ಮಂಗಳೂರು: ಹಾಡಹಗಲೇ ಚಿನ್ನಾಭರಣ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು 50 ಲಕ್ಷ ರೂ. ಮೌಲ್ಯದ ಒಂದೂವರೆ ಕೆಜಿ ಚಿನ್ನಾಭರಣಗಳನ್ನು ದೋಚಿದ ಘಟನೆ ಶನಿವಾರ ಮಧ್ಯಾಹ್ನ ನಗರದ ಭವಂತಿಸ್ಟ್ರೀಟ್ನಲ್ಲಿ ನಡೆದಿದೆ.
ಇಲ್ಲಿನ ಗುಲಾಬ್ ಚಿನ್ನಾಭರಣ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ. ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿ ಶನಿವಾರ ಮಧ್ಯಾಹ್ನ 2 ಗಂಟೆಗೆ ಅಂಗಡಿ ಎದುರಿನ ಶಟರ್ಗೆ ಬೀಗ ಹಾಕಿ ಊಟಕ್ಕೆ ತೆರಳಿದ್ದರು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಮರಳಿ ಅಂಗಡಿ ತೆರೆದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.
ಅಂಗಡಿಯ ಹಿಂಬದಿಯಲ್ಲಿ ಪಾಳು ಬಿದ್ದಿರುವ ಕಟ್ಟಡವೊಂದಿದ್ದು, ಅದರ ಗೋಡೆ ಕೊರೆದ ಕಳ್ಳರು ಗುಲಾಬ್ ಜುವೆಲ್ಲರಿಗೆ ಒಳಗಡೆಯಿಂದ ಪ್ರವೇಶಿಸಿದ್ದಾರೆ. ಬಳಿಕ ಲೈಟ್ ಆನ್ ಮಾಡಿ ಒಂದೂ ಚಿನ್ನಾಭರಣ ಬಿಡದೆ ಎಲ್ಲವನ್ನೂ ದೋಚಿದ್ದಾರೆ.
ಅಂಗಡಿ ಒಳಗಡೆ ಸಿಸಿ ಕ್ಯಾಮಾರಾ ಅಳವಡಿಸಲಾಗಿದೆ. ಆದರೆ ಕಳ್ಳರು ಒಳಗಡೆ ಬಂದಿದ್ದ ಸಂದರ್ಭ ಕ್ಯಾಮರಾ ಆಫ್ ಆಗಿತ್ತು. ಅಂಗಡಿ ಮಾಲೀಕರೇ ಕ್ಯಾಮರಾ ಬಂದ್ ಮಾಡಿದ್ದರೇ ಅಥವಾ ಒಳಗಡೆ ಬಂದಿದ್ದ ಕಳ್ಳರು ಸಿಸಿ ಕ್ಯಾಮರಾ ಕನೆಕ್ಷನ್ ತೆಗೆದಿದ್ದರೇ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ.
ಕಳವು ನಡೆದ ಬಗ್ಗೆ ಜುವೆಲ್ಲರಿ ಅಂಗಡಿ ಮಾಲೀಕ ಸತೀಶ್ ಸಾನು ಬಂದರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಸೆಂಟ್ರಲ್ ವಿಭಾಗದ ಎಸಿಪಿ ತಿಲಕ್ಚಂದ್ರ ಹಾಗೂ ಬಂದರು ಠಾಣೆ ಎಸ್ಐ ರಾಮಕೃಷ್ಣ, ಅಪರಾಧ ವಿಭಾಗದ ಎಸ್ಐ ಮದನ್ ಹಾಗೂ ಸಿಬ್ಬಂದಿ ತನಿಖೆ ನಡೆಸಿದ್ದಾರೆ.