ಮಂಗಳೂರು: ಬೈಕಂಪಾಡಿ ಸಮೀಪದ ಮೀನಾಕಳಿಯ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲದ ವಿವಾಹಿತೆಯನ್ನು ಕತ್ತಿಯಿಂದ ಕಡಿದು ತಲೆಗೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಂಗಳೂರು ಡಿಸಿಪಿ ವಿಷ್ಣುವರ್ಧನ .ಎನ್ ತಿಳಿಸಿದ್ದಾರೆ.
ಮಂಗಳವಾರ ತಮ್ಮ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿಯವರು, ಬಂಧಿತರನ್ನು ಒರಿಸ್ಸಾದ ಅಜ್ಜು ಯಾನೆ ಅಜ್ಜು ಪ್ರದಾನ್(23), ಅತನ ಚಿಕ್ಕಪ್ಪ ಒರಿಸ್ಸಾದ ವೃಂದಾವನ್ ಪ್ರದಾನ್ (38) ಎಂದು ಹೆಸರಿಸಲಾಗಿದೆ. ಗಂಡ ಮನೆಯಲ್ಲಿ ಇಲ್ಲದ ವೇಳೆ ಕಲ್ಪನಾ ಮನೆಗೆ ಆರೋಪಿಗಳು ಅಕ್ರಮ ಪ್ರವೇಶ ಮಾಡಿದ್ದು, ಈ ಸಂದರ್ಭ ಆಕೆ ಬೊಬ್ಬೆ ಹಾಕಿ ಪ್ರತಿರೋಧ ಒಡ್ಡಿದಾಗ ವಿಷಯ ಬಹಿರಂಗಗೊಳ್ಳುತ್ತದೆ ಎನ್ನುವ ಭಯದಿಂದ ಅಕೆಯನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳು ತಿಳಿಸಿರುವುದಾಗಿ ಹೇಳಿದರು.
12/13 -01-2015 ರಾತ್ರಿ ವೇಳೆ ಪಣಂಬೂರು ಗ್ರಾಮದ ಮೀನಕಳಿಯ ಎಂಬಲ್ಲಿರುವ ಶ್ರೀ ನರಸಿಂಹ ಐತಾಳ್ ರವರ ಕಂಪೌಂಡ್ ನಲ್ಲಿರುವ ಕಟ್ಟದ 1ನೇ ಮಹಡಿಯ ರೂ ನಂ 6 ರಲ್ಲಿ ವಾಸವಾಗಿದ್ದ ಮಧ್ಯಪ್ರದೇಶ ಮೂಲದ ಮಹಿಳೆ, ಪಣಂಬೂರು ಎಂಸಿಎಫ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಧ್ಯ ಪ್ರದೇಶ ಮೂಲದ ರಾಜೇಶ್ ಎಂಬಾತನ ಪತ್ನಿ ಕಲ್ಪನಾಳನ್ನು ಆಕೆಯ ಗಂಡ ಹಾಗೂ ಗಂಡನ ಸಂಬಂಧಿ ಇಲ್ಲದ ಸಮಯ ನೋಡಿ ಯಾರೋ ದುಷ್ಕರ್ಮಿಗಳು ರೂಂ ನ ಬಾಗಿಲನ್ನು ಬಲತ್ಕಾರವಾಗಿ ದೂಡಿ ಒಳಪ್ರವೇಶಿಸಿ ಅಕೆಯನ್ನು ಅತ್ಯಾಚಾರ ಮಾಡುವ ಸಲುವಾಗಿ ಪ್ರಯತ್ನಿಸಿ ಒಪ್ಪದೇ ಇದ್ದಾಗ ಕತ್ತಿಯಿಂದ ಕಡಿದು ಮತ್ತು ಕಬ್ಬಿಣದ ಪೈಪ್ ತುಂಡಿನಿಂದ ಹೊಡೆದು ಮತ್ತು ಕಲ್ಲನ್ನು ಹಾಕಿ ಕೊಲೆ ಮಾಡಿದ್ದು, ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಕೃತ್ಯದ ಹಿಂದೆ ಒಬ್ಬನ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಒಂದು ತಂಡದ ಕೈವಾಡವೂ ಇರುವ ಶಂಕೆಯನ್ನು ಪೊಲೀಸರು ಆರಂಭದಿಂದಲೂ ವ್ಯಕ್ತ ಪಡಿಸಿದ್ದರು. ಆದರೆ ಅತ್ಯಾಚಾರ ನಡೆದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತುಗೊಳ್ಳದ ಕಾರಣ ಹತ್ಯೆಯ ಹಿನ್ನೆಲೆ ನಿಗೂಢವಾಗಿಯೇ ಉಳಿದಿತ್ತು. ಇದಲ್ಲದೆ ಆಕೆ ವಾಸವಾಗಿದ್ದ ಬಾಡಿಗೆ ಮನೆಯ ಎಲ್ಲರ ವಿಚಾರಣೆ ನಡೆಸಿದ್ದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಪಿ.ಎಸ್.ಐ ಹಾಗೂ ಸಿಬ್ಬಂಧಿಗಳ ಒಂದು ತಂಡವನ್ನು ರಚಿಸಿದ್ದು, ಮಂಗಳೂರು ನಗರ ಪೊಲೀಸ್ ಅಯುಕ್ತರು ಹಾಗೂ ಉಪ ಪೊಲೀಸ್ ಅಯುಕ್ತರು(ಕಾನೂನು.ಸುವ್ಯವಸ್ಥೆ ) ಮತ್ತು ಉಪ ಪೊಲೀಸ್ ಆಯುಕ್ತರು (ಕ್ರೈಂ)ರವರು ಕಾಲಕಾಲಕ್ಕೆ ನೀಡಿದ ಸೂಕ್ತ ನಿರ್ದೇಶನದಂತೆ ಹಾಗೂ ಪಣಂಬೂರು ಸಹಾಯಕ ಪೊಲೀಸ್ ಅಯುಕ್ತರ ಮಾರ್ಗದರ್ಶನದಡಿ ಪ್ರಾದೇಶಿಕ ನ್ಯಾಯಾವಿಜ್ಞಾನ ಪ್ರಯೋಗ ಶಾಲೆಯ ತಜ್ಞರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ್ದರು.
ಈ ನಡುವೆ ಪೊಲೀಸರಿಗೆ ಸಣ್ಣ ಮಾಹಿತಿಯೊಂದು ಲಭ್ಯವಾಗಿದ್ದು ಇಬ್ಬರು ಕಾರ್ಮಿಕರು ರಾತ್ರಿ ಹಗಲು ಪಾಳಿಯ ಕೆಲಸ ಎಂದು ಹೊರಗೆ ಇರುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕೂಲಂಕುಷವಾಗಿ ತನಿಖೆ ನಡೆಸಿದಾಗ ಕೃತ್ಯ ನಡೆದ ಕಟ್ಟಡದ ಅಂತಸ್ಥಿನಲ್ಲಿ ವಾಸವಿರುವ ಬಿಹಾರ , ಅಸ್ಸಾಂ, ಝಾರ್ಕಂಡ.ಕೊಲ್ಕತಾ ಮತ್ತು ಒರಿಸ್ಸಾ ಮೂಲದ ಕೂಲಿಕಾರ್ಮಿಕರು ವಾಸಿಸುತ್ತಿರುವ ಪಕ್ಕದ ಕೋಣೆಯ ಇಬ್ಬರು ಯುವಕರು ನಾಪಾತ್ತೆಯಾಗಿರುವುದು ತಿಳಿದು ಬಂದಿತ್ತು.
ಈ ಬಗ್ಗೆ ಸ್ಪಷ್ಟತೆ ಪಡೆಯುವ ನಿಟ್ಟಿನಲ್ಲಿ ಪೊಲೀಸರು ಆ ಇಬ್ಬರು ಕಾರ್ಮಿಕರ ಕೋಣೆ ಪ್ರವೇಶಿಸಿದ್ದರು. ಅಲ್ಲಿ ತಪಾಸಣೆ ನಡೆಸಿದಾಗ ರಕ್ತ ಸಿಕ್ತವಾದ ಎರಡು ಅಂಗಿ ಪತ್ತೆಯಾಗಿತ್ತು. ಅದರಲ್ಲಿದ್ದ ರಕ್ತ ಮೃತ ಕಲ್ಪನಾ ರಕ್ತಕ್ಕೆ ಹೊಂದಿಕೆಯಾಗಿತ್ತು. ಅಷ್ಟರಲ್ಲಿ ಕೊಲೆ ಆರೋಪಿಗಳು ಇವರೇ ಎನ್ನುವುದು ಪೊಲೀಸರಿಗೆ ಸ್ಪಷ್ಟವಾಗಿತ್ತು. ಈ ನಿಟ್ಟಿನಲ್ಲಿ ಅವರ ಪತ್ತೆಗೆ ಬಲೆ ಬೀಸಿದ ಪೊಲೀಸರು ಕೊನೆಗೂ ಕೊಲೆ ಮಾಡಿ ಪರಾರಿಯಾಗಲು ಹಣ ಇಲ್ಲದೆ ನಗರದಲ್ಲೇ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ದಿನಾಂಕ 19-01-2015 ರಂದು ಸಂಜೆ ಸುರತ್ಕಲ್ ರೈಲ್ವೆ ಸ್ಟೇಷನ್ ನಲ್ಲಿ ಪಿ.ಎಸ್.ಐ ಹಾಗೂ ಸಿಬ್ಬಂಧಿಗಳು ಬಂಧಿಸಿದ್ದಾರೆ ಎಂದು ಅವರು ಹೇಳಿದರು.
ಈ ಪ್ರಕರಣವನ್ನು ಬೇಧಿಸುವಲ್ಲಿ ಪಣಂಬೂರು ಎಸಿಪಿ ರವಿ ಕುಮಾರ್, ಪಣಂಬೂರು ಸಿಪಿಐ ಲೋಕೇಶ್, ಪಣಂಬೂರು ಪಿಎಸ್.ಐ ಸತೀಶ್ ಎಂ.ಪಿ, ಪಣಂಬೂರು ಎ ಎಸ್ ಐ ದೇವು ಶೆಟ್ಟಿ, ಸಿಬ್ಬಂದಿಗಳಾದ ಕುಶಲ್ ಮಾಣಿಯಾಣಿ, ಜಗದೀಶ್ ಕೆ, ಚಿದಾನಂದ, ಮಂಜುನಾಥ್, ಚಂದ್ರಹಾಸ ರೈ, ರಾಧಕೃಷ್ಣ ರವರುಗಳು ಭಾಗಿಯಾಗಿದ್ದರು ಎಂದು ಡಿಸಿಪಿ ತಿಳಿಸಿದರು.