ಉಳ್ಳಾಲ, ಜ.4: ವಿಶ್ವ ಪ್ರವಾದಿ ಮುಹಮ್ಮದ್(ಸ.)ರವರ ಜನ್ಮ ದಿನಾಚರಣೆ(ಮೀಲಾದುನ್ನಬಿ)ಯನ್ನು ಕರಾವಳಿಯಾದ್ಯಂತ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಉಳ್ಳಾಲ ದರ್ಗಾ ವ್ಯಾಪ್ತಿಗೊಳಪಟ್ಟ 38 ಮೊಹಲ್ಲಾಗಳ ಬೃಹತ್ ಮೀಲಾದ್ ರ್ಯಾಲಿಯು ಉಳ್ಳಾಲ ಕೋಡಿಯಿಂದ ಆರಂಭಿಸಿ ಉಳ್ಳಾಲ ಸೈಯದ್ ಮದನಿ ದರ್ಗಾದಲ್ಲಿ ಸಮಾಪನಗೊಂಡಿತು.
1489ನೆ ಮೀಲಾದುನ್ನಬಿ ಕಾರ್ಯಕ್ರಮವನ್ನು ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಯು.ಎಸ್. ಹಂಝರವರು ಉಳ್ಳಾಲ ಜುಮಾ ಮಸೀದಿಯ ವಠಾರದಲ್ಲಿ ಧ್ವಜಾರೋಹಣಗೈದು ಉದ್ಘಾಟಿಸಿದರು. ಮೀಲಾದ್ ರ್ಯಾಲಿಗೆ ಕೋಡಿ ಜೋಡುಜಾರ ಬದ್ರಿಯಾ ಜುಮಾ ಮಸೀದಿಯ ದರ್ಗಾ ಝಿಯಾರತ್ ಮಾಡುವ ಮೂಲಕ ಪ್ರಾರಂಭಿಸಲಾಯಿತು.
ಕೋಡಿ ಮಸೀದಿಯ ಖತೀಬ್ ಮಜೀದ್ ಉಸ್ತಾದ್ ದುಆಗೈದು ರ್ಯಾಲಿಗೆ ಚಾಲನೆ ನೀಡಿದರು. ವಾಹನ ಮತ್ತು ಕಾಲ್ನಡಿಗೆಯ ರ್ಯಾಲಿಯು ಚೋಟಾ ಮಂಗಳೂರು-ಅಬ್ಬಕ್ಕ ವೃತ್ತ-ಮುಕ್ಕಚ್ಚೇರಿ- ಆಝಾದ್ ನಗರವಾಗಿ ಉಳ್ಳಾಲ ದರ್ಗಾ ವಠಾರದಲ್ಲಿ ಸಮಾಪ್ತಿಗೊಂಡಿತು.
ಉಳ್ಳಾಲ ಜುಮಾ ಮಸೀದಿಯ ಖತೀಬ್ ಅಬ್ದುರ್ರವೂಫ್ ಮುಸ್ಲಿಯಾರ್ ಮತ್ತು ಝಿಯಾದ್ ತಂಙಳ್ ದುಆ ನೆರವೇರಿಸಿದರು. ದಅ್ವಾ ಕಾಲೇಜಿನ ಪ್ರೊಫೆಸರ್ ಅಬ್ದುಲ್ ಕಲಾಮ್ ಸಖಾಫಿ ಮೀಲಾದುನ್ನಬಿ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ವೇ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಕಾರ್ಯದರ್ಶಿ ಹಾಜಿ ಅಶ್ರಫ್ ಮುಕ್ಕಚ್ಚೇರಿ, ಜೊತೆ ಕಾರ್ಯದರ್ಶಿ ಫಾರೂಕ್ ಮಾರ್ಗತಲೆ, ಕೋಶಾಧಿಕಾರಿ ಮುಹಮ್ಮದ್ ಬಿಲಾಲ್, ಲೆಕ್ಕ ಪರಿಶೋಧಕರಾದ ಜೆ.ಅಬ್ದುಲ್ ಹಮೀದ್, ಅರಬಿಕ್ ಟ್ರಸ್ಟ್ನ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ, ಕಾರ್ಯದರ್ಶಿ ಝಿಯಾದ್ ತಂಙಳ್, ಕೋಶಾಧಿಕಾರಿ ತಂಝೀಲ್, ಚಾರಿಟೇಬಲ್ ಟ್ರಸ್ಟ್ನ ಉಪಾಧ್ಯಕ್ಷ ಹನೀಫ್ ಹಾಜಿ, ಜೊತೆ ಕಾರ್ಯದರ್ಶಿ ಫಾರೂಕ್ ಕೋಡಿ, ಕೋಶಾಧಿಕಾರಿ ನಾಝಿಮ್, ಮುಫತ್ತಿಶ್ ಸುಲೈಮಾನ್ ಸಖಾಫಿ ಮೊದಲಾದವರು ಭಾಗವಹಿಸಿದ್ದರು.
ಕೋಡಿ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಸ್ವಾಗತಿಸಿದರು. ದರ್ಗಾಕ್ಕೆ ಅಧೀನದಿಂದ ಹೊರಗಿರುವ ಮಂಜನಾಡಿ, ಪಾವೂರು, ಇನೋಳಿ, ಮುಡಿಪು, ಮೊಂಟೆಪದವು, ತೌಡುಗೋಳಿ, ಕಲ್ಕಟ್ಟ, ನಾಟೇಕಲ್, ಕೊಣಾಜೆ ಮುಂತಾದ ಹಲವು ಪ್ರದೇಶಗಳ ಮದ್ರಸ ವಿದ್ಯಾರ್ಥಿಗಳ ರ್ಯಾಲಿ ಉಳ್ಳಾಲ ದರ್ಗಾ ಝಿಯಾರತ್ಗೆ ವಾಹನ ಮೆರವಣಿಗೆ ಮೂಲಕ ತಲುಪಿದ ಹಿನ್ನೆಲೆಯಲ್ಲಿ ಕೆಲ ಕಾಲ ರಸ್ತೆ ಅಡಚಣೆ ಕೂಡಾ ಉಂಟಾಯಿತು.