ಮಂಜೇಶ್ವರ,ಜ.08: ಮಂಜೇಶ್ವರದ ಕೆ.ಎಸ್,ಆರ್.ಟಿ.ಸಿ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಪಾನ್ ಮಸಾಲ ಉತ್ಪನ್ನಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ. ನಿನ್ನೆ ಸಂಜೆ ಮಂಗಳೂರಿನಿಂದ ಎರ್ನಾಕುಳಂಗೆ ತೆರಳುತ್ತಿದ್ದ ಕೇರಳ ಕೆ.ಎಸ್,ಆರ್.ಟಿ.ಸಿ ಬಸ್ಸನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಪಾನ್ ಉತ್ಪನ್ನಗಳ ಸಾಗಾಟ ಬೆಳಕಿಗೆ ಬಂತು. ಬಸ್ಸಿನಲ್ಲಿ ಸಾಗಾಟ ನಡೆಸುತ್ತಿದ್ದ ಸುಮಾರು 40 ಸಾವಿರ ಪ್ಯಾಕೇಟ್ ಪಾನ್ ಮಸಾಲ ಉತ್ಪನ್ನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
25 ಗೋಣಿಗಳಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿದ್ದ ಪಾನ್ ಉತ್ಪ ನ್ನಗಳನ್ನು ಬಸ್ ಸಿಬ್ಬಂದಿಯಲ್ಲಿ ಚಹಾ ಹುಡಿ ಎಂದು ಸುಳ್ಳು ಹೇಳಿ ಬಸ್ಸಿನಲ್ಲಿ ತುಂಬಿಸಿದ್ದರು. ಪಾನ್ ಮಸಾಲದ ವಾಸನೆ ಅರಿತ ಮಂಜೇಶ್ವರ ಠಾಣಾ ಎಸ್ಐ ವಿಜಯನ್ ಬಸ್ನ್ನು ಬೆನ್ನಟ್ಟಿ ನಿಲ್ಲಿಸಿ ತಪಾಸಣೆ ನಡೆಸಿದರು. ಚಾಂದ್, ಕಾಜಲ್, ರೂಪಾ ಹಿರಾಪುನ್, ಮೊದಲಾದ ಉತ್ಪನ್ನಗಳು ಇದರಲ್ಲಿದ್ದವು. ಕೊಚ್ಚಿ, ಎರ್ನಾಕುಳಂ, ಆಳಪುಳ ಮುಂತಾದೆಡೆಗೆ ಈ ಉತ್ಪನ್ನವನ್ನು ತಲುಪಿಸಲು ಬೇಕಾಗಿ ಇದನ್ನು ಬಸ್ಸಲ್ಲಿ ತುಂಬಿಸಿಡಲಾಗಿತ್ತು.
ಪ್ಯಾಕೇಟಿನ ಮೇಲೆ ಹಲವಾರು ಮಂದಿಯ ಹೆಸರನ್ನು ಬರೆದಿಡಲಾಗಿತ್ತು. ಇದರ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕೇರಳದಲ್ಲಿ ಪಾನ್ ಮಸಾಲ ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಮಂಗಳೂರು ಭಾಗದಿಂದ ಇಂತಹ ಉತ್ಪನ್ನಗಳನ್ನು ಕೇರಳಕ್ಕೆ ಕೊಂಡೊಯ್ಯಲಾಗುತ್ತಿದೆ