ಮಂಗಳೂರು,ಜ.26 : ದಕ್ಷಿಣ ಕನ್ನಡ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಮಂಗಳೂರು ನಗರ ಸಂಚಾರ ಪೊಲೀಸ್ ಹಾಗೂ ಆರೋಗ್ಯ ಮತ್ತು ಅಭಿವೃದ್ಧಿ ಕೇಂದ್ರದ ಆಶ್ರಯದಲ್ಲಿ ಜರುಗಿದ 26ನೇ ರಾಷ್ಟ್ರೀಯ ರಸ್ತೆ ಜಾಗೃತಿ ಸಪ್ತಾಹದ ಅಂಗವಾಗಿ ಭಾನುವಾರ ಸಾರ್ವಜನಿಕರ ಬೈಕ್ ರ್ಯಾಲಿ ನಡೆಯಿತು.
ಡಿಸಿಪಿ ವಿಷ್ಣುವರ್ಧನ್ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಎಸಿಪಿ ಉದಯ ಕುಮಾರ್, ಆರೋಗ್ಯ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಡಾ. ಎಡ್ಮಂಡ್ ಫರ್ನಾಂಡಿಸ್, ಡಾ. ಸೋಮಶೇಖರ್, ಇನ್ಸ್ಪೆಕ್ಟರ್ ಗುರು ಕಾಮತ್, ಎಆರ್ಟಿಒ ಎಸ್.ಜಿ. ಹೆಗ್ಡೆ, ಪಿಎಸ್ಐ ಗೋಪಾಲಕೃಷ್ಣ, ಆರ್ಜೆ ಎರಲ್ ಇದ್ದರು.
ಬೈಕ್ ರ್ಯಾಲಿ ನಗರದ ನೆಹರೂ ಮೈದಾನದಿಂದ ಪ್ರಾರಂಭವಾಗಿ ಎಂ.ಜಿ. ರೋಡ್ ಮೂಲಕ ಲಾಲ್ಬಾಗ್ ತಲುಪಿ ಬಳಿಕ ಲೇಡಿಹಿಲ್ನಲ್ಲಿರುವ ಮಂಗಳ ಕ್ರೀಡಾಂಗಣದ ಬಳಿ ಸಮಾಪನಗೊಂಡಿತು. 100 ಕ್ಕೂ ಅಧಿಕ ಬೈಕ್ಗಳು ಪಾಲ್ಗೊಂಡವು.
ಬಳಿಕ ಪಿಎಸ್ಐ ಗೋಪಾಲಕೃಷ್ಣ ಮಾತನಾಡಿ, ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವುದಲ್ಲದೆ, ಎಲ್ಲರೂ ತಮ್ಮ ವಾಹನದಲ್ಲಿ ಪಂಚ್ ಮಾಡಿರೋ ನಂಬರ್ ಪ್ಲೇಟ್ ಹೊಂದಿರಬೇಕು. ಆದಾಯದ ಉದ್ದೇಶದಿಂದ ಪೊಲೀಸರು ಯಾರಿಗೂ ದಂಡ ಹಾಕುವುದಿಲ್ಲ. ಪೊಲೀಸರ ಭಯದಿಂದಾಗಿಯಾದರೂ ಜನರು ಸಾರಿಗೆ ನಿಯಮಗಳನ್ನು ಪಾಲಿಸಲಿ ಎಂದು ನಮ್ಮ ಉದ್ದೇಶ ಎಂದರು.
ಈ ವೇಳೆ ಇನ್ಸ್ಪೆಕ್ಟರ್ ಗುರು ಕಾಮತ್ ಹಾಗೂ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರ ನಡುವೆ ಸಾರಿಗೆಯಲ್ಲಿ ವಹಿಸಬೇಕಾದ ಎಚ್ಚರಿಕೆ ಹಾಗೂ ಮುಂದಿನ ಕಾರ್ಯ ಯೋಜನೆಯ ಬಗ್ಗೆ ಚರ್ಚೆ ನಡೆಯಿತು. ಅನಗತ್ಯ ರಸ್ತೆ ಉಬ್ಬುಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಬೈಕ್ ಸವಾರರೊಬ್ಬರು ಹೇಳಿದಾಗ, ರಸ್ತೆಗಳಲ್ಲಿ ಎಲ್ಇಡಿ ಸಿಗ್ನಲ್ ಅಳವಡಿಕೆ, ಉಬ್ಬುಗಳಿಗೆ ಬಣ್ಣ ಹಚ್ಚುವ ಕಾರ್ಯ ನಡೆಸಲಾಗುವುದು ಎಂದು ಗುರು ಕಾಮತ್ ಹೇಳಿದರು.