ಕನ್ನಡ ವಾರ್ತೆಗಳು

ವೆನ್ ಲಾಕ್ ಅಸ್ಪತ್ರೆಯಲ್ಲಿ ಅತ್ಯಾಧುನಿಕ ಡಯಾಲಿಸಿಸ್ ಘಟಕ ಶೀಘ್ರದಲ್ಲೇ ಆರಂಭ

Pinterest LinkedIn Tumblr

UT_Kadar_Pic

ಮಂಗಳೂರು,ಜ.26: ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಡಯಾಲಿಸಿಸ್ ಘಟಕವನ್ನು ಫೆಬ್ರವರಿ ಅಂತ್ಯದೊಳಗೆ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

ಕೊಟ್ಟಾರದ ಕರಾವಳಿ ಕಾಲೇಜು ಸಭಾಂಗಣದಲ್ಲಿ ಮಂಗಳೂರು ನೆಫ್ರೊ- ಯುರಾಲಜಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ನಡೆಯುತ್ತಿರುವ ಕಿಡ್ನಿ ಆರೋಗ್ಯ ಅಭಿಯಾನದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

12-15 ಹಾಸಿಗೆಯುಳ್ಳ ಘಟಕಕ್ಕೆ ಕಟ್ಟಡದ ನವೀಕರಣ, ಆಧುನಿಕ ಯಂತ್ರೋಪಕರಣಗಳ ಅಗತ್ಯವಿದ್ದು, ಇದಕ್ಕೆ ಸಿಂಡಿಕೇಟ್ ಬ್ಯಾಂಕ್ 15 ಲಕ್ಷ ರೂ. ನೆರವು ನೀಡುತ್ತಿದೆ. ಕಿಡ್ನಿ ಸಮಸ್ಯೆ ಇರುವವರು ಸಂತಸದಿಂದ ಚಿಕಿತ್ಸೆ ಪಡೆಯಬೇಕು ಎಂಬುದು ನಮ್ಮ ಉದ್ದೇಶ ಎಂದು ಸಚಿವರು ಹೇಳಿದರು.

ಹಿಂದೆ ಮೂತ್ರಪಿಂಡ ಕಸಿ ಮಾಡುವುದು ಸುಲಭ ಆಗಿರಲಿಲ್ಲ. ರಾಜ್ಯದ ಯಾವುದೇ ಮೂಲೆಯವರು ಚಿಕಿತ್ಸೆ ಪಡೆಯುವುದಾದರೂ ಬೆಂಗಳೂರಿಗೆ ಬಂದು ತಜ್ಞರ ಸಮಿತಿ ಮುಂದೆ ಹಾಜರಾಗಬೇಕಿತ್ತು. ಈಗ ಅದನ್ನು ಸರಳೀಕರಣ ಮಾಡಿದ್ದು, ಚಿಕಿತ್ಸೆ ಪಡೆಯುವ ಆಸ್ಪತ್ರೆಯಲ್ಲೇ ಸಮಿತಿ ರಚಿಸಲಾಗಿದೆ. ಆ ಸಮಿತಿ ಅನುಮೋದನೆ ನೀಡಿದರೆ ಸಾಕಾಗುತ್ತದೆ ಎಂದರು.

ಯಾವುದೇ ವೈದ್ಯ, ಆಸ್ಪತ್ರೆ ಅಥವಾ ಶ್ರೀಮಂತರ ಮಾತು ಕೇಳದೆ, ಕೇವಲ ರಿಕ್ಷಾ ಚಾಲಕನೊಬ್ಬನ ಅನುಭವದ ಮಾತುಗಳಿಂದ ಪೆರಿಟೋನಿಯಂ ಡಯಾಲಿಸಿಸ್ ಸೌಲಭ್ಯವನ್ನು ಪ್ರಥಮ ಬಾರಿಗೆ ಆರಂಭಿಸಿದ್ದು, ಅನೇಕರಿಗೆ ಪ್ರಯೋಜನ ಆಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಎಪಿಎಲ್ ಕುಟುಂಬಕ್ಕೂ ವಿಮೆ ಯೋಜನೆ ಜಾರಿಗೆ ತಂದಿರುವ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಇದರ ಅಧ್ಯಯನಕ್ಕಾಗಿ ಕೇರಳದ ಸಚಿವರು ಬಂದಿದ್ದರು ಎಂದು ಅವರು ಹೇಳಿದರು. ಜಮೀಯತುಲ್ ಫಲಾಹ್ ಸಂಘಟನೆ ಅಧ್ಯಕ್ಷ ಸಾದುದ್ದೀನ್ ಸಾಲಿಹ್, ಕಿಡ್ನಿ ಆರೋಗ್ಯ ತಜ್ಞ ಡಾ.ಪ್ರದೀಪ್ ಉಪಸ್ಥಿತರಿದ್ದರು.

ಆರೋಗ್ಯ ಅಭಿಯಾನದ ಅಧ್ಯಕ್ಷ ಹಾಗೂ ಕರಾವಳಿ ಸಮೂಹದ ಕಾಲೇಜುಗಳ ಅಧ್ಯಕ್ಷ ಗಣೇಶ್ ಎಸ್.ರಾವ್ ಸ್ವಾಗತಿಸಿ, ಕಿಡ್ನಿ ಆರೋಗ್ಯ ರಕ್ಷಣೆಯ ಪ್ರತಿಜ್ಞೆ ಬೋಧಿಸಿದರು. ಅಭಿಯಾನದ ಸಂಘಟಕ ಉಮರ್ ಯು.ಎಚ್. ಪ್ರಾಸ್ತಾವಿಕ ಮಾತನಾಡಿದರು. ಮಂಗಳೂರು ನೆಫ್ರೊ- ಯೂರಾಲಜಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಮುಹಮ್ಮದ್ ಸಲೀಂ ವಂದಿಸಿದರು.

ಒಬಾಮಾ ಮಾಡದ್ದುನೀವು ಮಾಡಿದ್ದೀರಿ…: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಎಲ್ಲರಿಗೂ ಆರೋಗ್ಯ ವಿಮೆ ಯೋಜನೆ ಆರಂಭಿಸುತ್ತೇನೆ ಎಂದು ಹೇಳಿದ್ದರೂ ಮಾಡಲಾಗಿಲ್ಲ. ಆದರೆ, ನೀವು ಎಪಿಎಲ್ ಕುಟುಂಬಕ್ಕೂ ರಾಜೀವ್ ಆರೋಗ್ಯ ಭಾಗ್ಯ, ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಮೂಲಕ ಒಬಾಮಾರನ್ನೂ ಮೀರಿಸಿದ್ದೀರಿ ಎಂದು ನಾರಾಯಣ ಹೃದಯಾಲಯದ ವೈದ್ಯ ಡಾ.ದೇವಿಪ್ರಸಾದ ಶೆಟ್ಟಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

Write A Comment