ಮಂಗಳೂರು, ಜ.26 : ದ.ಕ.ಜಿಲ್ಲಾಡಳಿತದ ವತಿಯಿಂದ 66 ನೇ ಗಣರಾಜ್ಯೋತ್ಸವವನ್ನು ಸೋಮವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಧ್ವಜಾರೋಹಣ ನೆರವೇರಿಸಿದರು. “ಜನಗಣ ಮಣ” ರಾಷ್ಟ್ರಗೀತೆ ಹಾಗೂ “ನೇಗಿಲಯೋಗಿ” ನಾಡ ಗೀತೆಯ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದ ಬಳಿಕ ಉಸ್ತುವಾರಿ ಸಚಿವರು ತಮ್ಮ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಉಗ್ರಪ್ಪ ನಾಯಕ್, ಕೃಷ್ಣ, ಕೆ.ಮೊಹಮ್ಮದ್, ಕಾಂತಪ್ಪ ಗೌಡ, ಜಿ.ಮೇರಿ ತೌರೋ ಹಾಗೂ ಡಾ.ರಾಜೇಶ್ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಲ್ಲಿ ಅಯೋಜಿಸಲಾಗಿದ್ದ ಪ್ರಬಂಧ ಶ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರೇಕ್ಷ ಶೆಟ್ಟಿ, ದ್ವಿತೀಯ ಸ್ಥಾನ ಪಡೆದ ಜಸ್ಮಿತಾ, ತೃತೀಯ ಸ್ಥಾನ ಪಡೆದ ಮನು ಶ್ರೇಯಸ್ ಹಾಗೂ ಚಿತ್ರಕಲಾ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಮರ್ಷ, ದ್ವಿತೀಯ ಸ್ಥಾನ ಪಡೆದ ಟಿ.ಚೇತನ್ ಮತ್ತು ತೃತೀಯ ಸ್ಥಾನ ಪಡೆದ ಪ್ರಸನ್ನ ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
92.7 ಬಿಗ್ ಎಫ್ಎಂನವರ ಸ್ಪ್ಲೇಷ್ ತಂಡದ ಸದಸ್ಯರು ಕೇವಲ ಐದು ನಿಮಿಷಗಳಲ್ಲಿ ರಾಷ್ಟ್ರೀಯ ಧ್ವಜದ ಭಾವಚಿತ್ರವನ್ನು ಬಿಡಿಸಿ ನೆರೆದವರ ಮೆಚ್ಚುಗೆಗೆ ಪಾತ್ರರಾದರು..
ದ.ಕ.ಜಿಲ್ಲಾಧಿಕಾರಿ ಎಬಿ ಇಬ್ರಾಹಿಂ, ಮಂಗಳೂರು ಮೇಯರ್ ಮಹಾಬಲ ಮಾರ್ಲ, ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್ ಲೋಬೋ, ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಎ ಮೊಹಿದ್ದೀನ್ ಬಾವಾ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ನಿಕ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ಧಿನೇನಿ, ಮನಪಾ ಅಯುಕ್ತರಾದ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಡಾ.ಶರಣಪ್ಪ , ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.
***************************************************************
ಪಶ್ಚಿಮವಾಹಿನಿ ಮಂಜೂರಾತಿಗೆ ಸರಕಾರದ ಚಿಂತನೆ: ಸಚಿವ ರೈ ಅವರಿಂದ ಗಣರಾಜ್ಯೋತ್ಸವ ಸಂದೇಶ
ಮಂಗಳೂರು : ದ.ಕ. ಜಿಲ್ಲೆಯಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮಹತ್ವಾಕಾಂಕ್ಷಿ ‘ಪಶ್ಚಿಮ ವಾಹಿನಿ’ ಯೋಜನೆಗೆ ಮಂಜೂರಾತಿ ನೀಡಲು ಸರಕಾರ ಚಿಂತನೆ ನಡೆಸಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ನಗರದ ನೆಹರೂ ಮೈದಾನದಲ್ಲಿ ಇಂದು ದ.ಕ. ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಪರೇಡ್ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿದ ಬಳಿಕ ಅವರು ಸಂದೇಶ ನೀಡಿದರು.
ಜಿಲ್ಲೆಗೆ 48 ಹೊಸ ಸರ್ವೇಯರ್ಗಳನ್ನು ನೇಮಕ ಮಾಡಿದ್ದು, ಹಾಲಿ ವರ್ಷದಲ್ಲಿ ಜಮೀನಿನ ಗಡಿ ಗುರುತಿಸಲು ಬಾಕಿ ಇರುವ ಎಲ್ಲಾ 6,106 ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಆಡಳಿತದ ಹಿತದೃಷ್ಟಿಯಿಂದ ಜನಸಂಖ್ಯೆಗೆ ಅನುಗುಣವಾಗಿ ಪ್ರಸ್ತುತ ಅಸ್ತಿತ್ವದಲ್ಲಿರುವ ಗ್ರಾಮ ಪಂಚಾಯತ್ಗಳಿಂದ ಗ್ರಾಮಗಳನ್ನು ಬೇರ್ಪಡಿಸಿ ಪ್ರತ್ಯೇಕ ಗ್ರಾ.ಪಂ.ಗಳ ರಚನೆಯಡಿ ಜಿಲ್ಲೆಯಲ್ಲಿ 29 ನೂತನ ಗ್ರಾ.ಪಂ.ಗಳು ರಚನೆಯಾಗಲಿವೆ ಎಂದು ಸಚಿವ ರೈ ತಿಳಿಸಿದರು.
ಪ್ರತಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಐದು ಗ್ರಾಮಗಳನ್ನು ಆಯ್ಕೆ ಮಾಡಿ ಆ ಗ್ರಾಮಗಳ ಅಭಿವೃದ್ಧಿಗೆ ಅನುದಾನ ಒದಗಿಸಿ ಗ್ರಾಪಂಗಳ ಮೂಲಕ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ‘ಗ್ರಾಮ ವಿಕಾಸ’ ಎಂಬ ಯೋಜನೆಯನ್ನು ಸರಕಾರ ಜಾರಿಗೊಳಿಸಿದೆ. ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 20 ಕಿ.ಮೀ. ರಸ್ತೆಯನ್ನು ಈ ವರ್ಷದಲ್ಲಿ ಅಭಿವೃದ್ಧಿ ಪಡಿಸುವ ಗುರಿ ಹೊಂದ ಲಾಗಿದೆ ಎಂದವರು ವಿವರಿಸಿದರು.
ಗ್ರಾಮೀಣ ಭಾಗದಲ್ಲಿ ಬಚ್ಚಲು ಮನೆ ಹೊಂದಿಲ್ಲದ ಕುಟುಂಬಗಳಿಗೆ 20,000 ರೂ. ಘಟಕ ವೆಚ್ಚದಲ್ಲಿ ಬಚ್ಚಲು ಮನೆ ನಿರ್ಮಾಣಕ್ಕಾಗಿ ಗೌರವ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ದೊರಕಿದ್ದು, ಶೀಘ್ರದಲ್ಲೇ ಯೋಜನೆ ಆರಂಭಗೊಳ್ಳಲಿದೆ ಎಂದು ಸಚಿವ ರೈ ಈ ಸಂದರ್ಭ ತಿಳಿಸಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸರಕಾರ ನೌಕರರಿಗೆ ನೀಡುವ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಆರು ಮಂದಿಗೆ ಪ್ರದಾನ ಮಾಡಲಾಯಿತು. ಇದಲ್ಲದೆ ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಥ ಸಂಚಲನದಲ್ಲಿ ಪ್ರಥಮ ಸ್ಥಾನವನ್ನು ಪಡೆದ ನೇವಲ್ ಎನ್ಸಿಸಿ ಸೀನಿಯರ್ ಹಾಗೂ ದ್ವಿತೀಯ ಸ್ಥಾನ ಪಡೆದ ಏರ್ವಿಂಗ್ ಎನ್ಸಿಸಿ ಜೂನಿಯರ್ ತಂಡಕ್ಕೆ ಶೀಲ್ಡ್ ನೀಡಿ ಗೌರವಿಸಲಾಯಿತು.
ಬಳಿಕ ಕೊಡಿಯಾಲ್ಬೈಲ್ನ ಸಂತ ಅಲೋಶಿಯಸ್ ಹಿ.ಪ್ರಾಥಮಿಕ ಶಾಲೆ , ಗುಜರಾತಿ ಆಂಗ್ಲ ಮಾಧ್ಯಮ ಶಾಲೆ ಅಳಕೆ, ಉರ್ವದ ಸಂತ ಅಲೋಶಿಯಸ್ ಪ್ರೌಢಶಾಲೆ, ಪೊಂಪೈ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಂಡವು. ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಲಕುಮಿ ತಂಡದಿಂದ ರಸ್ತೆ ಸಂಚಾರಿ ನಿಯಮಗಳ ಬಗ್ಗೆ ಕಿರು ಪ್ರಹಸನ ಪ್ರದರ್ಶನಗೊಂಡಿತು.
ಇದೇ ವೇಳೆ ಹಳೆ ಕಾರು ಹಾಗೂ ಬೈಕುಗಳ ರ್ಯಾಲಿಗೆ ದ.ಕ. ಜಿಪಂ ಸಿಇಒ ತುಳಸಿ ಮದ್ದಿನೇನಿ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಸದ ನಳಿನ್ಕುಮಾರ್ ಕಟೀಲ್, ಮೇಯರ್ ಮಹಾಬಲ ಮಾರ್ಲ, ಉಪ ಮೇಯರ್ ಕವಿತಾ ವಾಸು, ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್.ಲೋಬೊ, ಐವನ್ ಡಿಸೋಜ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್, ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ., ಮಂಗಳೂರು ಪೊಲೀಸ್ ಆಯುಕ್ತ ಎಸ್.ಮುರುಗನ್, ಮನಪಾ ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.
ಕಸ್ತೂರಿ ರಂಗನ್ ವರದಿಯ ಕುರಿತು ಜನರಲ್ಲಿರುವ ಸಂಶಯ ನಿವಾರಣೆಗೆ ಹಾಗೂ ಪರಿಹಾರ ಕ್ರಮಕ್ಕೆ ಸರಕಾರ ಮುಂದಾಗಿದ್ದು, ಪರಿಸರ ಸೂಕ್ಷ್ಮಅರಣ್ಯ ಪ್ರದೇಶದ ನಿವಾಸಿಗಳು ಹಾಗೂ ಕೃಷಿಕರಿಗೆ ಯಾವುದೇ ರೀತಿಯ ಕೃಷ್ಟ ನಷ್ಟವಾಗದಂತೆ ಸಮಸ್ಯೆ ಪರಿಹಾರಕ್ಕೆ ಮುಂದಾಗಿದೆ ಎಂದು ಸಚಿವ ರಮಾನಾಥ ರೈ ಗಣರಾಜ್ಯೋತ್ಸವ ಸಂದೇಶದಲ್ಲಿ ಭರವಸೆ ನೀಡಿದ್ದಾರೆ.