್ಮ ಜೀವನದ ಆಧಾರ. ಈ ಸಿದ್ಧಾಂತವನ್ನು ಮನನ ಮಾಡಿಕೊಂಡು ಮುನ್ನಡೆದಾಗ ಸಾಧನೆಯ ಮೂಲಕ ಸಾರ್ಥಕ ಬದುಕು ಕಂಡುಕೊಳ್ಳಲು ಸಾಧ್ಯ. ಏನ್ಸಿಯಂಟ್ ರೂಟ್ ; ಮೋಡರ್ನ್ ಫ್ರೂಟ್ ಸಿದ್ಧಾಂತದಡಿಯಲ್ಲಿ ನಾನು ಸಾಗಿ ಬಂದವ. ವೇದ ವಿಜ್ಞಾನ ನನ್ನ ಜೀವನ ಆಸಕ್ತಿ. ವಿದ್ವಾಂಸರು ಸಾಮಾಜಿಕ ಸೇವಾ ಕ್ಷೇತ್ರಕ್ಕೂ ಧುಮುಕಬೇಕು ಎಂಬ ಚಿಂತನೆಯನ್ನು ಮೈಗೂಡಿಸಿಕೊಂಡು ಆ ನಿಟ್ಟಿನಲ್ಲೂ ಕೆಲಸ ಮಾಡಿದ್ದೇನೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ , ವಿದ್ಯಾರ್ಥಿಗಳು ಧಾರ್ಮಿಕ ಅಧ್ಯಯನದ ಕಡೆಗೂ ಗಮನ ಹರಿಸಬೇಕು ಎಂದರು.
ಅಭಿನಂದನೆ ಸಲ್ಲಿಸಿದ ಕೆನರಾ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಡಾ. ಜಿ.ಎನ್. ಭಟ್ ಅವರು ಡಾ.ರಾಮಚಂದ್ರ ಜಿ.ಭಟ್ ಕೋಟೆಮನೆ ಅವರು ಸಮಾಜಕ್ಕಾಗಿ ಅದರಲ್ಲೂ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟವರು. ದೇಶ ವಿದೇಶಗಳಲ್ಲಿ ಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡವರು ಎಂದು ಬಣ್ಣಿಸಿದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಸ್. ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಕಾಲೇಜಿನ ಪ್ರಿನ್ಸಿಪಾಲ್ ಡಾ.ಬಾಲಕೃಷ್ಣ ವೈ.ಕಾಂಬ್ಳೆ , ಉಪ ಪ್ರಾಂಶುಪಾಲೆ ಡಾ. ಮಾಲಿನಿ ಕೆ.ವಿ.ಉಪಸ್ಥಿತರಿದ್ದರು. ಶ್ರೀಧರ ಪ್ರಭು ಅಭಿನಂದನಾ ಪತ್ರ ವಾಚಿಸಿದರು. ಉಪನ್ಯಾಸಕಿ ತಾರಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.