ಮಂಗಳೂರು : ನಗರದ ಮಂಗಳಾ ಕ್ರೀಡಾಂಗಣ ಸಮೀಪದ ಕರಾವಳಿ ಉತ್ಸವ ಮೈದಾನದಲ್ಲಿ ಹಲವಾರು ವಿಶೇಷತೆಗಳೊಂದಿಗೆ ಡಿ.23ರಂದು ಆರಂಭಗೊಂಡಿರುವ ದ.ಕ.ಜಿಲ್ಲಾ ಕರಾವಳಿ ಉತ್ಸವಕ್ಕೆ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟೋಟ ಸ್ಫರ್ಧೆಗಳು, ಬೀಚ್ ಉತ್ಸವ ಹಾಗೂ 45 ದಿನಗಳ ವಸ್ತು ಪ್ರದರ್ಶನಗಳೊಂದಿಗೆ ವೈವಿಧ್ಯಮಯವಾಗಿ ನಡೆಯುತ್ತಿದೆ ಎಂದು ಕರಾವಳಿ ಉತ್ಸವದ ವಸ್ತು ಪ್ರದರ್ಶನದ ವ್ಯವಸ್ಥಾಪಕರಾದ ಬಿ. ಅಶೋಕ್ ಕುಮಾರ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಉತ್ಸವ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿದ್ದ ವಿವಿಧ ಕಾರ್ಯಕ್ರಮಗಳು ಜ.1 ರಂದು ಮುಕ್ತಯಗೊಂಡಿದ್ದು, ದ.ಕ ಜಿಲ್ಲಾ ಕರಾವಳಿ ಉತ್ಸವದ ಅಂಗವಾಗಿ ಏರ್ಪಡಿಸಿರುವ ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಫೆ.8ರವರೆಗೆ ಮುಂದುವರಿಯಲಿದೆ ಎಂದು ಹೇಳಿದರು.
ಈ ಬಾರಿ ಆಕರ್ಷಕ ಹಾಗೂ ವಿಶೇಷ ರೀತಿಯಲ್ಲಿ ವಸ್ತು ಪ್ರದರ್ಶನವನ್ನು ಅಯೋಜಿಸಲಾಗಿದೆ. 31 (ಪೆವಿಲಿಯನ್) ದೊಡ್ಡ ಮಳಿಗೆಗಳು, 30 ಸಣ್ಣ ಮಳಿಗೆಗಳು, 14 ವಿಶೇಷ ಮಳಿಗೆಗಳಿಂದ ಕೂಡಿರುವ ಈ ಬಾರಿಯ ವಸ್ತು ಪ್ರದರ್ಶನದಲ್ಲಿ ವಿಭಿನ್ನ ತೆರನಾದ ನಾನಾ ಪ್ರಕಾರಗಳ ವಸ್ತುಗಳು ಮಾರಾಟಕ್ಕಿವೆ ಎಂದರು.
ಗ್ರಾಹಕರ ಅಭಿಲಾಷೆಗೆ ತಕ್ಕಂತ ಹ್ಯಾಂಡ್ಲೂಮ್ಸ್, ಪ್ಲಾಸ್ಟಿಕ್ ಉತ್ಪನ್ನಗಳು, ಗೃಹೋಪಯೋಗಿ ವಸ್ತುಗಳು, ಕುಸುರಿ ಸಂಬಂಧಿತ ಕಲಾ ಪ್ರಕಾರಗಳು ವಸ್ತು ಪ್ರದರ್ಶನದಲ್ಲಿ ಲಭ್ಯವಿದೆ. ಈ ಎಲ್ಲಾ ವಸ್ತುಗಳು ಕರಾವಳಿ ಉತ್ಸವ ಮೈದಾನದಲ್ಲಿ ಒಂದೇ ಕಡೆ ಸಿಗುವುದರಿಂದ ಗ್ರಾಹಕರು ಬೇರೆ ಬೇರೆ ಕಡೆ ಹೋಗಿ ವಸ್ತುಗಳನ್ನು ಖರೀದಿ ಮಾಡುವ ಅಗತ್ಯವಿಲ್ಲ.
ಮಾತ್ರವಲ್ಲದೇ ವಿವಿಧ ಸರಕಾರಿ ಇಲಾಖೆಗಳ ಆಕರ್ಷಕ ಮಳಿಗೆಗಳು ಸೇರಿದಂತೆ ಕರಾವಳಿ ಭಾಗದ ನಾನಾ ಪ್ರಕರದ ತಿಂಡಿ – ತಿನಿಸುಗಳು, ಬಗೆಬಗೆಯ ಖಾದ್ಯಗಳು, ಮೀನು, ಕೋಳಿಗೆ ಸಂಬಂಧಿಸಿದ ಖಾದ್ಯದ ವಿವಿಧ ಪ್ರಕಾರಗಳು ಇಲ್ಲಿ ಲಭ್ಯವಿದೆ. ಜೊತೆಗೆ ಅರಣ್ಯ ಇಲಾಖೆಯವರು ಪುಟ್ಟದಾಗಿ ನಿರ್ಮಿಸಿರುವ ಅರಣ್ಯ ಪ್ರಮುಖ ಆಕರ್ಷಣೆಯಾಗಿದ್ದು, ಸಾರ್ವಜನಿಕರ ಮನಸೂರೆಗೊಳ್ಳುವಂತೆ ಮಾಡಿದೆ ಎಂದರು.
ಪ್ರತೀ ದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು:
ಝಗಮಗಿಸುವ ವಸ್ತು ಪ್ರದರ್ಶನದೊಂದಿಗೆ ಪ್ರತೀ ದಿನ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ತಂಡದ ಕಲಾವಿದರಿಂದ ಕಲಾ ರಸದೌತಣ ನಡೆಯಲಿದೆ. ಮಕ್ಕಳು ಹಾಗೂ ಯುವ ಸಮೂಹಕ್ಕಾಗಿ ಎಮ್ಯೂಸ್ಮೆಂಟ್, ಟೊರಟೊರ, ಡ್ರ್ಯಾಗನ್ ಟ್ರೈನ್, ಕೊಲಂಬಸ್, ಝಿಗ್ಝಾಗ್, ಚಾಂದ್ ತಾರಾ, ಆಕ್ಟೋಪಸ್ ಸೇರಿದಂತೆ ನಾನಾ ರೀತಿಯ ವಿಶೇಷತೆಗಳನ್ನು ಈ ಬಾರಿಯ ಕರಾವಳಿ ಉತ್ಸವದ ವಸ್ತುಪ್ರದರ್ಶನದಲ್ಲಿ ಕಾಣ ಬಹುದು ಎಂದು ಅಶೋಕ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ಉತ್ಸವ ವಸ್ತು ಪ್ರದರ್ಶನದ ಇನ್ನೋರ್ವ ಸಂಯೋಜಕರಾದ ಸಲಾಂ ಎಮ್ಮೆಕೆರೆ ಉಪಸ್ತಿತರಿದ್ದರು.