ಮುಂಬೈ,ಜ.22 : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿ ಹಿಂತಿರುಗುವ ಮುನ್ನ ದಾಳಿ ಮಾಡುತ್ತೇವೆ ಎಂಬ ಉಗ್ರರ ಹಿಟ್ಲಿಸ್ಟ್ನಲ್ಲಿ ಮುಂಬೈಯ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯವೂ ಇದೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಮುಂಬೈಯಲ್ಲಿರುವ ಈ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ ನಡೆಯುತ್ತಿದ್ದು, ಆ ದಿನ ಸುಮಾರು 60,000 ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಆ ದಿನವೇ ದಾಳಿ ನಡೆಸಲು ಉಗ್ರರು ಸಿದ್ಧತೆ ನಡೆಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಹಾರಾಷ್ಟ್ರ ಪೊಲೀಸರಿಗೆ ಸೂಚನೆ ನೀಡಿದೆ.
ಪಾಕಿಸ್ತಾನದ ಉಗ್ರ ಸಂಘಟನೆಯಾದ ಲಷ್ಕರೆ ತೊಯ್ಬಾ ಮತ್ತು ಇನ್ನೊಂದು ಉಗ್ರ ಸಂಘಟನೆ ಒಬಾಮ ಭೇಟಿ ವೇಳೆ ಉಗ್ರ ಕೃತ್ಯಗಳನ್ನು ನಡೆಸುವ ಮೂಲಕ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಲು ಹೆಣಗಾಡುತ್ತಿದೆ. ಆದ್ದರಿಂದಲೇ ಭಾರತದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. 2000 ಇಸ್ವಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದಾಗ ಕಾಶ್ಮೀರದ ಒಂದು ಗ್ರಾಮದಲ್ಲಿ 26 ಸಿಖ್ರನ್ನು ಹತ್ಯೆಗೈಯ್ಯಲಾಗಿತ್ತು. ಆ ಕೃತ್ಯ ನಡೆಸಿದ್ದು ಲಷ್ಕರೆ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಎಂದು ಭಾರತ ಆರೋಪಿಸಿತ್ತು.