ಕುಂದಾಪುರ: ಮನೆಯವರ ಒತ್ತಾಯಕ್ಕೆ ಮಣಿದು 6 ತಿಂಗಳ ಹಿಂದೆ ಮನೆಯವರು ನಿಶ್ಚಯಿಸಿದ ಹುಡುಗನೊಂದಿಗೆ ವಿವಾಹವಾಗಿದ್ದ 18 ವರ್ಷದ ಯುವತಿಯೋರ್ವಳು ಗಂಡನ ಮನೆಯಿಂದ ಇತ್ತೀಚೆಗೆ ಮುನಿಸಿಕೊಂಡು ಬಂದು ತವರು ಮನೆಯಿಂದ ಗುರುವಾರದಿಂದ ಕಾಣೆಯಾಗಿ ಲಾರಿಯಲ್ಲಿ ಕುಂದಾಪುರಕ್ಕೆ ಬಂದು ಇಲ್ಲಿ ವಾಪಾಸು ಮನೆಗೆ ಮರಳುವಾಗ ದಾಂಧಲೆಯಾಗಿ ಜನರ ಕೈಗೆ ಸಿಕ್ಕು ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಟಕೀಯ ಪ್ರಸಂಗ ನಡೆದಿದೆ.
ಬೆಳಗಾಂ ಕೆ.ಕೆ.ಪುರ ಮೂಲದ 18 ವರ್ಷದ ಯುವತಿ ಹಾಗೂ ಅದೇ ಊರಿನವನಾದ ವ್ರತಿಯಲ್ಲಿ ಲಾರಿ ಚಾಲಕನಾದ ರಾಜೀವ ನಾಯ್ಕ್ (32) ಎನ್ನುವವರೇ ಈ ನಾಟಕದ ಪಾತ್ರಧಾರಿಗಳಾಗಿದ್ದಾರೆ.
ಆಗಿದ್ದಾದರೂ ಏನು?: ಬೆಳಗಾಂ ಮೂಲದ ಈ ಯುವತಿಗೆ ವಿವಾಹ ಪೂರ್ವದಲ್ಲಿ ಇನ್ನೋರ್ವ ಯುವಕನೊಂದಿಗೆ ಪ್ರೀತಿಯಿತ್ತಾದರೂ ಮನೆಯವರ ಒತ್ತಾಯದ ಮೇರೆಗೆ ಕಳೆದ ೬ ತಿಂಗಳ ಹಿಂದೆ ಇನ್ನೋಬ್ಬಾತನನ್ನು ವಿವಾಹವಾಗಿದ್ದಳು. ನಿತ್ಯ ವಿರಸದಲ್ಲೇ ಸಾಗುತ್ತಿದ್ದ ಈ ಜೀವನ ಬೇಡವೆನಿಸಿದ ಆಕೆ ತಗಾದೆ ತಗೆದು ಮೂರ್ನಾಲ್ಕು ದಿನಗಳ ಹಿಂದಷ್ಟೇ ತವರಿಗೆ ವಾಪಾಸಾಗಿದ್ದಳಂತೆ. ಆದರೇ ಮನೆಯಿಂದ ಗುರುವಾರ ಕಾಣೆಯಾಗಿದ್ದ ಈಕೆ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರಕ್ಕೆ ಲಾರಿಯಲ್ಲಿ ಬಂದಿಳಿದು ಇನ್ನೊಂದು ರಾದ್ಧಾಂತ ಸ್ರಷ್ಟಿಸಿ ತಾನೂ ಹಾಗೂ ತನ್ನನ್ನು ಕರೆತಂದ ಲಾರಿ ಚಾಲಕನ ಸಮೇತ ಪತ್ತೆಯಾಗಿದ್ದಳು.
ಶುಕ್ರವಾರ ಮಧ್ಯಾಹ್ನ ನಗರದಲ್ಲಿನ “ಪ್ರತಿಷ್ಟಿತ’ ಖಾಸಗಿ ಬಸ್ಸೊಂದರ ಟಿಕೇಟು ಮಾಡುವ ಆಫೀಸೊಂದರ ಮುಂದೆ ಲಾರಿಯೊಂದು ಬಂದು ನಿಂತಿತ್ತು. ಲಾರಿಯಲ್ಲಿನ ನಿರ್ವಾಹಕ ಯುವತಿಯೋರ್ವಳನು ಆ ಅಂಗಡಿಗೆ ಕರೆತಂದಾಗ ಅದ್ಯಾವುದೇ ವಿಚಾರಕ್ಕೆ ಜಗಳ ಸಂಭವಿಸಿದ್ದು ಸ್ಥಳೀಯರು ಒಟ್ಟಾಗಿದ್ದಾರೆ. ಈ ವೇಳೆ ಕುಂದಾಪುರ ಪೊಲಿಸರು ಇಲ್ಲಿಗೆ ಆಗಮಿಸಿ ಲಾರಿ ಚಾಲಕ ಸೇರಿದಂತೆ ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಈಕೆ ಹೇಳುವ ಪ್ರಕಾರ ತಾನು ಮಾನಸಿಕವಾಗಿ ನೊಂದು ತಾಯಿ ಮನೆಬಿಟ್ಟು ಬಂದಿದ್ದು ಯಲ್ಲಾಪುರದಲ್ಲಿರುವಾಗ ತನ್ನದೇ ಊರಿನ ಲಾರಿ ಸಿಕ್ಕಿದೆ, ಅದೇ ಲಾರಿ ಹತ್ತಿ ಕುಂದಾಪುರದವರೆಗೂ ಬಂದ ವಾಪಾಸು ಬೆಳಗಾಂಗೆ ಹೋಗುವ ಸಂದರ್ಭ ಈ ಘಟನೆ ಸಂಭವಿಸಿದೆ ಎಂದಿದ್ದಾಳೆ. ಸದ್ಯ ಆಕೆ ಪೋಷಕರಿಗೆ ಪೊಲಿಸರು ಮಾಹಿತಿ ನೀಡಿದ್ದು ಅವರು ಕುಂದಪುರಕ್ಕೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿಯಿದೆ,