ಮಂಗಳೂರು,ಜ.24 : ಶೈಕ್ಷಣಿಕ ಜೀವನದಲ್ಲಿ ಪದವಿ ಪಡೆಯುವುದು ಒಂದು ಹೆಮ್ಮೆಯ ಸಂದರ್ಭ ಮತ್ತು ಸ್ಮರಣೀಯ ಸನ್ನಿವೇಶವಾಗಿದ್ದು, ಅದು ಅಂತಿಮವಲ್ಲ. ಅದೊಂದು ಕೇವಲ ವೃತ್ತಿ ಜೀವನದ ಪ್ರಾರಂಭಿಕ ಅಧ್ಯಾಯ ಮಾತ್ರ. ಶಿಕ್ಷಣ ಮತ್ತು ಜ್ಞಾನ ಕೌಶಲ್ಯ ಸಂಪಾದಿಸುವುದು ನಿರಂತರ ಮತ್ತು ಜೀವನಪರ್ಯಂತ ಪ್ರಕ್ರಿಯೆ. ಅದನ್ನು ಪರಿಪಾಲಿಸಿದರೆ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ| ಪಿ.ಎಸ್. ಯಡಪಡಿತಾಯ ಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಶನಿವಾರ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಜರಗಿದ ಶ್ರೀದೇವಿ ತಾಂತ್ರಿಕ ಶಿಕ್ಷಣ ಸಂಸ್ಥೆಯ 5 ನೇ ಸಾಲಿನ ಇಂಜಿನಿಯರಿಂಗ್, ಎಂ.ಬಿ.ಎ., ಎಂ.ಸಿ.ಎ ಹಾಗೂ 2ನೇ ಸಾಲಿನ ಎಂ.ಟೆಕ್ ವಿಭಾಗದ ನೂತನ ಪದವೀಧರ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ನೂತನ ಪದವೀಧರರನ್ನುದ್ದೇಶಿಸಿ ಮಾತನಾಡಿದರು.
ಪದವಿ ಪ್ರಮಾಣ ಪತ್ರವು ಕೇವಲ ಒಂದು ಶೈಕ್ಷಣಿಕ ಜೀವನದ ಪಾಸ್ಪೋರ್ಟ್ ಅರ್ಹತೆ ಮಾತ್ರವಾಗಿದ್ದು, ವೃತ್ತಿ ಜೀವನಕ್ಕೆ ವೀಸಾ ಪಡೆಯಲು ಸ್ವಲ್ಪ ಸಮಯದ ಅವಶ್ಯಕತೆ ಇದೆ ಎಂದು ನುಡಿದು, ವೃತ್ತಿ ಜೀವನದಲ್ಲಿ ನಾಯಕತ್ವ ಮತ್ತು ಸ್ಪರ್ಧಾತ್ಮಕ ಗುಣಗಳನ್ನು ಬೆಳೆಸಿ, ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು. ಬಳಿಕ ನೂತನ ಪದವೀಧರರಿಗೆ ಪದವಿ ಪ್ರದಾನ ಮಾಡಿ, ಅಭಿನಂದಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಎ. ಸದಾನಂದ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಮೌಲ್ಯಾಧರಿತ ಶಿಕ್ಷಣ ನೀಡಲು ಬದ್ಧರಾಗಿದ್ದೇವೆ ಎಂಬ ಆಶ್ವಾಸನೆ ನೀಡಿದರು. ಪ್ರಾಂಶುಪಾಲರಾದ ಡಾ| ದಿಲೀಪ್ ಕುಮಾರ್ ಸುಮಾರು 300 ನೂತನ ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ನಿಧೀಶ್ ಶೆಟ್ಟಿ, ಕಾರ್ಯದರ್ಶಿ ಶ್ರೀಮತಿ ಮೈನಾ ಶೆಟ್ಟಿ, ಕೋಶಾಧಿಕಾರಿ ಶ್ರೀಮತಿ ಪ್ರಿಯಾಂಕ ಶೆಟ್ಟಿ ಹಾಗೂ ಸಂಘಟಕಿ ಪ್ರೊ| ವಿದ್ಯಾ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡಾ| ದಿಲೀಪ್ ಕುಮಾರ್ ಸ್ವಾಗತಿಸಿದರು. ಸಹಾಯಕ ಉಪನ್ಯಾಸಕರಾದ ವೆಂಕಟೇಶ್ ಅಮೀನ್ ಹಾಗೂ ಶ್ರೀಮತಿ ಅರುಣಾ ಮಿನೆಜಸ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀ ಅಶ್ವಿನ್ ಸಿಕ್ವೆರಾ ವಂದಿಸಿದರು.