ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಜ.29: ವಿಶ್ವ ಹಿಂದು ಪರಿಷತ್ ನ ಸ್ವರ್ಣ ಜಯಂತಿಯ ಆಚರಣೆಯ ಪ್ರಯುಕ್ತ ದೇಶದ್ಯಾದಂತ ಶೋಭಾಯಾತ್ರೆ ಗಳು, ಸಮಾಜೋತ್ಸವಗಳು, ರಕ್ತದಾನ ಶಿಬಿರಗಳು, ನಿರಂತರವಾಗಿ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲೂ “ಬೃಹತ್ ಹಿಂದೂ ಸಮಾಜೋತ್ಸವ”ವನ್ನು ಆಚರಿಸಲು ತೀರ್ಮಾನಿಸಲಾಗಿದ್ದು, ದಿನಾಂಕ 01-03-2015 ಬಾನುವಾರ ಮಧ್ಯಾಹ್ನ 2.30 ಕ್ಕೆ ಮಂಗಳೂರಿನ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಶೋಭಾಯಾತ್ರೆಯ ಮೂಲಕ ಬೃಹತ್ ಮೆರೆವಣಿಗೆಯು ಕೇಂದ್ರ ಮೈದಾನದ ಕಡೆಗೆ ತೆರೆಳಿ “ಬೃಹತ್ ಹಿಂದೂ ಸಮಾಜೋತ್ಸವ”ವನ್ನು ಆಚರಿಸಲಾಗುವುದು ಎಂದು ಹಿಂದೂ ಸಮಾಜೋತ್ಸವ ಸಮಿತಿಯ ಗೌರವಾಧ್ಯಕ್ಷ, ಕರಾವಳಿ ಸಮೂಹ ಕಾಲೇಜುಗಳು ಸಂಸ್ಥಾಪಕರಾದ ಎಸ್.ಗಣೇಶ್ ರಾವ್ ಅವರು ತಿಳಿಸಿದರು.
ಗುರುವಾರ ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಮಂಗಳೂರಿನ ಪ್ರತಿಷ್ಥಿತ ಹಿಂದೂ ಭಾಂಧವರನ್ನೊಳಗೊಂಡ “ಹಿಂದೂ ಸಮಾಜೋತ್ಸವ’ ಸಮಿತಿಯನ್ನು ರಚಿಸಲಾಗಿದ್ದು, ಸಮಾಜೋತ್ಸವದಲ್ಲಿ ಮಧ್ಯಪ್ರದೇಶದ ಸಾದ್ವಿ ಬಾಲಿಕ ಸರಸ್ವತೀ ಮಿಶ್ರರವರು ಪ್ರಮುಖ ದಿಕ್ಸೂಚಿ ಭಾಷಣ ಮಾಡುವ ಮೂಲಕ ಇಡೀ ಹಿಂದೂ ಸಮಾಜಕ್ಕೆ ಜಾಗೃತಿಯನ್ನು ಮೂಡಿಸಲಿದ್ದಾರೆ ಎಂದರು.
ಮಾತ್ರವಲ್ಲದೇ ಹಿಂದೂ ಸಮಾಜದ ಅನೇಕ ಸಾಧು ಸಂತರು ಸಂಘಟನೆಯ ಪ್ರಮುಖರು, ಹಿರಿಯರು ಸಮಾಜೋತ್ಸವದಲ್ಲಿ ಭಾಗವಹಿಸಲಿದ್ದು, ಸಮಸ್ತ ಹಿಂದೂ ಸಮಾಜದ ಸುಮಾರು 2 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷತೆ ವಹಿಸುವ ಮೂಲಕ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದ ಕಾಂಗ್ರೆಸ್ ಮುಖಂಡ ವಿಜಯನಾಥ ವಿಠಲ ಶೆಟ್ಟಿ ಅವರು ಮಾತನಾಡಿ, ಹಿಂದೂ ಸಮಾಜೋತ್ಸವ ದೇಶದ ಎಲ್ಲಾ ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯಕ್ರಮವಾಗಿದೆ. ಇಲ್ಲಿ ಜಾತಿ, ಧರ್ಮಗಳ ಸಂಘರ್ಷವಿಲ್ಲ. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಭಾರತೀಯ. ಹಾಗೇಯೇ ಬಹು ಸಂಖ್ಯಾತ ಹಿಂದೂಗಳಿರುವ ಈ ದೇಶದಲ್ಲಿ ಹಿಂದೂತ್ವವನ್ನು ಒಗ್ಗೂಡಿಸುವ ಮೂಲಕ ವಿಎಚ್ಪಿ ಉತ್ತಮ ಕೆಲಸ ಮಾಡುತ್ತಿದೆ. ನಾನೊಬ್ಬ ಹಿಂದೂ ಎಂದು ಅಭಿಮಾನದಿಂದ ಹೇಳಿಕೊಂಡು ಈ ಕಾರ್ಯಕ್ರಮದಲ್ಲಿ ಸಂತೋಷದಿಂದ ಭಾಗವಹಿಸುತ್ತಿದ್ದೇನೆ ಎಂದು ಹೇಳಿದರು.
ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷತೆ ವಹಿಸಿರುವ ಈ ನಿಮ್ಮ ತೀರ್ಮಾನಕ್ಕಾಗಿ ನಿಮ್ಮ ವಿರುದ್ಧ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳುವುದಿಲ್ಲವೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯನಾಥ ವಿಠಲ ಶೆಟ್ಟಿ ಅವರು, ನಾನೊಬ್ಬ ಹಿಂದೂ, ಅದ್ದರಿಂದ ಮೊದಲು ರಾಷ್ಟ್ರ, ಹಿಂದುತ್ವ… ಬಳಿಕ ಪಕ್ಷ.. ಇದು ಹಿಂದೂ ರಾಷ್ಟ್ರ. ನಾವು ಹಿಂದೂ ಧರ್ಮವನ್ನು ಗೌರವಿಸಬೇಕು. ನಾನು ಹಿಂದೂ ಧರ್ಮವನ್ನು ಗೌರವಿಸುವ ಕಾರಣ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷ ಮತ್ತು ಹೆಮ್ಮೆ ಪಡುತ್ತೇನೆ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಭಾರತೀಯರು ಈ ದೇಶವನ್ನು ಸಂರಕ್ಷಿಸುವ ಜೊತೆಗೆ ಸಂವಿಧಾನ ಮತ್ತು ಕಾನೂನು ಗೌರವಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಮುಖಂಡರು ನನ್ನನ್ನು ಕಾಂಗ್ರೆಸ್ನ ಸದಸ್ಯನಾಗುವಂತೆ ಮೊದಲು ಆಹ್ವಾನ ನೀಡಿದರು. ರಾಜಕೀಯ ಪಕ್ಷವೊಂದು ನನ್ನನ್ನು ಪಕ್ಷ ಸೇರುವಂತೆ ಕರೆದ ಈ ಹಿನ್ನೆಲೆಯಲ್ಲಿ ನಾನು ಕಾಂಗ್ರೆಸ್ ಸೇರಿದೆ. ಆದರೆ ನಾನು ಕಾಂಗ್ರೆಸ್ ನಾಯಕ ಎಂದು ತಿಳಿದೂ ನನ್ನನ್ನು ವಿಶ್ವ ಹಿಂದೂ ಪರಿಷತ್ ಮುಖಂಡರು ಇಲ್ಲಿಗೆ ಅಹ್ವಾನ ನೀಡಿ ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷನ್ನಾಗಿ ಮಾಡಿರುವುದು ಅದು ಅವರ ದೊಡ್ಡಗುಣ ಎಂದು ಬಣ್ಣಿಸಿದರು.
ವಿಎಚ್ಪಿ ಮುಖಂಡ ಎಂ.ಬಿ.ಪುರಾಣಿಕ್ ಅವರು ಮಾತನಾಡಿ, ಧರ್ಮಕಾರ್ಯದ ಭಾಗವಾಗಿ 1968ರಲ್ಲಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ವಿಶ್ವ ಹಿಂದು ಪರಿಷತ್ ನ ಉದ್ಘಾಟನೆಯಾಗಿ ಕಳೆದ 46 ವರ್ಷಗಳಿಂದ ಹಿಂದೂ ಧರ್ಮದ ವಿರೋಧಿ ಷಡ್ಯಂತ್ರಗಳನ್ನು ಎದುರಿಸಿ, ಸಾಮಾಜಿಕ, ಧಾರ್ಮಿಕ, ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಾ ವಿಶ್ವ ಹಿಂದೂ ಪರಿಷತ್, ಹಿಂದೂ ಸಮಾಜಕ್ಕೆ ಎದುರಾಗಿರುವ ಗೋಹತ್ಯೆ, ಲವ್ ಜಿಹಾದ್ ಮತ್ತು ಮತಾಂತರ ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಜನರಲ್ಲಿ ಧರ್ಮಜಾಗೃತಿಯನ್ನು ಮೂಡಿಸುತ್ತಾ ಧರ್ಮರಕ್ಷಣೆಯ ಕಾರ್ಯದಲ್ಲಿ ಯಶಸ್ವಿಯಾಗಿದೆ.
ವಿಶ್ವದಾದ್ಯಂತ ವ್ಯಾಪಿಸಿರುವ ವಿಶ್ವ ಹಿಂದೂ ಪರಿಷತ್ ಜಗತ್ತಿನಾದ್ಯಂತ ಹಿಂದೂ ಧರ್ಮದ ಸಂಘಟನೆ, ಧರ್ಮ, ಸಂಸ್ಕ್ರತಿ ಹಾಗೂ ಜೀವನಾದರ್ಶನಗಳ ಸಂರಕ್ಷಣೆಯ ಸಂಕಲ್ಪದೊಂದಿಗೆ ಸಾಮಾಜಿಕ ,ಶೈಕ್ಷಣಿಕ, ಧಾರ್ಮಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅನೇಕ ಸೇವಾ ಕಾರ್ಯಗಳನ್ನು ಪೊರೈಸುತ್ತಾ “ಸ್ವರ್ಣಜಯಂತಿ” ಉತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾ ಹಿಂದೂ ಸಮಾಜದಲ್ಲಿ ಭರವಸೆಯ ಬೆಳಕನ್ನು ಮೂಡಿಸಿದೆ ಎಂದರು.
ಸಮಾಜೋತ್ಸವದಲ್ಲಿ ಜಾತಿ, ಮತ ಬೇದವಿಲ್ಲದೇ ಎಲ್ಲರೂ ಪಾಲ್ಗೊಳ್ಳ ಬಹುದು. ನಮ್ಮ ದೇಶ, ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ರಕ್ಷಿಸಲು ಇಂಥ ಸಮಾಜೋತ್ಸವ ಕಾರ್ಯಕ್ರಮ ಸಹಕಾರಿಯಾಗುತ್ತದೆ. ಈ ಹಿಂದೂ ಸಮಾಜೋತ್ಸವದ ಮೂಲಕ ಯಾವೂದೇ ಧರ್ಮದ ಜನರಿಗೆ ನೋವುಂಟು ಮಾಡುವ ಉದ್ದೇಶ ನಮಗಿಲ್ಲ. ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲ್ಲು ಎಲ್ಲರಿಗೂ ಅವಕಾಶ ಕಲ್ಪಿಸಿದ್ದೇವೆ. ಶಾಂತಿಯಿಂದ ಸಮಾಜೋತ್ಸವ ನಡೆಸಲು ನಾವು ಎಲ್ಲಾ ವರ್ಗದ ಜನರನ್ನು ಸಹೋದರರಂತೆ ಸ್ವಾಗತಿಸುತ್ತಿದ್ದೇವೆ. ಆದರೆ ಇದನ್ನೇ ನಮ್ಮ ದೌರ್ಬಲ್ಯ ಎಂದು ತಿಳಿದು, ನಮ್ಮ ರಾಷ್ಟ್ರೀಯತೆಗೆ ಅವಮಾನವಾಗುವಂತಹ ಯಾವೂದೇ ಘಟನೆಗಳು ನಡೆದರೆ ನಾವು ಸುಮ್ಮನ್ನೆ ಇರುವುದಿಲ್ಲ ಎಂದು ಪುರಾಣಿಕ್ ಹೇಳಿದರು.
ಪತ್ರಿಕಾಗೋಷ್ಥಿಯಲ್ಲಿ ಸಮಿತಿಯ ಕಾರ್ಯಧ್ಯಕ್ಷ ಜಗದೀಪ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಜೆತೇಂದ್ರ ಎಸ್ ಕೊಟ್ಟಾರಿ, ವಿಎಚ್ಪಿ ಮುಖಂಡ ಜಗದೀಶ್ ಶೇಣವ, ಬಜರಂಗದಳದ ರಾಜ್ಯ ಸಂಚಾಲಕ ಶರಣ್ ಪಂಪ್ವೆಲ್, ಜಿಲ್ಲಾ ಸಂಚಾಲಕ ಗೋಪಲ್ ಕುತ್ತಾರ್, ಸಹ ಸಂಚಾಲಕ ಭುಜಂಗ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.