ಮಂಗಳೂರು,ಡಿ.20: ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಏಸುಕ್ರಿಸ್ತರ ಜನ್ಮ ದಿನಾಚರಣೆಯನ್ನು ಆಚರಿಸುವ ಈ ಸಂದರ್ಭ ನಾವೆಲ್ಲರೂ ಪ್ರೀತಿ, ಸಹೋದರತೆ, ಸೌಹಾರ್ದತೆ, ಪರಸ್ಪರ ಗೌರವ ನೀಡುವ ಮೂಲಕ ಬಲಿಷ್ಠ ಸಮಾಜ ನಿರ್ಮಾಣಕ್ಕೆ ಮುಂದಾಗೋಣ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿ ಸೋಜ ಹೇಳಿದರು.
ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ವತಿಯಿಂದ ನಗರದ ಕೊಡಿಯಾಲ್ಬೈಲ್ ಬಿಷಪ್ ಹೌಸ್ನಲ್ಲಿ ನಾನಾ ಸಂಘಟನೆಗಳ ಮುಖಂಡರೊಂದಿಗೆ ಶುಕ್ರವಾರ ಕ್ರಿಸ್ಮಸ್ ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗಳೂರು ಧರ್ಮಪ್ರಾಂತ್ಯದಿಂದ ಬಡವರಿಗಾಗಿ ಒಟ್ಟು ಸುಮಾರು 160 ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಈ ಕ್ರಿಸ್ಮಸ್ಗೆ ಸುಮಾರು 24 ಮನೆಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಬಿಷಪ್ ಹೇಳಿದರು.
ಮಂಗಳೂರು ಮೇಯರ್ ಮಹಾಬಲ ಮಾರ್ಲ ಮಾತನಾಡಿ, ಏಸುಕ್ರಿಸ್ತ ಸಂದೇಶವನ್ನು ಜೀವನದಲ್ಲಿ ಪಾಲಿಸಿದಾಗ ಉತ್ತಮ ನಾಗರಿಕರಾಗಿ ಐಕ್ಯತೆ, ಸಾಮರಸ್ಯದಿಂದ ಜೀವಿಸಲು ಸಾಧ್ಯ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಜಗತ್ತಿನಲ್ಲಿ ಮುಗ್ಧ ಮಕ್ಕಳನ್ನು ಬಲಿತೆಗೆದುಕೊಳ್ಳುತ್ತಿರುವ ಪ್ರಸಕ್ತ ಸಂದರ್ಭ ಏಸು ಕ್ರಿಸ್ತನ ಶಾಂತಿ ಸಂದೇಶ ಮತ್ತೊಮ್ಮೆ ನೆನೆಪಿಸುವುದು ಅಗತ್ಯವಾಗಿದೆ. ಜಗತ್ತಿನ ಎಲ್ಲಾ ಮಕ್ಕಳ ಶ್ರೇಯಸ್ಸಿಗಾಗಿ ನಾವೆಲ್ಲರೂ ಈ ಸಂದರ್ಭ ಪ್ರಾರ್ಥಿಸೋಣ ಎಂದರು.
ಕೃಷ್ಣಾಪುರ ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಗಳ ಪ್ರಿನ್ಸಿಪಾಲರಾದ ಜೊಹರಾ ಅಬ್ಬಾಸ್, ಧರ್ಮಪ್ರಾಂತ್ಯದ ಪ್ರಧಾನ ಗುರು ಫಾ. ಡೆನ್ನಿಸ್ ಮೋರಸ್ ಪ್ರಭು,ಕ್ಯಾಥೋಲಿಕ್ ಸಭಾದ ಅಧ್ಯಕ್ಷೆ ಪ್ಲೇವಿ ಡಿಸೋಜ, ಎಂ. ನೊರೊನ್ಹಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಸುಶೀಲ್ ನೊರೊನ್ಹಾ ಸ್ವಾಗತಿಸಿದರು.