ಮಂಗಳೂರು,ಡಿ.22 : ಈ ಬಾರಿಯ ಕರಾವಳಿ ಉತ್ಸವಕ್ಕೆ ರಾಜ್ಯ ಸರಕಾರ 50 ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಹೇಳಿದರು. ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಕರಾವಳಿ ಉತ್ಸವ ಪೂರ್ವಬಾವಿ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಮಾರು ಒಂದುವರೆ ಕೋಟಿ ರೂ. ವೆಚ್ಚದಲ್ಲಿ ಕರಾವಳಿ ಉತ್ಸವವನ್ನು ನಡೆಸಲು ತೀರ್ಮಾನಿಸಲಾಗಿದ್ದು, ಕರಾವಳಿ ಉತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುವುದು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ತಿಳಿಸಿದರು.
ದಿನಾಂಕ 23-12-2014 ರಿಂದ 01-012-2015 ರವರೆಗೆ ಸುಮಾರು 10 ದಿನಗಳ ಕಾಲ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿರುವ ದ.ಕ.ಜಿಲ್ಲಾ ಕರಾವಳಿ ಉತ್ಸವವನ್ನು ನಾಳೆ ಸಂಜೆ ಐದು ಗಂಟೆಗೆ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಶ್ರೀ ಎನ್. ವಿನಯ ಹೆಗ್ಡೆ ಉದ್ಘಾಟಿಸಲಿರುವರು. ರಾಜ್ಯ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಶ್ರೀ.ಬಿ.ರಮಾನಾಥ ರೈ ಕರಾವಳಿ ಉತ್ಸವದ ವಸ್ತು ಪ್ರದರ್ಶನದ ಉದ್ಘಾಟನೆ ನೆರವೇರಿಸಲಿದ್ದಾರೆ.
ಅಪರಾಹ್ನ ಆರಂಭಗೊಳ್ಳಲಿರುವ ಕರಾವಳಿ ಉತ್ಸವದ ಮೆರವಣಿಗೆಯನ್ನು ಹಿರಿಯ ಸಾಹಿತಿ ಹಾಗೂ ರಂಗಭೂಮಿ ಮತ್ತು ಚಲನ ಚಿತ್ರ ನಿರ್ದೇಶಕ ಶ್ರೀ ಸದಾನಂದ ಸುವರ್ಣ ಅವರು ಉದ್ಘಾಟಿಸಿಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ವಹಿಸಲಿದ್ದಾರೆ. ಸಚಿವರಾದ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಅಭಯಚಂದ್ರ ಜೈನ್, ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದ.ಕ.ಜಿಲ್ಲಾ ಪಂಚಾಯತ್ ಅಧಕ್ಷೆ ಶ್ರೀಮತಿ ಅಶಾ ತಿಮ್ಮಪ್ಪ ಗೌಡ ಹಾಗೂ ರಾಜಕೀಯ ನೇತಾರರು, ಉದ್ಯಮಿಗಳು, ಜಿಲ್ಲೆಯ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಮಾಹಿತಿ ನೀಡಿದರು.
ಕರಾವಳಿ ಉತ್ಸವ – ವಿಶೇಷ ಆಕರ್ಷಣೆ :
ಈ ಬಾರಿಯ ಕರಾವಳಿ ಉತ್ಸವದಲ್ಲಿ ಝಗಝಗಿಸುವ ವಸ್ತು ಪ್ರದರ್ಶನ / ಪ್ರತೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು / ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಗಳು / ಸಾಹಸ ಕ್ರೀಡೆಗಳು / ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರಿಂದ ಕಲಾ ರಸದೌತಣ / ಕದ್ರಿ ಪಾರ್ಕಿನಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಇದೇ ಸಂದರ್ಭದಲ್ಲಿ ಪಣಂಬೂರು ಕಡಲ ತೀರದಲ್ಲಿ ವಿವಿಧ ಸಾಂಸೃತಿಕ ಸ್ಫರ್ಧೆ, ಗಾಳಿಪಟ ಸ್ಫರ್ಧೆ, ದೋಣಿ ವಿಹಾರ ಸೇರಿದಂತೆ ಆಕರ್ಷಣೀಯ ಬೀಚ್ ಉತ್ಸವ ಹಮ್ಮಿಕೊಳ್ಳಲಾಗಿದೆ.
ಸಭೆಯಲ್ಲಿ ಶಾಸಕ ಜೆ.ಆರ್.ಲೋಬೋ, ಮೇಯರ್ ಮಹಾಬಲ ಮಾರ್ಲ, ಉಪ ಮೇಯರ್ ಕವಿತಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾದಿಕಾರಿ ತುಳಸಿ ಮದ್ಧಿನೇನಿ, ತುಳು ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಜಾನಕಿ ಬ್ರಹ್ಮವರ್, ಕೊಂಕಣಿ ಅಕಾಡೆಮೆ ಅಧ್ಯಕ್ಷ ರಾಯ್ ಕ್ಯಾಸ್ಟೋಲಿನ್ ಮುಂತಾದವರು ಉಪಸ್ಥಿತರಿದ್ದರು.