ಬೆಳ್ತಂಗಡಿ ,ಜ.29 : ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಲ್ಲಂಗೇರಿ ಎಂಬಲ್ಲಿ ಜೀರ್ಣಾವಸ್ಥೆಯಲ್ಲಿದ್ದ ಕುರುಹೊಂದು “ಶ್ರೀ ಸೂರ್ಯನಾರಾಯಣ”ದೇಗುಲದ್ದೇ ಆಗಿದೆ ಎಂಬ ಅಂಶ ಇದೀಗ ಸ್ಪಷ್ಟವಾಗಿದೆ. ನೂರಾರು ವರುಷಗಳ ಹಿಂದೆಯೇ ಈ ಸ್ಥಳದಲ್ಲಿ ಆರಾಧನಾ ಕ್ಷೇತ್ರವೊಂದಿದ್ದು ಕಾಲನ ಮಹಿಮೆಗೆ ತುತ್ತಾಗಿ ನಶಿಸಿ ಹೋಗಿದೆ.
ಇದೀಗ ನದೀ ತಟದಲ್ಲಿ ಕೇವಲ ಕುರುಹುಗಳಷ್ಟೇ ಉಳಿದುಕೊಂಡಿವೆ. ಭಾರ್ಗವ ಋಷಿ ಗಾಯತ್ರೀ ಮಂತ್ರೋಪಾಸನೆಯ ಮೂಲಕ ಸೂರ್ಯನನ್ನು ಒಲಿಸಿಕೊಂಡು ಇಲ್ಲಿ ಕ್ಷೇತ್ರ ನಿರ್ಮಾಣ ಮಾಡಿದ್ದರು. ಆರೋಗ್ಯ, ಸಿದ್ಧಿಗೆ , ಸಂತಾನಕ್ಕೆ ಬೇಕಾಗಿ ಈ ಕ್ಷೇತ್ರದಲ್ಲಿ ಭಕ್ತಿ ಶ್ರದ್ಧೆಗಳಿಂದ ಸೇವೆ ಮಾಡಿದರೆ ಇಷ್ಟಾರ್ಥ ಫಲಿಸುತ್ತಿತ್ತು ಎಂಬ ಅಂಶ ಅಷ್ಟಮಂಗಲ ಪ್ರಶ್ನೆಯಿಂದ ಬಹಿರಂಗಗೊಂಡಿದೆ.
ಕ್ಷೇತ್ರದಲ್ಲಿ ಪ್ರಧಾನ ಶಕ್ತಿಯಾಗಿ ಸೂರ್ಯನಾರಾಯಣನ ಆರಾಧನೆ ನಡೆಯುತ್ತಿತ್ತು. ಕ್ಷೇತ್ರಶಕ್ತಿಗಳಾಗಿ ಗಣಪತಿ, ದುರ್ಗೆ,ಪೂರ್ಣಸಾನ್ನಿಧ್ಯದ ನಾಗ, ಸ್ಥಳದ ಮೂಲದೈವ ಪಂಜುರ್ಲಿ,ಗುಳಿಗ, ಕೊಡಮಣಿತ್ತಾಯಿಗಳಿಗೂ ಆರಾಧನೆ ಸಲ್ಲುತ್ತಿತ್ತು. ಇವುಗಳೆಲ್ಲವನ್ನು ಪುನರ್ ಸ್ಥಾಪಿಸಿ ಕ್ಷೇತ್ರ ನಿರ್ಮಾಣವಾಗಬೇಕಾಗಿದೆ ಎಂಬ ಅಂಶ ಅಷ್ಟಮಂಗಲ ಪ್ರಶ್ನೆಯ ಮೂಲಕ ಕಂಡುಬಂದಿದೆ.ತಂತ್ರಿಗಳಾದ ಉದಯ ಪಾಂಗಣ್ಣಾಯ ನೇತೃತ್ವದಲ್ಲಿ, ಅಜಿಲ ಅರಮನೆಯ ಪದ್ಮಪ್ರಸಾದ್ ಅಜಿಲರ ಮಾರ್ಗದರ್ಶನದಲ್ಲಿ, ದೈವಜ್ಞರಾದ ಮಾಡಾವು ವೆಂಕಟ್ರಮಣ ಭಟ್ ಹಾಗೂ ಕೇಕಣಾಜೆ ಗಣೇಶ್ ಭಟ್ ಅಷ್ಟಮಂಗಲ ಪ್ರಶ್ನೆ ಇರಿಸಿದ್ದರು.