ಮಂಗಳೂರು, ಡಿ.15: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ನವೆಂಬರ್ ಮಾಹೆಯಲ್ಲಿ 5 ಇಲಿಜ್ವರ ಪ್ರಕರಣಗಳು ಪತ್ತೆಯಾಗಿದ್ದು,ಇಲಿ ಜ್ವರ ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಕ್ರಮ ವಹಿಸಲು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದ್ದಾರೆ.
ಅವರು ಇಂದು ಜಿಲ್ಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜರುಗಿದ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಬೆಳ್ತಂಗಡಿ ತಾಲೂಕಿನ ವಾಣಿಯಂಬಾಡಿಯ ಪುರುಷೋತ್ತಮ ಹಾಗೂ ಸುಮಿತ್ರ ಎಂಬ ಮಕ್ಕಳಿಗೆ ಮೂತ್ರಪಿಂಡ ಸೋಂಕು ಉಂಟಾಗಿ ಅವರನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಶ್ರುಶೂಷೆಗೆ ಸೇರಿಸಲಾಗಿದ್ದು,ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ರಾವ್ ಅವರು ಸಭೆಯಲ್ಲಿ ತಿಳಿಸಿದರು.
ಡಿ.ದೇವರಾಜ ಅರಸ್ ಅಭಿವೃದ್ಧಿ ನಿಗಮದ ವತಿಯಿಂದ ಚೈತನ್ಯ ಯೋಜನೆಯಡಿ 2014-15 ನೇ ಸಾಲಿಗೆ 142 ಜನರಿಗೆ ಸ್ವ ಉದ್ಯೋಗಕ್ಕಾಗಿ ಸಾಲ ನೀಡುವ ವಾರ್ಷಿಕ ಗುರಿಯಿದು,2014 ರ ಎಪ್ರಿಲ್ನಿಂದ ನವೆಂಬರ್ ಅಂತ್ಯದ ವರೆಗೆ 119 ಜನರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ. ಅಂತೆಯೇ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ವತಿಯಿಂದ 308 ಜನರಿಗೆ ಸ್ವಾವಲಂಬನ ಯೋಜನೆಯಡಿ ಸಾಲ ನೀಡುವ ಗುರಿ ಹೊಂದಿ ನವೆಂಬರ್ ಅಂತ್ಯಕ್ಕೆ 187 ಜನರಿಗೆ ಸಾಲ ದೊರಕಿಸಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಪಶುಸಂಗೋಪನೆ ಇಲಾಖೆ ವತಿಯಿಂದ 2014-15 ನೇ ಸಾಲಿನ ನವೆಂಬರ್ ಅಂತ್ಯದ ವರೆಗೆ 43897 ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡುವ ಮೂಲಕ ಶೇಕಡಾ 111 ರಷ್ಟು ಗುರಿ ಸಾಧಿಸಲಾಗಿದೆ.ಇದೇ ಅವಧಿಯಲ್ಲಿ 1,99,539 ಕೋಳಿಗಳಿಗೆ ಕೊಕ್ಕರೆ ರೋಗಕ್ಕೆ ಹಾಗೂ 2,55,486 ರಾಸುಗಳಿಗೆ ಕಾಲುಬಾಯಿ ಜ್ವರಕ್ಕೆ ರೋಗ ನಿರೋಧಕ ಲಸಿಕೆ ನೀಡಲಾಗಿದೆಯೆಂದು ಸಭೆಗೆ ಮಾಹಿತಿ ನೀಡಲಾಯಿತು.
2010-11 ರಲ್ಲಿ ಮಂಜೂರಾಗಿರುವ ಬಸವ ವಸತಿ ಯೋಜನೆಯ ಮನೆಗಳು ಇನ್ನೂ ಪೂರ್ಣಗೊಂಡಿರದ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಅಸಮಾಧಾನ ವ್ಯಕ್ತಪಡಿಸಿ ಸಂಬಂಧಿಸಿದ ಅಧಿಕಾರಿಗಳು ಇನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸದ್ದಿದ್ದರೆ ರದ್ದು ಪಡಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ,ಸ್ಥಾಯಿ ಸಮಿತಿ ಆಧ್ಯಕ್ಷರಾದ ಚಂದ್ರಕಲಾ ,ಮೀನಾಕ್ಷಿ,ಬಾಲಕೃಷ್ಣ ಬಾಣಜಾಲು ಉಪಸ್ಥಿತರಿದ್ದರು.