ಮಂಗಳೂರು,ಡಿ.11 : ನಗರದ ಮೇರಿಹಿಲ್ ಗುರುನಗರದ ನಿವಾಸಿ ನವೀನ್ ಆಚಾರ್ಯ ಎಂಬವರು ತನ್ನ ಮನೆ ಸಮೀಪ ಕಾರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವೀನ್ ಆಚಾರ್ಯ ನಗರದ ಕಾರ್ಸ್ಟ್ರೀಟ್ನಲ್ಲಿ ಜುವೆಲ್ಲರಿ ಅಂಗಡಿ ಹೊಂದಿದ್ದು, ಸೋಮವಾರ ಬೆಳಗ್ಗೆ ಅಂಗಡಿಗೆ ಮಾರುತಿ ರಿಟ್ಜ್ ಕಾರಿನಲ್ಲಿ ತೆರಳಿದ್ದರು. ರಾತ್ರಿ 9 ಗಂಟೆಗೆ ಮನೆಗೆ ಬಾರದೆ ಇದ್ದವರನ್ನು ಗಮನಿಸಿದ ಅವರ ಪತ್ನಿ ಮೊಬೈಲ್ ಫೋನ್ಗೆ ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಮಂಗಳವಾರ ಬೆಳಗ್ಗೆ ತಮ್ಮ ಮನೆ ಸಮೀಪದಲ್ಲಿ ಕಾರು ಪತ್ತೆಯಾಗಿದ್ದು, ಅಲ್ಲಿಗೆ ಹೋಗಿ ನೋಡಿದಾಗ ನವೀನ್ ಚಾಲಕರ ಸೀಟಿನಲ್ಲಿ ಕುಳಿತುಕೊಂಡಿದ್ದಂತೆ ಕಂಡು ಬಂದರು.
ಕಾರಿನ ಬಾಗಿಲು ತೆರೆದು ನೋಡಿದಾಗ ನವೀನ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು. ಅವರ ಶರ್ಟ್ ಕಿಸೆಯನ್ನು ಪರಿಶೀಲಿಸಿದಾಗ ಅದರಲ್ಲಿ ಚೀಟಿಯೊಂದು ದೊರೆತಿದ್ದು ಅದರಲ್ಲಿ ನವೀನ್ ಆಚಾರ್ಯ ಹಸ್ತಾಕ್ಷರದಲ್ಲಿ ನನ್ನ ಸಾವಿಗೆ ಕಾರಣರಾದವರು ಶಿವಾನಂದ ಕೇತ್ಲಿ ಮೆಸ್ಕಾಂ, ನಾರಾಯಣ ಬೋಂದೆಲ್, ಟೋನಿ ಕಾಂಟ್ರಾಕ್ಟರ್, ಪುತ್ತೂರು ರಾಮಚಂದ್ರ ಆಚಾರ್ಯ ಎಂಬುದಾಗಿ ಬರೆದಿತ್ತು. ಮತ್ತು ಒಟ್ಟು 13,35,000 ನಗದನ್ನು ನಮೂದಿಸಲಾಗಿತ್ತು.
ತನ್ನ ಗಂಡನಿಗೆ ಬರಬೇಕಾದ ಹಣವನ್ನು ವಾಪಸು ನೀಡದೇ ಇದ್ದುದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನವೀನ್ ಅವರ ಪತ್ನಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.