ಉಡುಪಿ: ತಾಲೂಕಿನ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಮೆಣಸಿನಹಾಡಿ ಎಂಬಲ್ಲಿ ಶಿರ್ವಾದ ಉದ್ಯಮಿ ಒಬ್ಬರನ್ನು ಕೊಲೆ ಮಾಡಲು ಒಳಸಂಚು ನಡೆಸಿರುವ ಬಗ್ಗೆ ಖಚಿತ ವರ್ತಮಾನದೊಂದಿಗೆ ದಾಳಿ ನಡೆಸಿದ ಪೊಲೀಸರ ತಂಡವು ಮೂವರು ಆರೋಪಿಗಳನ್ನು ಮಂಗಳವಾರ ಬಂಧಿಸಿದೆ.
ಹೆಬ್ರಿಯ ಚಾರ ಗ್ರಾಮದ ನಿವಾಸಿ ದಿನಕರ ಪೂಜಾರಿ (29), ಉಡುಪಿಯ ಆರೂರು ಕುಂಜಾಲು ಗ್ರಾಮದ ಸಂದೀಪ್ ಮೊಗವೀರ, ಉಡುಪಿ ಶಿರ್ವ ಮಂಚಕಲ್ ನಿವಾಸಿ ಅರವಿಂದ ನಾಯಕ್ (31) ಬಂಧಿತ ಮೂವರು ನಟೋರಿಯಸ್ ಆರೋಪಿಗಳಾಗಿದ್ದು ಇವರಿಂದ ಪರಾಧ ನಡೆಸಲು ತಯಾರು ಮಾಡಿಕೊಂಡಿದ್ದ ರಿವಾಲ್ವರ್-1, ಸಜೀವ ಗುಂಡುಗಳು-2, ಲಾಂಗ್ ಮಚ್ಚು-1, 3 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಟೋರಿಯಸ್ ಬ್ಯಾಕ್-ಗ್ರೌಂಡ್: ಈ ಆರೋಪಿಗಳು ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿದವರಾಗಿದ್ದು,ದಿನಕರ ಪೂಜಾರಿ ಎಂಬವನ ವಿರುದ್ದ ಹೆಬ್ರಿ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ದಾಖಲಾಗದೆ. ಅರವಿಂದ ನಾಯಕ್ ಎಂಬವನ ವಿರುದ್ದ ಮಲ್ಪೆ ಪೊಲೀಸ್ ಠಾಣೆಯಲ್ಲಿ ಹಾಗೂ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಒಂದೊಂದು ಪ್ರಕರಣ ದಾಖಲಾಗಿರುತ್ತದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಅಣ್ಣಾಮಲೈ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ, ಉಡುಪಿ ಡಿವೈಎಸ್ಪಿ ಕೆ.ಎಂ. ಚಂದ್ರಶೇಖರ ಇವರುಗಳ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಚರಣೆಯ ನೇತ್ರತ್ವವನ್ನು ಡಿಸಿಐಬಿ ಪೊಲೀಸ್ ನಿರೀಕ್ಷಕ ಟಿ.ಆರ್ ಜೈಶಂಕರ್ ಮತ್ತು ಉಡುಪಿ ವೃತ್ತ ನಿರೀಕ್ಷಕ ಕೆ.ಶ್ರೀಕಾಂತ್ ಹಾಗೂ ಉಡುಪಿ ನಗರ ಠಾಣಾ ಪಿ.ಎಸ್.ಐ ಮಧು ಟಿ.ಎಸ್ ವಹಿಸಿದ್ದರು.
ಈ ಕಾರ್ಯಚರಣೆಯಲ್ಲಿ ಎ.ಎಸ್.ಐ ರೊಸಾರಿಯೊ ಡಿ’ಸೋಜ, ಸಿಬ್ಬಂದಿಯವರಾದ ರವಿಚಂದ್ರ, ಸುರೇಶ, ಸಂತೋಷ ಕುಂದರ್, ಸಂತೋಷ ನಿಟ್ಟೂರು, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ಮೋಹನ ಕೊತ್ವಾಲ್, ಥಾಮ್ಸನ್,ರಾಘವೇಂದ್ರ, ಬಶೀರ್, ಶಂಕರ ಮತ್ತು ಚಾಲಕರಾದ ಚಂದ್ರಶೇಖರ್ ಮತ್ತು ಮಹಾಬಲೇಶ್ವರ ಪಾಲ್ಗೊಂಡಿರುತ್ತಾರೆ. ಸದ್ಯ ಆರೋಪಿತರು ಮತ್ತು ಸ್ವತ್ತುಗಳನ್ನು ಹಿರಿಯಡ್ಕ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.