ಕುಂದಾಪುರ: ರಾತ್ರಿ ವೇಳೆ ಅತೀ ವೇಗವಾಗಿ ಬಂದ ಬೈಕ್ ಸವಾರನ ನಿಯಂತ್ರಣ ತಪ್ಪಿದ ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ಫೂಟ್ಪಾತ್ಗೆ ಡಿಕ್ಕಿಯಾಗಿದ್ದು, ಬೈಕಿನಿಂದ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಕೋಟೇಶ್ವರದ ರಚನಾ ಬಾರ್ ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿರುವ ಸರ್ವಿಸ್ ರಸ್ತೆಯಲ್ಲಿ ಭಾನುವಾರ ಮಧ್ಯರಾತ್ರಿ 12 ಗಂಟೆ ನಡೆದಿದೆ. ಮೃತ ಬೈಕ್ ಸವಾರನನ್ನು ತೆಕ್ಕಟ್ಟೆಯ ಕನ್ನುಕೆರೆ ನಿವಾಸಿ ಸುಶೀಲ ಎಂಬುವರ ಪುತ್ರ ಸುಮಂತಕುಮಾರ(18) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಸುಮಂತಕುಮಾರ್ ದೇವಾಡಿಗ ಕುಂದಾಪುರ ಕಡೆಯಿಂದ ತೆಕ್ಕಟ್ಟೆಯ ಕಡೆಗೆ ತನ್ನ ಡಿಸ್ಕವರ್ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು. ಅತೀ ವೇಗದಲ್ಲಿದ್ದ ಬೈಕ್ ಸವಾರ ಕೋಟೇಶ್ವರದ ಸರ್ವಿಸ್ ರಸ್ತೆಗೆ ತಿರುಗಿಸುವ ಭರದಲ್ಲಿ ನಿಯಂತ್ರಣ ಕಳೆದುಕೊಂಡಿದ್ದು, ಸರ್ವೀಸ್ ರಸ್ತೆಯ ತೀರಾ ಎಡಬದಿಗೆ ಹತ್ತಿದ್ದು, ಹಾಗೆಯೇ ರಸ್ತೆ ಬದಿಯ ಫುಟ್ಪಾತ್ ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಬೈಕ್ನಿಂದ ಸಿಡಿದ ಸವಾರ ರಸ್ತೆಯಲ್ಲಿ ಸುಮಾರು ಹತ್ತು ಅಡಿ ದೂರದಲ್ಲಿ ರಸ್ತೆಯ ಮೇಲೆ ಎಸೆಯಲ್ಪಟ್ಟಿದ್ದಾನೆ. ಬೈಕ್ ಡಿಕ್ಕಿಯಾದ ತಕ್ಷಣ ಆತನ ತಲೆ ಪುಟ್ಪಾತ್ ಮೂಲೆಗೆ ತಾಗಿದ್ದು, ರಸ್ತೆಯಲ್ಲೆಲ್ಲಾ ಮೆದುಳು ಚೆಲ್ಲಾಪಿಲ್ಲಿಯಾಗಿ ಸಿಡಿದುಹೋಗಿತ್ತು.
ಸರ್ವೀಸ್ ರಸ್ತೆಯಾಗಿದ್ದರಿಂದ ಅಲ್ಲಿ ಯಾರೂ ಹೋಗದ ಕಾರಣ ಘಟನೆ ನಡೆದು ಸುಮಾರು ಒಂದು ಗಂಟೆಗಳ ನಂತರ ಅಪಘಾತ ಸಂಭವಿಸಿದ ಬಗ್ಗೆ ಮಾಹಿತಿ ಲಭಿಸಿದೆ. ಕುಂದಾಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.