ಮಂಗಳೂರು, ಫೆ.09 : ಮಂಗಳೂರು ಮಹಾನಗರ ಪಾಲಿಕೆ ಮತ್ತು ದ.ಕ. ಹಾಗೂ ಉಡುಪಿ ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಹಮ್ಮಿಕೊಂಡಿದ್ದ ‘ಮೇಯರ್ ಕಪ್’ ಚಾಂಪಿಯನ್ಶಿಪ್ ಟೂರ್ನಿಯ ಸಮಾರೋಪ ಸಮಾರಂಭ ರವಿವಾರ ನಗರದ ಎನ್ಜಿಒ ಹಾಲ್ನಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್ ಮಹಾಬಲ ಮಾರ್ಲ ‘ರಾಜ್ಯ ಸರಕಾರ ರೂಪಿಸುತ್ತಿರುವ ಯುವನೀತಿಯಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲಾತಿ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಅಧಿಕ ಅನುದಾನ ಒದಗಿಸಲು ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.
ದಸರಾ ಕ್ರೀಡಾಕೂಟಕ್ಕಾಗಿ ಸರಕಾರದಿಂದ ಕೇವಲ 14 ಸಾವಿರ ರೂ. ಅನುದಾನ ಬರುತ್ತಿದೆ. ಗ್ರಾಮೀಣ ಪ್ರದೇಶಗಳಿಂದ ದೊಡ್ಡ ಸಂಖ್ಯೆಯ ಪ್ರತಿಭಾವಂತ ಮಕ್ಕಳು ಭಾಗವಹಿಸುವ ಈ ಕ್ರೀಡಾಕೂಟದಲ್ಲಿ ಮಕ್ಕಳಿಗೆ ಅಗತ್ಯ ಸೌಕರ್ಯ ಒದಗಿಸಲು ಈ ಅನುದಾನ ಏನೇನೂ ಸಾಲದು ಎಂದು ಅಭಿಪ್ರಾಯಪಟ್ಟ ಮಹಾಬಲ ಮಾರ್ಲ, ಕೆಲವು ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಸಣ್ಣ ಪ್ರಮಾಣದಲ್ಲಿ ಉದ್ಯೋಗ ಮೀಸಲು ನೀಡುತ್ತಿದ್ದಾರೆ. ರಾಜ್ಯ ಅರಣ್ಯ ಸಚಿವರು ತಮ್ಮ ಇಲಾಖೆಯಲ್ಲಿ ಉದ್ಯೋಗ ಮೀಸಲಾತಿ ಭರವಸೆ ನೀಡಿದ್ದಾರೆ. ಇದು ಎಲ್ಲಾ ಇಲಾಖೆಗಳಿಗೂ ಮಾದರಿಯಾಗಬೇಕು ಎಂದು ಆಶಿಸಿದರು.
ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯುವನೀತಿ ರೂಪಿಸಲು ಸರಕಾರ ನೇಮಿಸಿದ ತಜ್ಞರ ಸಮಿತಿ ಸದಸ್ಯ ಕೆ. ತೇಜೋಮಯ ‘ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲಾತಿ ಒದಗಿಸುವ ಅಂಶವನ್ನು ಸರಕಾರದ ಯುವನೀತಿಯಲ್ಲಿ ಸೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಅಬಕಾರಿ ಸುಂಕ ಮಂಗಳೂರು ವಿಭಾಗ ಜಂಟಿ ಆಯುಕ್ತ ಎಸ್.ಎಲ್.ರಾಜೇಂದ್ರ ಪ್ರಸಾದ್, ಕ್ರೀಡಾಪಟು ಪುರಂದರದಾಸ್ ಕೂಳೂರು ಉಪಸ್ಥಿತರಿದ್ದರು. ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ ಪ್ರಾಸ್ತಾವಿಸಿದರು. ಜಿಲ್ಲಾಧ್ಯಕ್ಷ ಜಗದೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಧುಚಂದ್ರ ಮತ್ತಿತರರು ಉಪಸ್ಥಿತರಿದ್ದರು.