ಬೆಂಗಳೂರು: ‘ಕಲಾತ್ಮಕ ಚಿತ್ರವೆಂದರೆ ಶೂ ಒಳಗೆ ಸೇರಿದ ಕಲ್ಲಿನಂತೆ. ಶೂ ಒಳಗಡೆ ಕಲ್ಲಿದ್ದಾಗ ನಡೆಯುತ್ತಲೇ ನೋವು ಅನುಭವಿಸಬೇಕು. ಹಾಗೆಯೇ ಸಮಾಜದ ನೋವು ಕಲಾತ್ಮಕ ಚಿತ್ರದಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ’ ಎಂದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.
ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿ ಗುರುವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಚೋಮನ ನೋವಿಗೆ ದನಿ ಯಾಗುವುದು ಯಾವುದೇ ವೀಣೆ ಯಾಗಲಿ, ಕೊಳಲಾಗಲಿ, ಮೃದಂಗ ವಾಗಲಿ ಅಲ್ಲ. ಆತನ ನೋವನ್ನು ಅಭಿವ್ಯಕ್ತಿಗೊಳಿಸಲು ದುಡಿಯೇ ಬೇಕು. ಬಿ.ವಿ. ಕಾರಂತರು ಸಂಗೀತದಲ್ಲಿ ಅದನ್ನು ಅತ್ಯಂತ ಸಮರ್ಥವಾಗಿ ಬಳಸಿ ಕೊಂಡರು’ ಎಂದು ವ್ಯಾಖ್ಯಾನಿಸಿದರು.
‘ಕಲಾತ್ಮಕ ಸಿನಿಮಾ ಮಾಡುವು ದೆಂದರೆ ಪ್ರವಾಹದ ವಿರುದ್ಧ ಈಜಿದಂತೆ. ಸಮುದಾಯದ ಜತೆ ಸಂಬಂಧ ಬೆಳೆಸಿಕೊಂಡು ಸಮಾಜದ ದೋಷವನ್ನು ಅದು ಹೇಳಬೇಕು. ಸುತ್ತಲಿನ ಆಗು– ಹೋಗುಗಳಿಗೆ ನಾವು ಸಿನಿಮಾ ಮೂಲಕವೂ ಸ್ಪಂದಿಸಬೇಕು’ ಎಂದು ಹೇಳಿದರು.
‘ಸಮಾಜದ, ಸಾಹಿತ್ಯದ, ರಾಜಕೀ ಯದ ನಡೆಗಳಿಗೆ ಸಂವಾದಿಯಾಗಿ ನಾನು ಚಿತ್ರ ಮಾಡಿದ್ದೇನೆ. ಇಂತಹ ಯತ್ನವನ್ನು ನಾನು ಸಾಂಸ್ಕೃತಿಕ ವಾಗ್ವಾದ ಎನ್ನುತ್ತೇನೆ. ಉದಾಹರಣೆಗೆ ಯಾವುದೇ ಅನ್ಯಾಯ ನಡೆದಾಗ ನಾನು ಧರಣಿ ಕೂರದೇ ಇರಬಹುದು. ಚಿತ್ರ ತೆಗೆಯುವ ಮೂಲಕ ಪ್ರತಿಭಟಿಸುತ್ತೇನೆ’ ಎಂದು ವಿಶ್ಲೇಷಿಸಿದರು.
‘ಜಗತ್ತಿನ ತುಂಬಾ ಹೊಸ ಪ್ರಯೋಗ ಗಳು ನಡೆಯುತ್ತಿವೆ. ಸಿನಿಮಾ ವ್ಯಾಕರಣ ವೂ ಬದಲಾಗುತ್ತಿದೆ. ನಾವು ಕೂಪ ಮಂಡೂಕರಾಗದೆ ಅದನ್ನೆಲ್ಲ ಗಮನಿಸ ಬೇಕಿದೆ’ ಎಂದು ತಿಳಿಸಿದರು. ‘ಕಲೆ ಎಂದಿಗೂ ರಕ್ತಗತವಾಗಿ ಬರುವುದಿಲ್ಲ. ಅದನ್ನು ನಾವು ಶ್ರಮ ವಹಿಸಿ ರೂಢಿಸಿಕೊಳ್ಳಬೇಕು. ರಕ್ತಗತ ವಾಗಿ ಬರುವುದು ಕಾಯಿಲೆಯೊಂದೇ’ ಎಂದು ತಮಾಷೆ ಮಾಡಿದರು. ‘ನಾವು ಚಿಕ್ಕವರಿದ್ದಾಗ ಸಿನಿಮಾ ಕ್ಷೇತ್ರ ಒಂದು ನಿಕೃಷ್ಟ ಮಾಧ್ಯಮ ಎಂಬ ಭಾವ ಇತ್ತು. ಈಗ ಅದನ್ನೊಂದು ಶಾಸ್ತ್ರೀಯ ಕಲೆಯಾಗಿ ಪರಿಗಣಿಸಲಾಗುತ್ತಿದ್ದು, ಶಿಸ್ತು ಮೂಡುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು.
‘ಬಜೆಟ್ ಶಿಸ್ತು ರೂಢಿಸಿಕೊಂಡರೆ ಸಿನಿಮಾ ತೆಗೆಯುವಾಗ ಕೈಸುಟ್ಟು ಕೊಳ್ಳುವ ಪ್ರಮೇಯ ಬರುವುದಿಲ್ಲ’ ಎಂದು ಕಿವಿಮಾತು ಹೇಳಿದರು.
ಮತ್ತೊಬ್ಬ ನಿರ್ದೇಶಕ ಬಿ.ಸುರೇಶ್, ಚಿತ್ರ ಮಾಡಲು ಹೊರಡುವ ಮುನ್ನ ನಾವು ಯಾರಿಗಾಗಿ ಅದನ್ನು ನಿರ್ಮಾಣ ಮಾಡುತ್ತಿದ್ದೇವೆ ಎನ್ನುವ ಸ್ಪಷ್ಟ ಅರಿವು ಇರಬೇಕು. ಇಲ್ಲದಿದ್ದರೆ ಸೋಲು ಶತಃಸಿದ್ಧ’ ಎಂದು ಹೇಳಿದರು. ‘ಮಾರು ಕಟ್ಟೆ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಬಳಿಕವೇ ದುಡ್ಡು ಹಾಕಬೇಕು’ ಎಂದು ಸಲಹೆ ನೀಡಿದರು.
‘ಕನ್ನಡ ಚಲನಚಿತ್ರ ರಂಗದಲ್ಲಿ ಜನ ನೋಡುವ, ನೋಡಲೇಬೇಕಾದ ಎರಡೂ ವಿಧದ ಚಿತ್ರಗಳಿವೆ. ಮೊದ ಲನೆಯ ವರ್ಗದ ಸಿನಿಮಾ ಪ್ರೇಕ್ಷಕರನ್ನು ಸೆಳೆದರೆ, ಎರಡನೆಯ ವರ್ಗದ ಸಿನಿಮಾದತ್ತ ಪ್ರೇಕ್ಷಕರನ್ನು ತಳ್ಳಬೇಕಾ ಗುತ್ತದೆ. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ಪುಶ್–ಪುಲ್ ಸಿನಿಮಾಗಳಿವೆ’ ಎಂದು ವಿವರಿಸಿದರು. ಇನ್ನೊಬ್ಬ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಹಾಜರಿದ್ದರು.
ಸೆನ್ಸಾರ್ ಮಂಡಳಿ ವಿರುದ್ಧ ಆಕ್ರೋಶ
‘ಕಲಾವಿದ ಬಾಬು ಈಶ್ವರ್ ಪ್ರಸಾದ್ ನಿರ್ದೇಶನದ ಮೊದಲ ಚಿತ್ರ ‘ಗಾಳಿಬೀಜ’ದ ಕಥೆ ಅರ್ಥವಾಗು ವುದಿಲ್ಲ ಎಂಬ ಕಾರಣ ನೀಡಿ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ನೀಡದಿರು ವುದು ಬೇಜವಾಬ್ದಾರಿತನದ ನಡೆ’ ಎಂದು ಗಿರೀಶ್ ಕಾಸರವಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
‘ನಾನೂ ಚಿತ್ರವನ್ನು ನೋಡಿದ್ದೇನೆ. ಅದೊಂದು ಭಿನ್ನ ಪ್ರಯೋಗ. ಸಿನಿಮಾ ಜಗತ್ತಿನಲ್ಲಿ ನಡೆಯುತ್ತಿರುವ ಪ್ರಯೋಗಗಳ ಕಲ್ಪನೆ ಇಲ್ಲದಿದ್ದರೆ ಹೀಗೇ ಆಗುವುದು. ಕಥೆ ಅರ್ಥವಾಗುತ್ತಿಲ್ಲ ಎನ್ನುವುದು ನೋಡುವವರ ಸಮಸ್ಯೆ. ಸಿನಿಮಾ ನಿರ್ಮಾಣ ಮಾಡುವವ ರದಲ್ಲ. ಈ ಕಾರಣದಿಂದ ಹೊಸ ಯತ್ನವನ್ನು ನಿರಾಕರಿಸುವುದು ಸರಿಯಾದ ನಡೆಯಲ್ಲ’ ಎಂದು ಹೇಳಿದರು.