ಮಂಗಳೂರು,ಡಿ.11 : ಶ್ರೀ ಮಂಗಳಾದೇವಿ ಕ್ರಿಯೇಶನ್ಸ್ ನಿರ್ಮಾಣದ ‘ರೈಟ್ ಬೊಕ್ಕ ಲೆಫ್ಟ್’ ಎಂಬ ಹೆಸರಿನ ‘ನಡುಟು ಕುಡೊಂಜಿ’ ಎನ್ನುವ ಶೀರ್ಷಿಕೆಯ ತುಳು ಹಾಸ್ಯ ಚಿತ್ರದ ಚಿತ್ರೀಕರಣ, ಅಡ್ಯಾರ್ನ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಡಿ. 12, 13, 14ರಂದು ನಡೆಯುವ ವಿಶ್ವ ತುಳುವೆರೆ ಪರ್ಬ ಸಂಭ್ರಮದ ವೇಳೆ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಯತೀಶ್ ಕುಮಾರ್ ಆಳ್ವ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ತುಳುವೆರೆ ಪರ್ಬ ಸಮಸ್ತ ತುಳುನಾಡಿನ ಸಂಭ್ರಮದ ಹಬ್ಬವಾಗಿದ್ದು, ಇದೇ ವೇಳೆ ತುಳುಚಿತ್ರವೊಂದು ಅದೇ ಪರಿಕಲ್ಪನೆಯಲ್ಲಿ ಚಿತ್ರೀಕರಣಗೊಂಡು, ತುಳುಪರ್ಬವು ಸಿನೆಮಾ ಮೂಲಕವಾಗಿ ಶಾಶ್ವತವಾಗಿ ಮೂಡಿಬರುವ ನೆಲೆಯಲ್ಲಿ ರೂಪುಗೊಳ್ಳಲಿದೆ ಎಂದವರು ತಿಳಿಸಿದರು.
ಧ್ವನಿಸುರುಳಿ ಬಿಡುಗಡೆ:
ಸಂದೀಪ್ ಶೆಟ್ಟಿ ನಾಯಕ ನಟರಾಗಿ, ಪ್ರಸನ್ನ ಶೆಟ್ಟಿ ಬೈಲೂರು ಇನ್ನೊಂದು ಪಾತ್ರದಲ್ಲಿ, ನಾಯಕಿಯಾಗಿ ಹರ್ಷ ಛಾಯ (ಅಶ್ವಿನಿ), ನಮಿತ ಸೇರಿದಂತೆ ಹಲವಾರು ಕರಾವಳಿಯ ಪ್ರಬುದ್ಧ ಕಲಾವಿದರು ಚಿತ್ರದಲ್ಲಿದ್ದಾರೆ. ಈಗಾಗಲೇ ಚಿತ್ರದ ಧ್ವನಿಸುರುಳಿಯನ್ನು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಬಿಡುಗಡೆ ಮಾಡಿದ್ದಾರೆ. ಮಾರ್ಚ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯಲಿದೆ. ಆ ಬಳಿಕ ಶ್ರೀ ಮಂಗಳಾದೇವಿ ಕ್ರಿಯೇಶನ್ಸ್ನಡಿ ‘ಮುಳ್ಳ ಬೇಲಿ’ ಎಂಬ ಇನ್ನೊಂದು ಸಿನೆಮಾ ಮಾಡಲಾಗುವುದು ಎಂದು ತಿಳಿಸಿದರು.
ಹಿರಿಯ ಕಲಾವಿದ ಶರಶ್ಚಂದ್ರ ಕದ್ರಿ ಮಾತನಾಡಿ, ರಂಗಭೂಮಿ ಮತ್ತು ತುಳುಚಿತ್ರರಂಗದಲ್ಲಿ ಕಳೆದ 30 ವರ್ಷಗಳಿಂದ ಸಕ್ರಿಯರಾಗಿರುವ ಯತೀಶ್ ಕುಮಾರ್ ಆಳ್ವ ಅವರು ಚಿತ್ರರಂಗದ ಎಲ್ಲ ವಿಭಾಗಗಳಲ್ಲಿ ದುಡಿದು ಪರಿಣತಿ ಹೊಂದಿದ್ದಾರೆ. ಕನ್ನಡ, ಹಿಂದಿ ಮತ್ತು ತಮಿಳು ಚಿತ್ರದಲ್ಲಿ ದುಡಿದ ಅನುಭವ ಹೊಂದಿದ್ದಾರೆ. ತುಳುವಿನಲ್ಲಿ ಪ್ರಥಮವಾಗಿ ದೂರದರ್ಶನ ಚಂದನ ವಾಹಿನಿಗಾಗಿ ‘ರೈಟ್ ಪೋಯಿ’ ಎಂಬ ಧಾರಾವಾಹಿಯನ್ನು ನಿರ್ಮಾಣ ಮತ್ತು ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕದ್ರಿ ನವನೀತ್ ಶೆಟ್ಟಿ, ಉದ್ಯಮಿಗಳಾದ ಜನಾರ್ದನ ಅರ್ಕುಳ, ಕಿರಣ್ ರೈ, ಚಿತ್ರದ ಸಂಗೀತ ನಿರ್ದೇಶಕ ಡಾ| ನಿತಿನ್ ಆಚಾರ್ಯ, ಕಾರ್ಯಕಾರಿ ನಿರ್ಮಾಪಕ ಭಾಸ್ಕರ್ ರೈ ಎಣ್ಮೂರು ಕಟ್ಟಬೀಡು ಉಪಸ್ಥಿತರಿದ್ದರು.