ಕುಂದಾಪುರ: ರಾಷ್ಟ್ರೀಯ ಹೆದ್ದಾರಿ-೬೬ ಚತುಷ್ಪತ ಕಾಮಗಾರಿಯ ಅವ್ಯವಸ್ಥೆಯಿಂದ ನಾಗರೀಕರಿಗೆ ಸಮಸ್ಯೆಯಾಗುವ ಕುರಿತು ಸ್ಥಳೀಯರು ತೆಕ್ಕಟ್ಟೆ ಬಸ್ಸು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಕರ್ನಾಟಕ ರಾಜ್ಯ ಕಾರ್ಮಿಕ ಸಂಘಟನೆಗಳ ಕಾರ್ಯದರ್ಶಿ ಸತೀಶ್ ತೆಕ್ಕಟ್ಟೆ, ಶೀಘ್ರ ಹೆದ್ದಾರಿಯ ಇನ್ನೊಂದು ಭಾಗವನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆದ್ದಾರಿ ತಡೆದು ಬ್ರಹತ್ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ ಮೆಂಡನ್ ಮನವಿ ಸ್ವೀಕರಿಸಿ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಹೆದ್ದಾರಿ ಚತುಷ್ಪತ ಕಾಮಗಾರಿಯಿಂದ ಹಲವೆಡೆ ನಾಗರೀಕರು ಹಾಗೂ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ. ನವಯುಗ ಕಂಪೆನಿಯ ಇಂಜಿನೀಯರಿಗೆ ಈ ಭಾಗದ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದರೂ ಕೂಡ ಅವ್ರು ಯಾವುದೇ ಸ್ಪಂದನೆ ನೀಡುತ್ತಿಲ್ಲ, ಶೀಘ್ರದಲ್ಲಿ ಈ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಎಲ್ಲರೊಡಗೂಡಿ ಹೋರಾಟ ನಡೆಸುತ್ತೇವೆ. ಇಂದು ತೆಕ್ಕಟ್ತೆಯಲ್ಲಿ ನೀಡಿದ ಮನವಿಯನ್ನು ಜಿಲ್ಲಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಹಾಗೂ ತಹಶಿಲ್ದಾರ್ ಅವರಿಗೆ ನೀಡುತ್ತೇನೆ ಎಂದರು.
ಡಿವೈಡರ್ ಸಮಸ್ಯೆ: ತೆಕ್ಕಟ್ಟೆ ಬಸ್ಸು ನಿಲ್ದಾಣ ಪ್ರದೇಶವು ತೆಕ್ಕಟ್ಟೆ ಕೆದೂರು ಸಂಪರ್ಕಿಸುವ ರಸ್ತೆಯೂ ಇಲ್ಲಿದ್ದು ವಾಹನ ದಟ್ಟಣೆ ಹಾಗೂ ಶಾಲಾ ಕಾಲೇಜುಗಳಿಗೆ ಸಂಚರಿಸುವ ನೂರಾರು ಮಕ್ಕಳು ಇಲ್ಲಿ ನಿತ್ಯ ಬರಬೇಕಗಿದೆ. ಉಡುಪಿಯಿಂದ ಕುಂದಾಪುರಕ್ಕೆ ಹಾಗೂ ಕುಂದಾಪುರದಿಂದ ಉಡುಪಿಗೆ ತೆರಳುವ ವಾಹನ ಸವಾರರು ಪ್ರಸ್ತುತ ಇಲ್ಲಿನ ಡಿವೈಡರ್ ಸಮಸ್ಯೆಯಿಂದ ಗೊಂದಲ ಅನುಭವಿಸುವಂತಾಗಿದೆ.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಗಣಪತಿ ಟಿ. ಶ್ರೀಯಾನ್, ಗ್ರಾ.ಪಂ. ಸದಸ್ಯ ಸಂಜೀವ ದೇವಾಡಿಗ, ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಶಂಕರ ದೇವಾಡಿಗ, ಸ್ಥಳೀಯರಾದ ಕೃಷ್ಣಾನಂದ ನಾಯಕ್, ವಿಠಲ್ ದೇವಾಡಿಗ, ಸುಧೀಂದ್ರ ಗಾಣಿಗ, ಶ್ರೀನಿವಾಸ ಮಲ್ಯಾಡಿ, ಸುಧೀಂದ್ರ ಆಚಾರ್ಯ, ತುಕರಾಂ ಶಾನುಭಾಗ್, ಪುರಂದರ ತೋಟದಬೆಟ್ಟು ಹಾಗೂ ವಾಹನ ಚಾಲಕರು- ಮಾಲಕರು, ಅಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಇದ್ದರು.