ಮಂಗಳೂರು,ಜ.01 : ಕರ್ನಾಟಕ ಕಾಂಗ್ರೆಸ್ ಸರಕಾರದ ಹಿಂದೂ ಧಮನ ನೀತಿಯ ವಿರುದ್ಧ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ಮಂಗಳೂರು ಘಟಕದ ಅಶ್ರಯದಲ್ಲಿ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನೇತ್ರತ್ವದಲ್ಲಿ ಹಾಗೂ ಸಾಧು ಸಂತರ ಸಹಭಾಗಿತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯು ಗುರುವಾರ ದ.ಕ.ಜಿಲ್ಲಾಧಿಕಾರಿ ಮುಂಭಾಗ ನಡೆಯಿತು.
ಮಠ ಮಂದಿರದ ಕುರಿತಂತೆ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಸರಕಾರ ಮಂಡಿಸಿದ ಮಸೂದೆಯನ್ನು ಅಧಿಕೃತವಾಗಿ ಹಿಂದಕ್ಕೆ ಪಡೆಯವ ವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪೇಜಾವರದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಪ್ರಸ್ತುತ ಕಾಂಗ್ರೆಸ್ ಸರಕಾರ ಕೇವಲ ಒಂದು ಧರ್ಮವನ್ನು ಮಾತ್ರ ಗುರಿಯಾಗಿಸಿ ಕಾನೂನು ರೂಪಿಸಲು ಹೊರಟಿದೆ. ಎಲ್ಲ ಧರ್ಮದವರಿಗೂ ಅನ್ವಯವಾಗುವ ನಿಟ್ಟಿನಲ್ಲಿ ಮಸೂದೆ ಅನುಷ್ಠಾನ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಯಾರೂ ನೀಡುತ್ತಿಲ್ಲ. ಜಾತ್ಯತೀತರು ಎಂದು ಹೇಳುವ ಇವರು ಬೇರೆಯೇ ಕೆಲಸ ಮಾಡು ತ್ತಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದರು.
ದೇಶದಲ್ಲಿ ಇದುವರೆಗೆ ನಡೆದಿದ್ದ ಮತಾಂತರದ ಬಗ್ಗೆ ಮಾತನಾಡದವರು ಇದೀಗ ಮರು ಮತಾಂತರದ ಬಗ್ಗೆ ಗಲಾಟೆ ಮಾಡುತ್ತಿದ್ದಾರೆ. ಹಿಂದೂಗಳಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಒಂದು ನ್ಯಾಯ ಎಂಬಂತಾಗಿದೆ. ಎಲ್ಲಾ ಧರ್ಮದವರು, ಪಕ್ಷದವರು ಜತೆಯಾಗಿ ಬಲವಂತದ ಮತಾಂತರ ನಿಷೇಧ ಕಾನೂನಿಗೆ ಬೆಂಬಲ ನೀಡಬೇಕು ಎಂಬುದು ನಮ್ಮ ನಿಲುವು. ಆದರೆ ಇದಕ್ಕೆ ಯಾರೂ ಒಪ್ಪಲು ಸಿದ್ಧರಿಲ್ಲ ಎಂದು ಸ್ವಾಮೀಜಿ ಹೇಳಿದರು.
ಪುತ್ತೂರಿನಲ್ಲಿ ಕಾಂಗ್ರೆಸ್ನವರು ಹಿಂದೂ ಸಂಘಟನೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಕಾಂಗ್ರೆಸ್ನವರು ಹಿಂದೂ ಸಂಘಟನೆ ಮಾಡಿದಲ್ಲಿ ನಾವು ಬೆಂಬಲ ನೀಡಲು ಸಿದ್ಧರಿದ್ದೇವೆ. ಕಾಂಗ್ರೆಸ್ ಸರಕಾರ ಎಲ್ಲಾ ಧರ್ಮವನ್ನು ಸಮಾನವಾಗಿ ನೋಡಿಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ಅಭಿನಂದಿಸುತ್ತೇವೆ ಎಂದು ಪೇಜಾವರ ಶ್ರೀ ಹೇಳಿದರು.
ಕೊಲ್ಯ ಶ್ರೀ ರಮಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಬಾಳೆಕುದ್ರು ಶ್ರೀ ನೃಸಿಂಹ ಸ್ವಾಮೀಜಿ, ಕರಿಂಜ ಶ್ರೀ ಮುಕ್ತಾನಂದ ಸ್ವಾಮೀಜಿ ಮುಂತಾದವರು ಸರಕಾರದ ಕ್ರಮ ಖಂಡಿಸಿ ಮಾತನಾಡಿದರು.
ವಿಎಚ್ಪಿ ಪ್ರಮುಖರಾದ ಪ್ರೊ.ಎಂ.ಬಿ. ಪುರಾಣಿಕ್, ಜಗದೀಶ ಶೇಣವ, ಜಿತೇಂದ್ರ ಕೊಟ್ಟಾರಿ, ಕೃಷ್ಣಮೂರ್ತಿ, ಪಿ.ಎ.ಭಟ್, ಸುಪ್ರಸಾದ್ ಶೆಟ್ಟಿ, ಗೋಪಾಲ್ ಮುಂತಾದವರು ಉಪಸ್ಥಿತರಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಶರಣ್ ಪಂಪ್ವೆಲ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಭುಜಂಗ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.