ಕುಂದಾಪುರ: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಡ್ಕಲ್ ಸಮೀಪದ ಹಾಲ್ಕಲ್ ಎಂಬಲ್ಲಿ ಟೂರಿಸ್ಟ್ ಬಸ್ ಹಾಗೂ ಓಮ್ನಿ ಪರಸ್ಪರ ಡಿಕ್ಕಿಯಾದ ಪರಿಣಾಮ ಎಂಟು ಮಂದಿ ಗಾಯಗೊಂಡ ಘಟನೆ ಸೋಮವಾರ ಸಂಜೆ ಹೆಮ್ಮಾಡಿ ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಗಾಯಗೊಂಡವರನ್ನು ಅಭಿಲಾಷ್(22), ರತ್ನಾಕರ್(25) ಜಲಜಾ(34), ರೈನಾ(36) ಶುಭಾ(30), ಕುಸುಮಾ(42), ನಾಗರತ್ನ (36) ಹಾಗೂ ರೇಣುಕಾ ಎಂದು ಗುರುತಿಸಲಾಗಿದೆ.
ಓಮ್ನಿ ಕುಂದಾಪುರದಿಂದ ಕೊಲ್ಲೂರು ಕಡೆಗೆ ಪ್ರಯಾಣಿಸುತ್ತಿತ್ತು. ಬಸ್ ಕೊಲ್ಲೂರಿನಿಂದ ಕುಂದಾಪುರದ ಕಡೆಗೆ ಪ್ರಯಾಣಿಸುತ್ತಿತ್ತು. ಎರಡೂ ವಾಹನಗಳು ಅತೀ ವೇಗದಿಂದ ಚಲಿಸುತ್ತಿದ್ದು ತಿರುವಿನಲ್ಲಿ ಪರಸ್ಪರ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಾಯಗೊಂಡವರೆಲ್ಲರೂ ಓಮ್ನಿ ಕಾರಿನಲ್ಲಿ ಸಿದ್ದಾಪುರದಲ್ಲಿ ನಡೆದ ಯಕ್ಷಗಾನ ಹರಕೆ ಆಟದ ಊಟ ಮುಗಿಸಿ ವಾಪಾಸ್ಸಾಗುತ್ತಿದ್ದರು. ಕಾರಿನಲ್ಲಿದ್ದ ವಿದ್ಯಾ ಎಂಬುವರು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ.
ಗಾಯಗೊಂಡವರನ್ನು ಕುಂದಾಪುರದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.