ಸುರತ್ಕಲ್,ಫೆ.04 : ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ನೂತನ 2014-15 ರ ಸಾಲಿನ ಕೈಗಾರಿಕಾ ನೀತಿಯ ಕಾರ್ಯಾಗಾರವನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು, ಸಿಡಾಕ್ ಧಾರವಾಡ ಹಾಗೂ ಕೆನರಾ ಸಣ್ಣ ಕೈಗಾರಿಕಾ ಸಂಘ ಇವರ ಜಂಟಿ ಆಶ್ರಯದಲ್ಲಿ ಕೆನರಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ನೆರವೇರಿತು.
ಉದ್ಘಾಟಕರಾಗಿ ಆಗಮಿಸಿದ ಕೆನರಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀ ಎಂ ಜೆ ಶೆಟ್ಟಿಯವರು ಮಾತನಾಡಿ ಕೈಗಾರಿಕಾ ಕ್ಷೇತ್ರದಲ್ಲಿ ಯುವ ಉದ್ಯಮಿಗಳು ನಾಯಕತ್ವವನ್ನು ವಹಿಸಿ ನಿರುದ್ಯೋಗ ನಿವಾರಣೆಗೆ ಸ್ಪಂದಿಸಬೇಕೆಂದು ಕರೆನೀಡಿದರು. ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶ್ರೀ ರಮಾನಂದ ನಯಾಕ ನೂತನ ಕೈಗಾರಿಕಾ ನೀತಿಯ ಸಂಪೂರ್ಣ ಮಾಹಿತಿ ನೀಡಿ ಕಾರ್ಯಾಗಾರದಲ್ಲಿ ಆಗಮಿಸಿದ ಉದ್ಯಮಿಗಳ ಪ್ರಶ್ನೆ ಹಾಗೂ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಪ್ರೋತ್ಸಾಹಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಶ್ರೀ ಸತ್ಯನಾರಾಯಣ ಭಟ್ ಇವರು ಪ್ರಾಸ್ತಾವಿಕ ಭಾಷಣ ನೀಡಿ ದೃಶ್ಯ ಮಾದ್ಯಮದ ಮೂಲಕ ನೂತನ ಕೈಗಾರಿಕಾ ನೀತಿಯ ವಿಷಯ ಮಂಡನೆ ಮಾಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರ ಉಪನಿರ್ದೇಶಕ ಶ್ರೀ ಎಚ್ ರಾಜಶೇಖರಯ್ಯ ಉದ್ಯಮಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಸಿಡಾಕ್ ಧಾರವಾಡ ಇಲ್ಲಿಯ ಉಪನಿರ್ದೇಶಕ ಶ್ರೀ ಅರವಿಂದ ಡಿ ಬಾಳೇರಿಯವರು ಸ್ವಾಗತಿಸಿದರು. ಕೆನರಾ ಸಣ್ಣ ಕೈಗಾರಿಕಾ ಸಂಘದ ಉಪಾಧ್ಯಕ್ಷ ಶ್ರೀ ರಾಧಕೃಷ್ಣ ಕೆ, ಕಾರ್ಯದರ್ಶಿ ಶ್ರೀ ಗೌರವ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖಜಾಂಜಿ ಶ್ರೀ ಹೆನ್ರಿ ಸಿ ಎಫ಼್ ಬ್ರಿಟ್ಟೋ ವಂದನಾರ್ಪಣೆಗೈದರು. ಸಿಡಾಕ್ ತರಬೇತಿ ಸಂಘಟಕ ಶ್ರೀ ಸತೀಶ್ ಮಾಬೆನ್ ನಿರೂಪಿಸಿದರು. ಬೈಕಂಪಾಡಿ ಕೈಗಾರಿಕಾ ಪ್ರದೇಶದ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.