ಕನ್ನಡ ವಾರ್ತೆಗಳು

ಜೈಲು ವ್ಯವಸ್ಥೆ ಪರಿಶೀಲಿಸಿದ ಜಿಲ್ಲಾ ನ್ಯಾಯಾಧೀಶರು.

Pinterest LinkedIn Tumblr

Dc_umaa_jail__1

ಮಂಗಳೂರು, ಡಿ.16 : ಜಿಲ್ಲಾ ಕಾರಾಗೃಹ ಸಂದರ್ಶಕರ ಮಂಡಳಿಯ ಸಭೆಯ ಪ್ರಯುಕ್ತ ಮಂಗಳವಾರ ಜಿಲ್ಲಾ ಕಾರಾಗೃಹಕ್ಕೆ ಆಗಮಿಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಂ.ಜಿ. ಉಮಾ ಹಾಗೂ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಜೈಲಿನ ಒಳಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದರು.  ಜೈಲಿನ ಎಲ್ಲ ಕೋಣೆಗಳಿಗೆ ಭೇಟಿ ನೀಡಿದ ಅವರು ಕೈದಿಗಳ ಅಹವಾಲು ಆಲಿಸಿದರು. ಕೆಲವು ಸೆಲ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ಕೆಲವು ಸೆಲ್‌ಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಕೈದಿಗಳನ್ನು ಇಟ್ಟಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ಸೆಲ್‌ಗಳಲ್ಲಿಯೂ ಸಮಾನ ಸಂಖ್ಯೆಯಲ್ಲಿ ಕೈದಿಗಳನ್ನಿಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದರು.

ಜೈಲಿನ ನೀರಿನ ಬಳಕೆಯಿಂದ ತಮಗೆ ಆರೋಗ್ಯ ಸಮಸ್ಯೆಗಳಾಗಿರುವುದಾಗಿ ಕೆಲವು ಕೈದಿಗಳು ನ್ಯಾಯಾಧೀಶರು ಮತ್ತು ಜಿಲ್ಲಾಧಿಕಾರಿಗಳಿಗೆ ಅಹವಾಲು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಜೈಲಿನ ನೀರಿನ ಗುಣಮಟ್ಟವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ತನಗೆ ವರದಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಇನ್ನು ಮುಂದೆ ಪ್ರತೀ ತಿಂಗಳಿಗೊಮ್ಮೆ, ಕಾರಾಗೃಹದ ನೀರಿನ ಗುಣಮಟ್ಟ ಪರೀಕ್ಷಿಸಲು ತಿಳಿಸಿದರು.

Dc_umaa_jail__2

ಜೈಲಿನ ನೀರಿನ ಪೈಪುಗಳು ಒಡೆದು ಹೋಗಿ ನೀರು ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ತಕ್ಷಣವೇ ನಗರಪಾಲಿಕೆ ನೀರು ಸರಬರಾಜು ವಿಭಾಗದ ಇಂಜಿನಿಯರನ್ನು ಸ್ಥಳಕ್ಕೆ ಕರೆಸಿ, ದುರಸ್ತಿ ಕೈಗೊಳ್ಳಲು ಸೂಚಿಸಿದರು. ಕೈದಿಗಳ ಸ್ನಾನಗೃಹ ಮತ್ತು ಶೌಚಾಲಯಕ್ಕೆ ತೆರಳಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಅಲ್ಲಿ ಬಳಸುವ ನೀರಿನ ಬಣ್ಣ ಹಳದಿಯಾಗಿರುವುದನ್ನು ಗಮನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜೈಲಿನ ಅಡುಗೆಕೋಣೆಗೆ ತೆರಳಿ, ಊಟ ಮತ್ತು ಪದಾರ್ಥವನ್ನು ಸ್ವತ: ಸೇವಿಸಿ, ಪರಿಶೀಲಿಸಿದ ಜಿಲ್ಲಾಧಿಕಾರಿಯವರು, ದೈನಂದಿನ ಆಹಾರ ಪಟ್ಟಿ(ಮೆನು) ಸಿದ್ದಗೊಳಿಸಿ ಇಡಲು ಅಧಿಕಾರಿಗಳಿಗೆ ತಿಳಿಸಿದರು.

ಜೈಲಿನ ಒಳಗೆ ಇರುವ ಕೈದಿಗಳು ಯಾವುದೇ ಕೆಲಸವಿಲ್ಲದೆ ನಿರಂತರವಾಗಿ ಇರುವುದರಿಂದ ಮಾನಸಿಕ ಕ್ಷೋಭೆಗೆ ಒಳಗಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆಸಕ್ತ ಕೈದಿಗಳಿಗೆ ವೃತ್ತಿ ತರಬೇತಿ ನೀಡುವ ಕಾರ್ಯಕ್ರಮವನ್ನು ಏರ್ಪಡಿಸುವ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿಯವರು ಜೈಲು ಅಧಿಕಾರಿಗಳಿಗೆ ತಿಳಿಸಿದರು.

ಮಹಿಳಾ ಕೈದಿಗಳ ಸೆಲ್‌ಗೆ ಭೇಟಿ ನೀಡಿದ ನ್ಯಾಯಾಧೀಶರು ಮತ್ತು ಜಿಲ್ಲಾಧಿಕಾರಿಗಳು, ಅಹವಾಲು ಆಲಿಸಿದರು. ಮಹಿಳಾ ಕೈದಿಗಳ ಜತೆಗೆ ಇರುವ ಪುಟ್ಟ ಮಕ್ಕಳನ್ನು ಗಮನಿಸಿದ ಅವರು, ಆ ಮಕ್ಕಳಿಗೆ ಶಿಕ್ಷಣ ನೀಡಲು ಅವರನ್ನು ಶಾಲೆಗೆ ಸೇರಿಸಲು ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ಜೈಲು ಅಧಿಕಾರಿಗಳೊಂದಿಗೆ ಮಾತನಾಡಿದ ಜಿಲ್ಲಾ ನ್ಯಾಯಾಧೀಶ ಉಮಾ, ಕಾರಾಗೃಹದ ಒಳಗೆ ಎಲ್ಲ ವ್ಯವಸ್ಥೆಗಳನ್ನು ಅಚ್ಚಕಟ್ಟಾಗಿ ಇಡಲು ಸೂಚಿಸಿದರು. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಮಾತನಾಡಿ, ಜೈಲಿನ ಒಳಗೆ ಮೂಲಸೌಕರ್ಯಗಳ ನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವೆನ್‌ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಪಿಡಬ್ಲ್ಯುಡಿ ಕಾರ್ಯಕಾರಿ ಇಂಜಿನಿಯರ್ ಧರ್ಮರಾಜ್,ಕಾರಾಗೃಹ ಅಧೀಕ್ಷಕ ಮಹೇಶ್ ಕುಮಾರ್ ಜಿಗಣೆ, ಮಹಾನಗರಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment