ಮಂಗಳೂರು,ಜ.21 : ಪ್ರಾಣಕ್ಕೆ ಕುತ್ತು ತರುವ ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿದ್ದು ಆರೋಗ್ಯದ ಕುರಿತು ಜನತೆ ಕಾಳಜಿ ವಹಿಸುವ ಜೊತೆಗೆ, ತಂಬಾಕಿನಿಂದ ಆಗುವ ಅಪಾಯದ ಕುರಿತು ಜಾಗೃತಿ ಕಾರ್ಯಕ್ರಮಗಳು ಕೂಡ ಹೆಚ್ಚಾಗಿ ಆಗಬೇಕು ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅಭಿಪ್ರಾಯಿಸಿದ್ದಾರೆ. ಅವರು ಇಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಕರ್ನಾಟಕದಲ್ಲಿ ತಂಬಾಕು ನಿಯಂತ್ರಣ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಸಾಮರ್ಥ್ಯಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಸಿಗರೇಟ್ ಮತ್ತು ತಂಬಾಕು ಸೇವನೆಯಿಂದ ಶೇ.20ರಷ್ಟು ಮಂದಿ ಬಲಿಯಾಗುತ್ತಿದ್ದಾರೆ. ತಂಬಾಕು ನಿಯಂತ್ರಣ ಕುರಿತ ಕೋಪ್ತಾ ಕಾಯ್ದೆ ಬಂದು 11 ವರ್ಷಗಳು ಕಳೆದರೂ ಕಾಯ್ದೆಯ ವಿಸ್ತಾರ, ಪ್ರಯೋಜನ, ಅನುಷ್ಠಾನದ ಬಗ್ಗೆ ಇನ್ನೂ ಅಧಿಕಾರಿಗಳಿಗೇ ಸಮರ್ಪಕವಾದ ಮಾಹಿತಿ ಇಲ್ಲವಾಗಿದೆ. ಜಾಗತಿಕವಾಗಿ 50 ಲಕ್ಷ ಜನ ಈ ತಂಬಾಕು ಉತ್ಪನ್ನಗಳ ಬಳಕೆಯಿಂದ ನಾನಾ ರೀತಿಯ ಕಾಯಿಲೆಗಳಿಂದ ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ.
ಭಾರತದಲ್ಲೂ 10 ಲಕ್ಷ ಜನ ತಂಬಾಕು ಉತ್ಪನ್ನಗಳ ಸೇವನೆಯಿಂದ ಬಲಿಯಾಗು ತ್ತಿದ್ದಾರೆ. ಮುಖ್ಯವಾಗಿ ಯುವಜನತೆ ಈ ಚಟಕ್ಕೆ ಆಕರ್ಷಿ ತರಾಗುವುದರಿಂದ ಶಾಲಾ ಕಾಲೇಜುಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು.ತಂಬಾಕು ಬಳಕೆ ಸಂಪೂರ್ಣ ನಿಷೇಧ ಸಾಧ್ಯವಾಗದಿದ್ದರೂ ಅದರ ಬಳಕೆ ಕಡಿಮೆಯಾಗಬೇಕು. ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಇಂತಹ ಉತ್ಪನ್ನಗಳು ಮಾರಾಟವಾಗದಂತೆ ಪೊಲೀಸರು ಎಚ್ಚರವಹಿಸಬೇಕು ಎಂದವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ರಾಣಾ ಜೆ. ಸಿಂಗ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಶೇ.28ರಷ್ಟು ಮಂದಿ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದು ಕರ್ನಾಟಕದಲ್ಲಿ ಒಂದು ಕೋಟಿಗೂ ಮಿಕ್ಕಿ ಜನತೆ ಉಪಯೋಗಿಸುತ್ತಿದ್ದಾರೆ. ಇಂತಹ ಬೆಳವಣಿಗೆ ಸಮಾಜಕ್ಕೆ ಪೂರಕವಲ್ಲ. ಜನಜಾಗೃತಿಯಿಂದ ಮಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.
ವಿಭಾಗೀಯ ತಂಬಾಕು ನಿಯಂತ್ರಣ ಘಟಕದ ಸಂಚಾಲಕ ಡಾ.ಚಂದ್ರಕಿರಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ತಹಶೀಲ್ದಾರ್ ಮೋಹನ್ ರಾವ್, ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ.ರಾಜೇಶ್ವರಿದೇವಿ, ಡಾ.ಪ್ರಭಾಕರ್, ಡಾ.ಪ್ರಕಾಶ್, ಬಾಲಗೋಪಾಲನ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಸ್ವಾಗತಿಸಿದರು. ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.