ಮುಂಬಯಿ (ಶಿವಗಿರಿ), ಜ.6 : ಕೇರಳದ ಶಿವಗಿರಿ ಮಠದಲ್ಲಿ ಇತ್ತೀಚೆಗೆ ನಡೆಸಲ್ಪಟ್ಟ 82 ನೇ ಶಿವಗಿರಿ ತೀರ್ಥದಾನ ಆಚರಣಾ ಸಮಾರಂಭದಲ್ಲಿ ಶ್ರೀ ನಾರಾಯಣ ಗುರುಗಳ ಹಿತನುಡಿಯ ಮೂಲಕ ಹಿಂದುಳಿದ ವರ್ಗಗಳ ಅಭ್ಯುದಯ ಹಾಗೂ ಪ್ರಗತಿಯ ಬಗ್ಗೆ ಸಮ್ಮೇಳನ ಜರಗಿದ್ದು, ಸಮ್ಮೇಳನದಲ್ಲಿ ಕೇಂದ್ರ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್ವಿಲಾಸ್ ಪಾಸ್ವಾನ್ ಮುಖ್ಯ ಅತಿಥಿಯಾಗಿ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ, ಭಾರತ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ಎಸ್.ಪೂಜಾರಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಮಹಾರಾಷ್ಟ್ರದ ಪ್ರತಿನಿಧಿಯಾಗಿ ಪಾಲ್ಗೊಂಡ ಚಂದ್ರಶೇಖರ್ ಮಾತನಾಡಿ, ಸುಮಾರು 82 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಬಿಲ್ಲವರ ಅಸೋಸಿಯೇಶನ್ ಸಾಮಾಜಿಕ, ಶೈಕ್ಷಣಿಕ, ಅರ್ಥಿಕ, ಸಾಹಿತಿಕವಾಗಿ ಶ್ರಮಿಸಿ ಸಮಾಜಪರ ಶ್ರಮ ನಿರ್ವಹಿಸುತ್ತಿದೆ. ವರ್ಷಂಪ್ರತೀ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅನೇಕ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ ಮಾಡುತ್ತಿದೆ.
ಅಲ್ಲದೆ ಮುಂಬಯಿಯಲ್ಲಿ ಒಂದು ರಾತ್ರಿ ಶಾಲೆ, ಪಡುಬೆಳ್ಳೆಯಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಯನ್ನೂ ನಡೆಸುತ್ತಾ ಬಂದಿದೆ. ಭಾರತ್ ಬ್ಯಾಂಕ್ನ್ನು ಸ್ಥಾಪಿಸಿ ಸಮಗ್ರ ಜನತೆಯ ಅರ್ಥಿಕ ಸೇವೆಯನ್ನು ಪೂರೈಸುತ್ತಾ ಈ ಬ್ಯಾಂಕ್ ರಾಷ್ಟ್ರ ಮನ್ನಣೆ ಪಡೆದಿದೆ. ಬಿಲ್ಲವರ ಅಸೋಸಿಯೇಶನ್ನ ಮುಖವಾಣಿ ಅಕ್ಷಯ ಮಾಸಿಕವೂ ಸಾಹಿತಿಕ ಕ್ಷೇತ್ರದಲ್ಲೂ ತನ್ನ ಸೇವೆಯನ್ನು ಮಾಡುತ್ತಿದೆ. ಅಲ್ಲದೆ ಪ್ರತಿ ವರ್ಷವು ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ ಎಂದರು.