ಮಂಗಳೂರು,ಫೆ.09 : ವೈದ್ಯರು ನೀತಿವಂತರಾಗಿ ಉತ್ತಮ ಮತ್ತು ನ್ಯಾಯೋಚಿತ ಚಿಕಿತ್ಸೆ ನೀಡುವ ಮೂಲಕ ರೋಗಿಗಳ ವಿಶ್ವಾಸವನ್ನು ಹೆಚ್ಚಿಸಿಕೊಂಡು ಆ ಮೂಲಕ ಸಮಾಜದಲ್ಲಿ ಇನ್ನಷ್ಟು ಸ್ಥಾನಮಾನವನ್ನು ಗಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸಲಹೆ ನೀಡಿದ್ದಾರೆ.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಸಹಯೋಗದೊಂದಿಗೆ ಕರ್ನಾಟಕ ಮೆಡಿಕಲ್ ರೆಡಿಯೋಗ್ರಾಫರ್ಸ್ ಮತ್ತು ಇತರ ತಾಂತ್ರಿಕ ಸೇವೆಗಳ ಸಂಘ ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ತಂತ್ರಜ್ಞರಿಗಾಗಿ ಆಯೋಜಿಸಿದ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಇಬ್ರಾಹಿಂ ಮಾತನಾಡಿದರು.
ವಿಕಿರಣಶಾಸ್ತ್ರ ಅಥವ ರೆಡಿಯೋಲಾಜಿ ಇತ್ತೀಚಿನ ವರ್ಷಗಳಲ್ಲಿ ಭಾರೀ ಪ್ರಗತಿಯನ್ನು ಕಂಡಿದೆ. ಸಾಂಪ್ರದಾಯಿಕ ಎಕ್ಸರೇಗಾಗಿ ಪೂರಕವಾಗಿ ಉಪಯೋಗ ಆಗುತ್ತಿದ್ದ ವ್ಯವಸ್ಥೆ ಇಂದು ಉನ್ನತ ಮಟ್ಟದ ತಾಂತ್ರಿಕ ಅಭಿವೃದ್ಧಿಯ ಮೂಲಕ ಬಹುತೇಕ ಎಲ್ಲ ರೀತಿಯ ಖಚಿತ ವೈದ್ಯಕೀಯ ತಪಾಸಣೆಗಾಗಿ ಈ ತಂತ್ರಾಜ್ಞಾನ ವೈದ್ಯಕೀಯ ತಪಾಸಣೆಯ ಕೇಂದ್ರಸ್ಥಾನವನ್ನು ಅಲಂಕರಿಸಿದೆ. ನಗರದಲ್ಲಿ ನಡೆಯುತ್ತಿರುವ ಎರಡು ದಿನಗಳ ಸಮ್ಮೇಳನದಲ್ಲಿ ತಂತ್ರಜ್ಞರು ಈ ಕ್ಷೇತ್ರದಲ್ಲಿ ಹೊಸದಾಗಿ ಅಭಿವೃದ್ಧಿಯಾಗಿರುವ ವಿಚಾರಗಳನ್ನು ಪ್ರತಿನಿಧಿಗಳಿಗಾಗಿ ವಿವರಿಸಲಿದ್ದಾರೆ. ರಾಜ್ಯದ ವಿವಿದೆಡೆಯಿಂದ ೪೦೦ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.
ವೈದ್ಯಕೀಯ ತಂತ್ರಜ್ಞರು ರೋಗಿಗಳ ರಕ್ಷಣೆಯ ಮಂಚೂಣಿಯಲ್ಲಿರುತ್ತಾರೆ. ರೋಗಿಯ ಸುರಕ್ಷೆ, ಅನುಭೂತಿ ಮತ್ತು ಗುಣಮಟ್ಟ ಕಾಯ್ದುಕೊಳ್ಳುವುದು ವೈದ್ಯಕೀಯ ತಂತ್ರಜ್ಞರ ವೃತ್ತಿಯ ಬದ್ಧತೆಯಾಗಿದೆ ಎಂದು ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವೇಣುಗೋಪಾಲ್ ಹೇಳಿದರು.
ಜನಸಾಮಾನ್ಯರಿಗೆ ವೈದ್ಯಕೀಯ ಸೇವೆಯನ್ನು ಅವರ ಕೈಗೆಟಕುವ ದರದಲ್ಲಿ ನೀಡುವುದು ಇಂದು ಎಲ್ಲ ಆಸ್ಪತ್ರೆಗಳು ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ,ರಿಚರ್ಡ್ ಕುವೆಲ್ಲೊ ನುಡಿದರು.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಡಳಿತಾಧಿಕಾರಿ ರೆ.ಫಾ.ರುಡೊಲ್ಫ್ ರವಿ ಡಿ.ಸೋಜ ಅವರು ಸ್ಮರಣಿಕೆ ಬಿಡುಗಡೆ ಮಾಡಿದರು. ಕರ್ನಾಟಕ ಮೆಡಿಕಲ್ ರೆಡಿಯೋಗ್ರಾಫರ್ಸ್ ಮತ್ತು ಇತರ ತಾಂತ್ರಿಕ ಸೇವೆಗಳ ಸಂಘದ ಅಧ್ಯಕ್ಷ ನಿತ್ಯಾನಂದ ಎಚ್. ಸ್ವಾಗತಿಸಿದರು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ರೆಡಿಯೊಲಾಜಿ ವಿಭಾಗದ ಮುಖ್ಯಸ್ಥ, ಸಮ್ಮೇಳದ ಅಧ್ಯಕ್ಷ ಡಾ.ಸುರೇಶ್ ಎಚ್.ಬಿ. ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ಬೆಂಗಳೂರು ಮಣಿಪಾಲ ಆಸ್ಪತ್ರೆಯ ಬಿ.ಸತ್ಯನಾರಾಯಣ ಅವರು ವಂದಿಸಿದರು. ಡಾ.ಲೆನೊನ್ ಜೆ.ಡಿ,ಸೋಜ ಮತ್ತು ಡಾ.ರೊಮಿನ ಜಿ.ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.