ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಫೆ.07: ಎ.ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನೂತನವಾಗಿ ಪ್ರಾರಂಭವಾದ “ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್”ನ ಉದ್ಘಾಟನೆ ಹಾಗೂ ” ಬಂಟಸಿರಿ” ಕಲಾವೈಭವ -2015 ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ನಗರದ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಟಿ.ಎಂ.ಎ.ಪೈ ಇಂಟರ್ ನ್ಯಾಷನಲ್ ಸಭಾಭವನದಲ್ಲಿ ನಡೆಯಿತು.
ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎನ್.ವಿನಯ್ ಹೆಗ್ಡೆ ಅವರು ತೆಂಗಿನ ಗಿಡಕ್ಕೆ ನೀರು ಹಾಕುವ ಮೂಲಕ “ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್”ನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಂಟ ಸಮಾಜದಲ್ಲಿ ಕ್ರಾಂತಿಕಾರಕ ಸುಧಾರಣೆಯನ್ನು ತರಲು `ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅನ್ನು ಪ್ರಾರಂಭಿಸಲಾಗಿದ್ದು, ಯಾವುದೇ ರಾಜಕೀಯ ಪಕ್ಷದಿಂದ ಪ್ರೇರಿತವಾಗಿ ಅಥವಾ ಬಂಟರ ಮಾತೃ ಸಂಘವನ್ನು ಒಡೆಯುವ ದುರುದ್ದೇಶದಿಂದ ಇದನ್ನು ಸ್ಥಾಪನೆ ಮಾಡಿಲ್ಲ. ಈ ಟ್ರಸ್ಟ್ ಪಕ್ಷೇತರವಾಗಿದ್ದು, ಸಮಾನ ಮನಸ್ಕ ವ್ಯಕ್ತಿಗಳಿಂದ ಆರಂಭಿಸಲಾದ ಸಂಸ್ಥೆಯಾಗಿದ್ದು, ಸಹಾಯವನ್ನು ನಿರೀಕ್ಷಿಸುವ ದುರ್ಬಲರಿಗಾಗಿ ಸಹಾಯವನ್ನು ಮಾಡುವ ದೃಷ್ಟಿಯಿಂದ ಜನ್ಮ ತಾಳಿದ ಟ್ರಸ್ಟ್ ಇದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ನ ಗೌರವಾಧ್ಯಕ್ಷ ಬಿ.ರಮಾನಾಥ ರೈ ಅವರು ಮಾತನಾಡಿ, ಪ್ರಭಾವಿ ಸಮಾಜ ಎಂದೇ ಗುರುತಿಸ್ಪಟ್ಟ ಬಂಟ ಸಮುದಾಯವು ಎಲ್ಲರ ವಿಶ್ವಾಸವನ್ನು ಪಡೆದುಕೊಂಡು, ಎಲ್ಲಾ ಸಮುದಾಯವನ್ನು ಪ್ರೀತಿಸುತ್ತಾ, ಹಿರಿಯರ ಮಾರ್ಗದರ್ಶನದೊಂದಿಗೆ ಸಾಮಾಜಿಕ ಕ್ಷೇತ್ರಗಳಲ್ಲಿ ಮುನ್ನಡೆಯಬೇಕು. ಜೊತೆಗೆ ನೂತನವಾಗಿ ಆರಂಭಗೊಂಡಿರುವ ಈ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ರಾಜಕೀಯ ರಹಿತಾ ಸಂಘಟನೆಯಾಗಿ ಬೆಳೆಯಬೇಕು ಎಂದು ಹೇಳಿದರು.
ಬಂಟ ಸಮಾಜವು ಹಿರಿಯರಿಗೆ ಗೌರವ ನೀಡುವ ಮೂಲಕ ಹಾಗೂ ಸ್ರ್ಥೀಯರಿಗೆ ವಿಶೇಷ ಸ್ಥಾನಮಾನವನ್ನು ನೀಡುವ ಮೂಲಕ ಮತ್ತು ಬಂಟ ಸಮಾಜದ ಪ್ರತಿಯೊಬ್ಬರಿಗೂ ವಿಶೇಷ ಸ್ಥಾನ ಮಾನ, ಅವಕಾಶಗಳನ್ನು, ನೀಡುವ ಮೂಲಕ ಉತ್ತಮ ಮನೋಭಾವನೆಯನ್ನು ಬೆಳೆಸಿಕೊಂಡು ಬಂದಿದೆ. ಮಾತ್ರವಲ್ಲದೇ ಇತರ ಸಮಾಜದವರಿಗೂ ಸಹಾಯ ಹಸ್ತ ಚಾಚುವ ಮೂಲಕ ಅದರಲ್ಲಿ ತಮ್ಮ ಸುಖ ಕಾಣುವ ಬಂಟ ಸಮಾಜದಲ್ಲಿ ನಾನು ಜನಿಸಿದ್ದೇನೆ ಎಂದು ಹೇಳಲು ಹೆಮ್ಮೆ ಯಾಗುತ್ತಿದೆ.
ಈ ಟ್ರಸ್ಟ್ ಮುಖೇನ ಸಮಾಜದ ಪ್ರತಿಯೊಂದು ಕುಟುಂಬಗಳ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಊಟ, ವಸತಿ, ಉದ್ಯೋಗ, ಶಿಕ್ಷಣದಂತಹ ಮೂಲಭೂತ ಸೌಲಭ್ಯಗಳು ಲಭಿಸುವಂತಾಗಬೇಕು, ಯುವ ಪೀಳಿಗೆಗೆ ಮಹತ್ವ ನೀಡಿ ಪ್ರೋತ್ಸಾಹಿಸುವ ಕಾರ್ಯಕ್ರಮಗಳು ರೂಪುಗೊಳ್ಳಬೇಕು. ಇಂತಹ ಜನಪರ ಕಾರ್ಯಗಳು ಹೆಚ್ಚಿನ ರೀತಿಯಲ್ಲಿ ಕೈಗೂಡಲು ಇಂತಹ ನೂರಾರು ಟ್ರಸ್ಟ್ ಗಳು ಹುಟ್ಟಿ ಬರಬೇಕು ಎಂದು ಎನ್.ವಿನಯ್ ಹೆಗ್ಡೆ ಹೇಳಿದರು.
ಪ್ರಸ್ತಾವನೆಗೈದ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರು, ಬಂಟ ಸಮಾಜ ಮಾತ್ರವಲ್ಲದೆ ಇತರ ಸಮಾಜದ ಪ್ರತಿಯೊಂದು ಕುಟುಂಬದ ಸಮಸ್ಯೆಗಳಿಗೂ ಸ್ಪಂದಿಸುವುದರೊಂದಿಗೆ ಊಟ, ವಸತಿ, ಉದ್ಯೋಗ, ಶಿಕ್ಷಣ ಈ ಮೂಲಭೂತ ಅಗತ್ಯತೆಗಳು ಪ್ರತಿಯೊಬ್ಬರಿಗೂ ಲಭಿಸುವಂತಾಗಬೇಕು. ಬಂಟ ಸಮಾಜದ ಮಹಿಳೆಯರಿಗೆ ಜೌನತ್ಯ ನೀಡಿ ಪ್ರೋತ್ಸಾಹಿಸುವುದರೊಂದಿಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕ, ರಾಜಕೀಯ ಕ್ಷೇತ್ರಗಳಲ್ಲಿ ಯುವಪೀಳಿಗೆಗೆ ಮಹತ್ವ ನೀಡಿ ಪೋತ್ಸಾಹಿಸುವ ಕಾರ್ಯಕ್ರಮ ರೂಪುಗೊಳ್ಳಬೇಕು, ಬಂಟರ ಸಂಸ್ಕ್ರತಿ – ಸಂಪ್ರದಾಯಗಳ ಕಲಾ ಸುಪರ್ಧಿಯ ಸ್ಥಾಪನೆಯಾಗಬೇಕು.
ಕೃಷಿಗೆ ಹೆಚ್ಚು ಮಾನ್ಯತೆ ನೀಡಿ ಜೊತೆಗೆ ಅಧುನಿಕ ರೀತಿಯ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸುವ ವ್ಯವಸ್ಥೆಯಾಗಬೇಕು. ಸಮಾಜದ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಂಬಂಧಿಸಿ ಶ್ರೇಯೋಭಿವೃದ್ಧಿ ಕಾರ್ಯಕ್ರಮಗಳ ಸಂಘಟತವಾಗಬೇಕು ಎಂಬಿತ್ಯಾದಿ ಪ್ರಮುಖ ಧ್ಯೇಯೋದ್ಧೇಶಗಳನ್ನು ಇರಿಸಿಕೊಂಡು ಈ “ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್”ನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ನಾವೆಲ್ಲಾ ಮಾತೃ ಸಂಘದ ಸದಸ್ಯರು :
ಸದಾನಂದ ಶೆಟ್ಟಿಯವರು ಬಂಟ ಸಮೂಹವನ್ನು ಎರಡು ಮಾಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಬಂಟರ ಮಾತೃ ಸಂಘಕ್ಕೂ ಈ ಟ್ರಸ್ಟ್ ಗೂ ಯಾವುದೆ ಸಂಬಂಧವಿಲ್ಲ. ನಾವೆಲ್ಲ ಮಾತೃ ಸಂಘದ ಸದಸ್ಯರೇ ಆಗಿದ್ದು, ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲು ಈ ಟ್ರಸ್ಟ್ ಮತ್ತೊಂದು ವೇದಿಕೆಯಷ್ಟೇ ಎಂದು ಸದಾನಂದ ಶೆಟ್ಟಿ ಸ್ಪಷ್ಟ ಪಡಿಸಿದರು.
ಟ್ರಸ್ಟ್ನ ಗೌರವ ಸಲಹೆಗಾರ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಬಂಟ ಸಮಾಜದ ಪ್ರಮುಖರು ನಿರ್ವಹಿಸುತ್ತಿರುವ ಜನಪರ ಕಾರ್ಯಗಳಿಂದ ಸಮಾಜದಲ್ಲಿ ಬಂಟ ಸಮಾಜಕ್ಕೆ ವಿಶೇಷವಾದ ಸ್ಥಾನಮಾನ ಸಿಕ್ಕಿದೆ. ಬಂಟ ಸಮಾಜದ ವ್ಯಕ್ತಿಗಳು ಎಲ್ಲ ಕ್ಷೇತ್ರಗಳಲ್ಲೂ ಖ್ಯಾತಿ ಪಡೆಯುವ ಮೂಲಕ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಗುರುತಿಸಿಕೊಂಡಿದ್ದಾರೆ. ಇದೀಗ ನೂತನವಾಗಿ ಆರಂಭಗೊಂಡಿರುವ ಟ್ರಸ್ಟ್ ನಿಂದ ಬಂಟ ಸಮುದಾಯಕ್ಕೆ ಮಾತ್ರವಲ್ಲದೇ ಎಲ್ಲಾ ವರ್ಗದ ಜನರಿಗೂ ಅನುಕೂಲಗಳು ಹಾಗೂ ಅಗತ್ಯ ಸೌಲಭ್ಯಗಳು ಸಿಗುವಂತಗಲೂ ಟ್ರಸ್ಟ್ನ ಮುಖಂಡರು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ತುಳುನಾಡಿನ ಈ ನೆಲೆದಲ್ಲಿ ಬಂಟ ಸಮಾಜದ ಸಂಸ್ಕ್ರತಿ ಅವಿಭ್ಯಾಜ್ಯ ಅಂಗವಾಗಿ ಬೆಳೆದಿದೆ. ಇವತ್ತಿಗೂ, ಬಂಟ ಸಮಾಜದ ವ್ಯಕ್ತಿಗಳು ನಾಡು ಮಾತ್ರವಲ್ಲದೇ ದೇಶ ವಿದೇಶಗಳಲ್ಲಿ ಕಿರ್ತಿ ಪತಾಕೆಯನ್ನು ಹಾರಿಸಿದ್ದಾರೆ ಎಂದು ಅತಿಥಿಗಳಾಗಿ ಆಗಮಿಸಿದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್ ಲೋಬೋ ಹೇಳಿದರು.
ದೇಶ ವಿದೇಶಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಬಂಟ ಸಮಾಜವೂ ತಮ್ಮದೇ ಆದ ಚಾಪು ಮೂಡಿಸಿದೆ. ಮಾತ್ರವಲ್ಲದೇ ಎಲ್ಲ ರಂಗಗಳಲ್ಲೂ ಪ್ರತಿನಿಧಿಸುವ ಮೂಲಕ ಬಂಟ ಸಮಾಜವು ದೇಶಕ್ಕೆ ಉತ್ತಮ ಕೊಡುಗೆ ನೀಡಿದೆ. ಬಂಟ ಸಮಾಜದ ಜೊತೆ ಕೈ ಜೋಡಿಸಿ ಕೆಲಸ ಮಾಡಲು ನನಗೆ ಹೆಮ್ಮೆಯಾಗುತ್ತದೆ ಎಂದು ಇನ್ನೋರ್ವ ಅತಿಥಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಹೇಳಿದರು.
ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಬಂಟ ಸಮಾಜ ಸಾಧನೆ ಮಾಡಿದೆ. ಜೊತೆಗೆ ಬಂಟ ಸಮಾಜದ ಯುವ ಪೀಳಿಗೆಗಳು ತಮ್ಮ ಸ್ವ ಸಾಮಾರ್ಥ್ಯದಿಂದ ಸಾಧನೆ ಮಾಡುತ್ತಿದ್ದಾರೆ. ಬಂಟ ಸಮಾಜದ ಸಹಾಯ ಮಾಡುವ ಗುಣ (ಹೆಲ್ಪಿಂಗ್ ನೇಚರ್) ತುಂಬ ಇಷ್ಟವಾಯಿತು ಎಂದು ಕರ್ನಾಟಕದ ಆರೋಗ್ಯ ಸಚಿವ ಯು.ಟಿ.ಖಾದರೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಬಂಟ ಸಮುದಾಯ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಮಿಸ್ ವರ್ಲ್ಡ್ನಿಂದ ಹಿಡಿದು ಅಂಡರ್ ವರ್ಲ್ಡ್ವರೆಗೆ ಖ್ಯಾತರಾದ ಬಂಟ ಸಮುದಾಯದ ವ್ಯಕ್ತಿಗಳನ್ನು ನಾವು ಕಾಣು ಬಹುದು. ದೇಶವಿದೇಶಗಳಲ್ಲಿ ಬಂಟರ ಸಾಧನೆ ಅತ್ಯಂತ ಮಹತ್ವವನ್ನು ಪಡೆದಿದೆ. ಬಂಟ ಸಮುದಾಯದ ಖ್ಯಾತ ನಾಮರ ಜೊತೆ ನಾನು ಕರ್ತವ್ಯ ನಿರ್ವಹಿಸಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಹೇಳಿದರು.
ದೇಶವಿದೇಶಗಳಲ್ಲಿ ಬಂಟರ ಸಾಧನೆ ತುಂಬ ಮಹತ್ವವನ್ನು ಪಡೆದಿದೆ. ಬಂಟರಿಗೆ ಬಂಟರೆ ಸಾಟಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೊನಪ್ಪ ಭಂಡಾರಿ ಹೇಳಿದರು.
ಸಮಾರಂಭದಲ್ಲಿ ಶ್ರೇಷ್ಠ ಬರಹಗಾರ, ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಅವರು ಟ್ರಸ್ಟಿನ ವೆಬ್ ಸೈಟಿಗೆ ಚಾಲನೆ ನೀಡಿದ್ದರು.
ಇದೇ ಸಂದರ್ಭದಲ್ಲಿ ನೂರು ವರ್ಷಗಳನ್ನು ಪೊರೈಸಿರುವ ನಾಡೋಜ ಕೈಯಾರ ಕಿಜ್ಞಣ್ಣ ರೈ ಯವರಿಗೆ ಗೌರವ ಪೂರ್ವಕವಾಗಿ ನುಡಿನಮನ ಸಲ್ಲಿಸಲಾಯಿತು. ಚಿತ್ರಮಿತ್ರ ಖ್ಯಾತಿಯ ಪ್ರಶಾಂತ್ ಶೆಟ್ಟಿ ಹಾಗೂ ಅನು ಪಾವಂಜೆ ಅವರು ಸ್ಥಳದಲ್ಲೇ ಕಯ್ಯಾರ ಕಿಂಇಣ್ಣ ರೈ ಗಳ ಚಿತ್ರ ರಚಿಸಿ ಜನ ಮೆಚ್ಚಗೆಗೆ ಪಾತ್ರರಾದರು.
ವೇದಿಕೆಯಲ್ಲಿ ಟ್ರಸ್ಟ್ ನ ಕಾರ್ಯಾಧ್ಯಕ್ಷ ಕೆ.ಅಮರನಾಥ ಶೆಟ್ಟಿ. ಮೇಯರ್ ಮಹಾಬಲ ಮಾರ್ಲ, ಎ.ಜೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಜಯಕರ್ ಎನ್. ಆಳ್ವಾ, ಮನಪಾ ವಿರೋಧ ಪಕ್ಷದ ನಾಯಕ ಪ್ರೇಮನಾಥ್ ಶೆಟ್ಟಿ, ಶ್ರೀಮತಿ ಮೀನಾಕ್ಷಿ, ಜಯರಾಮ ಎನ್ ಆಳ್ವ, ಕರ್ನಿರ್ ವಿಶ್ವನಾಥ್ ಶೆಟ್ಟಿ, ಮರವೂರು ಜಗದೀಶ್ ಶೆಟ್ಟಿ, ಕೆ.ಆರ್ ಶೆಟ್ಟಿ, ಬಂಟ್ಸ್ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರಾಜ್ ಗೋಪಾಲ್ ರೈ, ಮೈನ್ ಶೆಟ್ಟಿ, ಸಂಗೀತ ನಿದೇರ್ಶಕ ಗುರುಕಿರಣ್, ಸುರೇಶ್ಚಂದ್ರ ಶೆಟ್ಟಿ, ಟ್ರಸ್ಟ್ನ ಯುವ ಘಟಕದ ಅಧ್ಯಕ್ಷ ದೇವಿಚರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವಸಂತ್ ಶೆಟ್ಟಿ ಸ್ವಾಗತಿಸಿದರು. ಬಾಸ್ಕರ್ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.ತ್ರೀಶಾ ಶೆಟ್ಟಿ ಸ್ವಾಗತ ಪ್ರಾರ್ಥನೆ ನೆರವೇರಿಸಿದರು. ಜಗದೀಶ್ ಶೆಟ್ಟಿ ಅಶಯ ಗೀತೆ ಹಾಡಿದರು,
ಸಭಾ ಕಾರ್ಯಕ್ರಮದ ಬಳಿಕ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ‘ಬಂಟ ಸಿರಿ’ ಕಲಾ ವೈಭವ ನಡೆಯಿತು. ಇದರಲ್ಲಿ ನೃತ್ಯ ವಂದನ, ಬಂಟರ ಉಡುಗೆ- ತೊಡುಗೆ, ಹಾಸ್ಯ ರಂಜನೆ, ಯಕ್ಷ ಹಾಸ್ಯ- ಲಾಸ್ಯ, ಬಂಟರ ವೈಭವ, ಮಹಿಳಾ ಸಾಂಸ್ಕೃತಿಕ ವೈವಿದ್ಯ, ಮಿಸ್ ಬಂಟ್- ಮಿಸ್ಟರ್ ಬಂಟ್, ಭಲೇ ಜೋಡಿ, ನಮ್ಮ ಯಜಮಾನ್ರು, ಯಕ್ಷಗಾನ ಬಯಲಾಟ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಸಂಗೀತ ರಸಧಾರೆ ನಡೆಯಿತು.