ಕುಂದಾಪುರ : ಇನ್ನು ಮುಂದೆ ತೆರದ ಲಾರಿಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಶಿಲೆಗಲ್ಲು, ಕೆಂಪು ಕಲ್ಲು, ಮರಳು ಹಾಗೂ ಮಣ್ಣು ಸಾಗಾಟ ಸೇರಿದಂತೆ ಪ್ರಯಾಣಿಕರಿಗೆ ತೊಂದರೆಯಾಗುವ ಯಾವುದೇ ರೀತಿಯ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಉಡುಪಿ ಜಿಲ್ಲೆಯ ನೂತನ ಎಸ್ಪಿ ಕೆ. ಅಣ್ಣಾಮಲೈ ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಅಪರಾಧ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿರುವುದು, ಸಂಚಾರ ವ್ಯವಸ್ಥೆಯಲ್ಲಿ ಅವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ದಿನವೊಂದಕ್ಕೆ ಕನಿಷ್ಟ ಐವತ್ತು ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸರಿಗೆ ಅವರು ಆದೇಶ ನೀಡಿದ್ದು, ಶನಿವಾರ ಮತ್ತು ಭಾನುವಾರ ನೂರು ಪ್ರಕರಣಗಳನ್ನು ದಾಖಲಿಸಲು ಆದೇಶ ನೀಡಿದ್ದಾರೆ. ಇದರಿಂದ ಕುಂದಾಪುರ ಸಂಚಾರಿ ಪೊಲೀಸರಿಗಂತೂ ಪ್ರಥಮ ಸುತ್ತಿನಲ್ಲಿ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ.
ತಾಲೂಕಿನ ಎಲ್ಲೆಡೆ ಪೊಲೀಸರೆದುರೇ ತೆರೆದ ವಾಹನಗಳಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮತ್ತು ಮರಳು ಸಾಗಾಟದ ದಂಧೆ ಹೆಚ್ಚುತ್ತಿದ್ದರೂ ಸಂಚಾರಿ ಪೊಲೀಸರು ಈ ನಿಟ್ಟಿನಲ್ಲಿ ಮೌನ ತಾಳಿದ್ದರು. ಸಾರ್ವಜನಿಕರು ಈ ಬಗ್ಗೆ ಎಸ್ಪಿಯವರ ಗಮನಕ್ಕೆ ತಂದಿದ್ದು, ಗುರುವಾರದಿಂದಲೇ ಈ ಆದೇಶ ಹೊರಬಿದ್ದಿರುವುದು ಸಾರ್ವಜನಿಕರ ಸಂತೋಷಕ್ಕೆ ಕಾರಣವಾಗಿದೆ.