ಮಂಗಳೂರು,ಜ.27 : ಭತ್ತದ ಬೆಳೆಯಷ್ಟೇ ಪ್ರಾಮುಖ್ಯತೆ ಹೊಂದಿರುವ ತೆಂಗು ಬೆಳೆಯನ್ನು ನಿರ್ಲಕ್ಷಿಸದೆ ಬಹುಪಯೋಗಕ್ಕೆ ಬರುವ ತೆಂಗು ಬೆಳೆಗೆ ಪರ್ಯಾಯವಾದುದು ಮತ್ತೊಂದಿಲ್ಲ ಅದ್ದರಿಂದ ತೆಂಗು ಬೆಳೆಯನ್ನೇ ಪ್ರಧಾನವಾಗಿ ಕೈಗೊಳ್ಳಿ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ರೈತರಿಗೆ ಕರೆ ನೀಡಿದ್ದಾರೆ. ಅವರು ಮಂಗಳವಾರ ಮಂಗಳೂರು ತಾಲೂಕು ಗಂಜಿಮಠ ಒಡ್ಡೂರು ಫಾರ್ಮನಲ್ಲಿ ತೆಂಗು ಅಭಿವೃದ್ದಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಅಯೋಜಿಸಿದ್ದ ತೆಂಗು ಬೆಳೆಗಾರರ ಸಂಘ, ಒಕ್ಕೂಟ ಮತ್ತು ಕಂಪನಿ ರಚಿಸುವ ಕುರಿತು ನಡೆದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸ್ಪೆಷಲ್ ಅಗ್ರಿಕಲ್ಚರ್ ಜೊನ್ ರಚಿಸುವ ಮೂಲಕ ಈ ಭಾಗದ ಮಣ್ಣು, ನೀರು ಮತ್ತು ವಾತಾವರಣದ ಪರಿಶೀಲನೆ ಮಾಡುವ ಮೂಲಕ ಇಲ್ಲಿಗೆ ಸೂಕ್ತವಾದ ಬೆಳೆಗಳನ್ನು ಬೆಳೆಯಲು ಎಸ್.ಇ.ಜೆಡ್. ರೈತರಿಗೆ ನೆರವಾಗಬೇಕೆಂದು ತಿಳಿಸಿದ ಸಂಸದರು, ತೆಂಗಿನಿಂದ ಅನೇಕ ಉತ್ಪನ್ನಗಳನ್ನು ತಯಾರಿಸಬಹುದಾಗಿದ್ದು, ಇದರ ನಾರಿನಿಂದ ಪಕ್ಕದ ಕೇರಳ ರಾಜ್ಯದಲ್ಲಿ ರಸ್ತೆಗಳನ್ನು ಸಹ ಮಾಡಿದ್ದಾರೆ. ತೆಂಗಿನ ನೀರಾ, ಕರಟ, ಇತ್ಯಾದಿಗಳು ಅತ್ಯಂತ ಬೇಡಿಕೆಯನ್ನು ತರಬಲ್ಲವಾಗಿರುವುದರಿಂದ ರೈತರು ತೆಂಗು ಬೆಳೆಯನ್ನು ನಿರ್ಲಕ್ಷಿಸದೇ ಆಸಕ್ತಿಯಿಂದ ಬೆಳೆದಲ್ಲಿ ಮುಂದೆ ಹೆಚ್ಚಿನ ಲಾಭ ಪಡೆಯ ಬಹುದೆಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಂಗು ಬೆಳೆಗಾರರಿಗೆ ಮೀಸಲಿಟ್ಟಿರುವ ಅನೇಕ ಯೋಜನೆಗಳು ತೆಂಗು ಬೆಳೆಗಾರರಿಗೆ ತಲುಪಿಸುವಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು , ತೆಂಗು ಅಭಿವೃದ್ದಿ ಮಂಡಳಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸಂಜೀವ ಪೂಜಾರಿಯವರು ಮತ್ತು ತೆಂಗು ಅಭವೃದ್ದಿ ಮಂಡಳಿಯ ಅಧಿಕಾರಿ ಮಾತನಾಡಿ ತೆಂಗು ಬೆಳೆಗಾರರು ಪ್ರತಿ ಗ್ರಾಮದಲ್ಲಿ ಒಂದೊಂದು ತೆಂಗು ಬೆಳೆಗಾರರ ಸಂಘವನ್ನು ಸ್ಥಾಪಿಸಿ ತನ್ಮೂಲಕ ತೆಂಗು ಬೆಳೆಗಾರರ ಒಕ್ಕೂಟವನ್ನು ಮತ್ತು ಕಂಪನಿಯನ್ನು ರಚಿಸಿದ್ದೇ ಅದಲ್ಲಿ ತೆಂಗು ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಬೇಡಿಕೆ ಬಂದು ಉತ್ತಮ ಲಾಭ ಗಳಿಸಬಹುದೆಂದು ಸಂಘ ಒಕ್ಕೂಟ ಮತ್ತು ಕಂಪನಿಗಳನ್ನು ರಚಿಸುವ ಬಗ್ಗೆ ವಿವರವಾಗಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಗತಿಪರ ಸಾವಯವ ತೆಂಗು ಕೃಷಿಕ ರಾಜಶೇಖರ ನಾಯಕ್ ವಹಿಸಿದ್ದರು. ಜಿಲ್ಲೆಯ ಎಲ್ಲಾ ತಾಲೂಕುಗಳ ತೆಂಗು ಬೆಳೆಗಾರರು ಸಭೆಯಲ್ಲಿ ಭಾಗವಹಿಸಿದ್ದರು.