ಮಂಗಳೂರು,ಜ.13 : ನ್ಯಾಯಾಲಯದಲ್ಲಿ ದಾವೆ ಇದ್ದರೂ ಸಾರ್ವಜನಿಕ ರಸ್ತೆಯನ್ನು ಜೆಸಿಬಿ ಮೂಲಕ ಅಗೆದು ಧ್ವಂಸಗೊಳಿಸಿದ ತಾಯಿ-ಮಗನ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರೆ, ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ ಘಟನೆ ನಿನ್ನೆ ಸಂಜೆ ನೀರು ಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ನಟ್ಟೀಲು ಎಂಬಲ್ಲಿ ಸಂಭವಿಸಿದೆ.
ನಟ್ಟೀಲುವಿನಲ್ಲಿ ಸರಕಾರಿ ಪ್ರದೇಶದಲ್ಲಿ ಸಾರ್ವಜನಿಕ ದಾರಿಯೊಂದಿದ್ದು ಕಳೆದ ಹಲವಾರು ವರುಷದಿಂದ ಗ್ರಾಮಸ್ಥರು ನಿತ್ಯ ಓಡಾಟಕ್ಕೆ ಇದೇ ದಾರಿಯನ್ನು ಬಳಸುತ್ತಿದ್ದರು. ಆದರೆ ಇದೇ ದಾರಿಗಿಂತ ತುಸು ದೂರದಲ್ಲಿ ಕಾಲು ಸಂಕ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಈ ದಾರಿಯನ್ನು ತುಸು ಅಗಲಗೊಳಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಈ ರಸ್ತೆಯ ಪಕ್ಕದಲ್ಲಿ ಜಾಗವನ್ನು ಹೊಂದಿರುವ ಪ್ರೇಮ್ ಕ್ರಾಸ್ತಾ ಎಂಬವರು ರಸ್ತೆ ಇರುವ ಜಾಗ ತಮ್ಮದು ಎಂದು ವಾದಿಸಿ ಅದಕ್ಕೆ ಬೇಲಿ ಹಾಕಲು ಮುಂದಾಗಿದ್ದರು.
ಹೀಗಾಗಿ ಗ್ರಾಮಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ಯಥಾ ಸ್ಥಿತಿಯನ್ನು ಕಾಪಾಡುವಂತೆ ನ್ಯಾಯಾಲಯ ಗ್ರಾಮಪಂಚಾಯತ್ಗೆ ನಿರ್ದೇಶನ ನೀಡಿತ್ತು. ಹೀಗಿದ್ದರೂ ನಿನ್ನೆ ಜೆಸಿಬಿ ಮತ್ತು ಬಂಟ್ವಾಳದ ಕೆಲ ಹುಡುಗರ ಪಡೆಯೊಂದಿಗೆ ಏಕಾಏಕಿಯಾಗಿ ಬಂದ ಆರೋಪಿ ಪ್ರೇಮ್ ಕ್ರಾಸ್ತಾ ಸಾರ್ವಜನಿಕ ರಸ್ತೆಯನ್ನು ಜೆಸಿಬಿ ಮೂಲಕ ಅಗೆಯಲು ಆರಂಭಿಸಿದ್ದರು.
ಇದು ಸಾರ್ವಜನಿಕರ ಗಮನಕ್ಕೆ ಬರುತ್ತಿರುವಂತೆ ಆಕ್ಷೇಪ ವ್ಯಕ್ತ ಪಡಿಸಿದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಸುದ್ದಿ ಪೊಲೀಸರನ್ನೂ ತಲುಪಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಪ್ರೇಮ್ ಮತ್ತಾತನ ತಾಯಿಯನ್ನು ಸಮಾಧಾನ ಪಡಿಸುವ ಯತ್ನ ನಡೆಸಿದರೂ ಅವರು ಬಗ್ಗದ ಕಾರಣ ಸಹಾಯ ಆಯುಕ್ತರನ್ನು ಸ್ಥಳಕ್ಕೆ ಕರೆಸಲಾಯಿತು. ಅವರೂ ಪ್ರೇಮ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಮಾಡಿದರೂ ಪ್ರೇಮ್ ಮಾತ್ರ ಸಹಾಯಕ ಆಯುಕ್ತರ ಮೇಲೆ ಎಗರಾಡಿದ್ದನ್ನಲ್ಲದೆ ಪೊಲೀಸರ ಮೇಲೆ ಹಲ್ಲೆಗೂ ಯತ್ನಿಸಿದ್ದ. ಹಾಗಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರೇಮ್ ಕ್ರಾಸ್ತಾನನ್ನು ಪೊಲೀಸರು ಬಂಧಿಸಿದರಲ್ಲದೆ ಆತನ ತಾಯಿ ಜೆಸಿಂತಾ ಕ್ರಾಸ್ತ ಎಂಬವರನ್ನು ವಶಕ್ಕೆ ಪಡೆದುಕೊಂಡು ಬಿಟ್ಟುಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಜೆಸಿಬಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಪ್ರೇಮ್ ಜೊತೆ ಬಂದಿದ್ದ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ . ಕೊನೆಗೆ ಗ್ರಾಮ ಪಂಚಾಯತ್ ಪ್ರತ್ಯೇಕ ಜೆಸಿಬಿ ಬಳಸಿ ರಸ್ತೆಯನ್ನು ಮರು ಸಂಪರ್ಕ ಗೊಳಿಸಿತು.