ಬೆಂಗಳೂರು,ಜ.03 : ‘ಏಪ್ರಿಲ್ 1ರಿಂದ ವಿದ್ಯುತ್ ದರ ಏರಿಕೆಯಾಗಲಿದೆ’ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಬಹಿರಂಗಪಡಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ವಿದ್ಯುತ್ ಖರೀದಿ ದರದಲ್ಲಿ ಹೆಚ್ಚಳವಾಗಿರುವುದರಿಂದ ಯೂನಿಟ್ಗೆ 80 ಪೈಸೆಯಂತೆ ದರ ಏರಿಸಬೇಕು ಎಂದು ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು ಪ್ರಸ್ತಾವನೆ ಸಲ್ಲಿಸಿವೆ. ಈ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ಆಹ್ವಾನಿಸಲಾಗಿದೆ. 30 ದಿನದೊಳಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಬಹುದು. ನಂತರ ಆಯೋಗ ಪರಿಷ್ಕೃತ ದರ ನಿಗದಿ ಮಾಡಲಿದೆ’ ಎಂದು ವಿವರಿಸಿದರು.
‘ಕಲ್ಲಿದ್ದಲು ದುಬಾರಿಯಾಗುತ್ತಿರುವ ಕಾರಣ ದರ ಏರಿಕೆ ಅನಿವಾರ್ಯ. ಕಂಪೆನಿಗಳು ವಿದ್ಯುತ್ ಖರೀದಿಗೆ ಹಿಂದೇಟು ಹಾಕಿದರೆ ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗಲಿದೆ’ ಎಂದು ಎಚ್ಚರಿಸಿದರು.
ನವೀಕರಿಸಬಹುದಾದ ಇಂಧನ ದರ ಪರಿಷ್ಕರಣೆ: ‘ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ ಖರೀದಿ ದರವನ್ನು ಆಯೋಗವು ಶೇಕಡ 22ರಷ್ಟು ಹೆಚ್ಚಿಸಿದೆ. ಸಕ್ಕರೆ ಕಾರ್ಖಾನೆಯ ಸಹವಿದ್ಯುತ್ (ಕೋ ಜನರೇಷನ್) ಉತ್ಪಾದನಾ ಘಟಕಗಳ ವಿದ್ಯುತ್ ಖರೀದಿ ದರವನ್ನು ಶೇ 42ರಷ್ಟು ಹೆಚ್ಚಳ ಮಾಡಲಾಗಿದೆ. ಆದರೆ ಈ ದರ 2015 ಜನವರಿ 1ರ ನಂತರ ಆರಂಭವಾಗುವ ಘಟಕಗಳಿಗೆ ಮಾತ್ರ ಅನ್ವಯಿಸಲಿದೆ. ಹಿಂದೆ ಸ್ಥಾಪನೆಯಾದ ಘಟಕಕ್ಕೆ ಹಳೆ ದರವೇ ಮುಂದುವರಿಯಲಿದೆ ಎಂದು ಹೇಳಿದರು.
ಸೌರ ವಿದ್ಯುತ್ ದರ ಇಳಿಕೆ: ಪವನ ವಿದ್ಯುತ್ ಉತ್ಪಾದನಾ ಘಟಕಗಳ ವಿದ್ಯುತ್ ಖರೀದಿ ದರ ವನ್ನು ಪ್ರತಿ ಯೂನಿಟ್ಗೆ 3.70ರಿಂದ 4.20 ಹೆಚ್ಚಳ ಮಾಡಲಾಗಿದೆ. ಸೌರ ವಿದ್ಯುತ್ ಘಟಕಗಳಿಂದ ಖರೀದಿಸುವ ವಿದ್ಯುತ್ ದರವನ್ನು 14.50 ರಿಂದ 8.40ಕ್ಕೆ ಇಳಿಸಲಾಗಿದೆ.