ಮೂಡುಬಿದಿರೆ,ಡಿ.27 : ಅತೀ ವೇಗದಲ್ಲಿ ಬರುತ್ತಿದ್ದ ಖಾಸಗಿ ಬಸ್, ದ್ವಿಚಕ್ರ ವಾಹನವೊಂದಕ್ಕೆ ಹಿಂಭಾಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ಮೂಡಬಿದಿರೆಯ ತಹಸೀಲ್ದಾರ್ ಕಚೇರಿ ಬಳಿಯಿರುವ ಪೆಟ್ರೋಲ್ ಬಂಕ್ ಎದುರು ನಡೆದಿದೆ.
ಮಿಜಾರು ಕನಕಬೆಟ್ಟು ನಿವಾಸಿ ಮಂಜಪ್ಪ ಮೂಲ್ಯರ ಪುತ್ರ ಶ್ರೀಕಾಂತ್( 42) ಹಾಗೂ ಅವರ ಪತ್ನಿ ಕುಸುಮ (37) ಮಿಜಾರು ಕಡೆಯಿಂದ ಮೂಡುಬಿದರೆಯತ್ತ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಮಂಗಳೂರಿನಿಂದ ಮೂಡುಬಿದಿರೆಗೆ ಬರುತ್ತಿದ್ದ ರೆಷ್ಮಾ ಎಕ್ಸಪ್ರೆಸ್ ಎಂಬ ಬಸ್ ತಹಸೀಲ್ದಾರ್ ಕಚೇರಿ ಬಳಿಯ ಪೆಟ್ರೋಲ್ ಬಂಕ್ ಮುಂಭಾಗ ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಕುಸುಮ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಸಾವನ್ನಪ್ಪಿದರು .
ಶ್ರೀಕಾಂತ್ ಅವರಿಗೆ ಗಂಭೀರ ಗಾಯವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಘಟನೆ ವೇಳೆ ಪ್ರಜ್ಞಾ ಹೀನರಾಗಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಶ್ರೀಕಾಂತ್ ಅವರು ಗಂಜಿಮಠದಲ್ಲಿ ಅನಂತ ಪ್ರಿಂಟರ್ಸ್ ಎನ್ನುವ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದರು. ಅಪಘಾತದ ಕೆಲವೇ ನಿಮಿಷಗಳ ಮುಂಚೆ ಮಿಜಾರು ಬಳಿ ಇದೇ ಬಸ್ ಅತೀ ವೇಗದಿಂದ ಬರುತ್ತಿದ್ದು, ಕಾರೊಂದಕ್ಕೆ ಡಿಕ್ಕಿ ಹೊಡೆಯುವುದರಲ್ಲಿತ್ತು ಎಂಬ ಮಾಹಿತಿಯನ್ನು ಕಾರು ಚಾಲಕ ಸುಧಾಕರ ಪೂಂಜ ತಿಳಿಸಿದ್ದಾರೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರ ಸುವ್ಯವಸ್ಥೆಗೆ ಅನುವು ಮಾಡಿಕೊಟ್ಟಿದ್ದು, ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.