ಮಂಗಳೂರು, ಜ.4: ದೇಶದಲ್ಲಿ ಪ್ರಸಕ್ತ ವಿದೇಶಿ ನೇರ ಬಂಡವಾಳ ಹೂಡಿಕೆ ಯಲ್ಲಿ ಶೇ25ರಷ್ಟು ಏರಿಕೆಯಾಗಿದೆ. ಈ ಬೆಳವಣಿಗೆ ದೇಶದ ಆರ್ಥಿಕ ಬೆಳವಣಿಗೆಗ ಪೂರಕ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 7-8 ವರ್ಷಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಾ ಬಂದಿದೆ. ಈ ಪ್ರಕ್ರಿಯೆ ಇತ್ತೀಚಿನ ಬೆಳವಣಿಗೆಯಲ್ಲ. ಹೊಸ ಸರಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ತಕ್ಷಣ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಆರ್ಥಿಕ ಪುನಶ್ಚೇತನಕ್ಕೆ ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಿಂದ ಸಹಜವಾಗಿ ವಿದೇಶಿ ಬಂಡವಾಳ ಹೂಡಿಕೆದಾರರು ದೇಶದ ಆರ್ಥಿಕ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ ಎಂದರು.
ದೇಶದ ತಾಂತ್ರಿಕ ಕ್ಷೇತ್ರದ ಬೆಳವಣಿಗೆ ಇ-ಕಾಮರ್ಸ್ ಗೆ ಪೂರಕವಾದ, ಸುಸ್ಥಿರ ಅಭಿವೃದ್ಧಿಯ ನೀತಿಯನ್ನು ಸರಕಾರ ರೂಪಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಸರಕಾರ ಹೊಸ ಮಸೂದೆ ಮಂಡಿಸಲು ತರಾತುರಿ ತೋರುತ್ತಿಲ್ಲ. ದೇಶದ ಅಭಿವೃದ್ಧಿಗೆ ಪೂರಕವಾದ ನೀತಿ ರೂಪಿಸುತ್ತಿದ್ದ ಹಳೆಯ ಯೋಜನಾ ಆಯೋಗ ಅಪ್ರಸ್ತುತವಾಗುತ್ತಿದೆ ಎನ್ನುವು ದನ್ನು ಮನಗಂಡು ಬದಲಾಯಿಸಲು ಹೆಜ್ಜೆ ಇಟ್ಟಿದೆ ಎಂದವರು ಸ್ಪಷ್ಟಪಡಿಸಿದರು.
ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ಚಂದ್ರಹಾಸ ಉಳ್ಳಾಲ್, ನಿತಿನ್ ಕುಮಾರ್, ಪುಷ್ಪಲತಾ ಗಟ್ಟಿ, ಸಂಜಯ ಪ್ರಭು ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.